ನವದೆಹಲಿ: ಜಾಗತಿಕ ಆಹಾರ ಮತ್ತು ಪಾನೀಯ ತಯಾರಿಕಾ ಕಂಪನಿಗಳು ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಬೇರೆ ಬೇರೆ ಪೌಷ್ಟಿಕಾಂಶದ ಮಾನದಂಡಗಳನ್ನು ಅನುಸರಿಸುತ್ತಿರುವುದನ್ನು ಮಹಾರಾಷ್ಟ್ರದ ಎಫ್ಡಿಎ ಕಮಿಷನರ್ ತುಕಾರಾಂ ಮುಂಢೆ ತೀವ್ರವಾಗಿ ಖಂಡಿಸಿದ್ದಾರೆ. ಕಂಪನಿಗಳ ಸಾಮಾಜಿಕ ಜವಾಬ್ದಾರಿಯು ಕೇವಲ ಸ್ಥಳೀಯ ಕಾನೂನು ಪಾಲನೆಗೆ ಸೀಮಿತವಾಗಿರದೆ, ಗ್ರಾಹಕರ ಆರೋಗ್ಯದ ಮೇಲೆಯೂ ಕಾಳಜಿ ಹೊಂದಿರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬಂದ ರಾಯಿಟರ್ಸ್ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡಿದ ಅವರು, “ಕಂಪನಿಗಳ ಈ ನೀತಿಯಲ್ಲಿ ನೈತಿಕತೆ ಎಲ್ಲಿದೆ? ಜಾಗತಿಕ ಸಂಸ್ಥೆಗಳು ಕೇವಲ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ನೈತಿಕವಾಗಿ ನಡೆದುಕೊಳ್ಳಬೇಕು. ಭಾರತೀಯ ಗ್ರಾಹಕರಿಗೆ ಏಕೆ ಈ ಭಿನ್ನ ಮಾನದಂಡ?” ಎಂದು ಪ್ರಶ್ನಿಸಿದ್ದಾರೆ.
ಆಹಾರ ಪದಾರ್ಥಗಳ ಮುಂಭಾಗದಲ್ಲಿ ಆರೋಗ್ಯ ಮುನ್ನೆಚ್ಚರಿಕೆ ಲೇಬಲ್ (Front-of-Pack Warning Labels) ಹಾಕುವ ಭಾರತದ ಪ್ರಸ್ತಾಪಕ್ಕೆ ಕೊಕಾ-ಕೋಲಾ, ನೆಸ್ಲೆ ಮತ್ತು ಪೆಪ್ಸಿಕೋ ನಂತಹ ದೈತ್ಯ ಕಂಪನಿಗಳು ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಮುಂಢೆ, “ಹೆಚ್ಚಿನ ಸಕ್ಕರೆ ಅಥವಾ ಕೊಬ್ಬಿನಾಂಶವಿರುವ ಆಹಾರಗಳ ಕುರಿತು ಎಚ್ಚರಿಕೆ ಲೇಬಲ್ ಹಾಕುವುದು ಗ್ರಾಹಕರ ಬುದ್ಧಿವಂತಿಕೆಗೆ ಮಾಡುವ ಅಪಮಾನವಲ್ಲ, ಬದಲಾಗಿ ಅವರಿಗೆ ನೀಡುವ ಗೌರವ” ಎಂದು ಹೇಳಿದ್ದಾರೆ.
ಪ್ರಸ್ತುತ ಈ ಮುನ್ನೆಚ್ಚರಿಕೆ ಲೇಬಲ್ ನಿಯಮ ಜಾರಿಗೆ ತರಲು ವಿಳಂಬವಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಕಡ್ಡಾಯ ನಿಯಮ ಜಾರಿಗೆ ತರುವಂತೆ ಸೂಚಿಸಿದೆ.





Leave a comment