ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯಡಿ 2026ರ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ನೀರೆತ್ತಿ ಪ್ರಾಯೋಗಿಕ ಚಾಲನೆ ನೀಡಲು ರಾಜ್ಯ ಸರ್ಕಾರ ಅಧಿಕೃತ ಅನುಮತಿ ನೀಡಿದೆ.
ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಕೋರಿಕೆಯ ಮೇರೆಗೆ ಮತ್ತು ಜಲಾಶಯದಲ್ಲಿ ನೀರಿನ ಲಭ್ಯತೆಯನ್ನು ಪರಿಗಣಿಸಿ, ಚಿತ್ರದುರ್ಗ ಶಾಖಾ ಕಾಲುವೆಗೆ ಮೊದಲ ಬಾರಿಗೆ 3.00 ಟಿ.ಎಂ.ಸಿ (TMC) ನೀರನ್ನು ಹರಿಸಲು ನಿರ್ದೇಶಿಸಲಾಗಿದೆ.
ಈ ಯೋಜನೆಯು ಸರ್ಕಾರದ ‘100 ದಿನಗಳಲ್ಲಿ ಸಾಧಿಸಬಹುದಾದ ಪ್ರಮುಖ ಕಾರ್ಯಕ್ರಮ’ಗಳ ಪಟ್ಟಿಯಲ್ಲಿ ಸೇರಿರುವುದರಿಂದ ಇದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ಜಲಸಂಪನ್ಮೂಲ ಸಚಿವರ ಅನುಮೋದನೆಯೊಂದಿಗೆ ಜಲಸಂಪನ್ಮೂಲ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ 5.97 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕೆರೆಗಳಿಗೆ ಮತ್ತು ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸಲು ಹಾಗೂ ಕಡೂರು ಕೆರೆ ತುಂಬಿಸುವ ಯೋಜನೆಗಳ ಹಂತ-1ರ ಪ್ರಾಯೋಗಿಕ ಚಾಲನೆಗಾಗಿ ನೀರನ್ನು ಹರಿಸುವಂತೆ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಸೂಚನೆ ನೀಡಿದ್ದರು.
ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಸೂಚನೆ ಪಾಲನೆ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರನ್ನು ಹರಿಸುವ ಕುರಿತು ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು. ಜಲಾಶಯ ತುಂಬಿದ ನಂತರ ನೀರನ್ನು ಹರಿಸಲು ಅನುಮತಿ ನೀಡಲು ಸೂಕ್ತವಾಗಿರುತ್ತದೆ ಎಂದು ವರದಿ ಮಾಡಲಾಗಿದೆ.
ಪ್ರಸ್ತಾವನೆಯನ್ನು ಸರ್ಕಾರದಲ್ಲಿ ಪರಿಶೀಲಿಸಲಾಗಿ ಹಾಗೂ ಈ ಯೋಜನೆಯು ಸರ್ಕಾರದ 100 ದಿನಗಳಲ್ಲಿ ಸಾಧಿಸಬಹುದಾದ ಕಾರ್ಯಕ್ರಮದಲ್ಲಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ 3 ಟಿಎಂಸಿ ನೀರನ್ನು ಎತ್ತಿ ಮೊದಲ ಬಾರಿಗೆ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಗೆ ನೀರನ್ನು ಹರಿಸಿ ಟ್ರಯಲ್ ರನ್ ಅನ್ನು ಯಶಸ್ವಿಗೊಳಿಸುವಂತೆ ತಿಳಿಸಲು ನಿರ್ದೇಶಿತಳಾಗಿದ್ದೇನೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಎಲ್. ಆದೇಶಿಸಿದ್ದಾರೆ.





Leave a comment