ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ‘ವಂದೇ ಮಾತರಂ’ (Vande Mataram) ಗೀತೆ ಗಾಯನ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋನಿಯಾ ಗಾಂಧಿ ಅವರ ನರನಾಡಿಗಳಲ್ಲಿ ಇಟಲಿ ರಕ್ತ ಹರಿಯುತ್ತಿದ್ದು, ಅವರ ವಿಚಾರದಲ್ಲಿ ಬೇರೇನು ನಿರೀಕ್ಷಿಸಲು ಸಾಧ್ಯ ಎಂದು ಕುಮಾರಸ್ವಾಮಿ ಪ್ರಹಾರ ನಡೆಸಿದ್ದಾರೆ.
ಏನಿದು ವಂದೇ ಮಾತರಂ ವಿವಾದ?
ಕಾಂಗ್ರೆಸ್ ಕಚೇರಿ ಇಂದಿರಾ ಭವನದಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಲಾಗಿತ್ತು. ಈ ವೇಳೆ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಯಕರತ್ತ ಸನ್ನೆ ಮಾಡಿ ಹಾಡನ್ನು ತಡೆಯಲು ಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಬಹುಹೊತ್ತಿನಿಂದ ನಿಂತಿದ್ದ ಖರ್ಗೆ ಅವರಿಗೆ ಕುರ್ಚಿ ತರಿಸಲು ಸೋನಿಯಾ ಗಾಂಧಿ ಸನ್ನೆ ಮಾಡಿದ್ದರೆ ವಿನಃ ಹಾಡು ತಡೆಯಲು ಅಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿತ್ತು.
ಕುಮಾರಸ್ವಾಮಿ ಟೀಕೆ:
ಕಾಂಗ್ರೆಸ್ ನೀಡಿದ ಸ್ಪಷ್ಟನೆಯನ್ನು ತಳ್ಳಿಹಾಕಿದ ಎಚ್.ಡಿ. ಕುಮಾರಸ್ವಾಮಿ, “ಸೋನಿಯಾ ಗಾಂಧಿ ಭಾರತದ ಮೂಲದವರಲ್ಲ, ಮದುವೆಯ ನಂತರ ಇಲ್ಲಿಗೆ ಬಂದವರು. ಅವರ ರಕ್ತದಲ್ಲಿ ಇಟಲಿ ಮೂಲವೇ ಹೆಚ್ಚಾಗಿದೆ. ಅವರು ನೀಡಿರುವ ಕುರ್ಚಿಯ ನೆಪವನ್ನು ಜನ ನಂಬುವುದಿಲ್ಲ. ಜನರೇ ಸತ್ಯಾಸತ್ಯತೆಯನ್ನು ತೀರ್ಮಾನಿಸಲಿದ್ದಾರೆ” ಎಂದು ಕಿಡಿಕಾರಿದ್ದಾರೆ.
ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆಗೆ ತಿದ್ದುಪಡಿ ತರಲಾದ ಬೆನ್ನಲ್ಲೇ ಈ ಘಟನೆ ನಡೆದಿರುವುದು ದೇಶಾದ್ಯಂತ ರಾಜಕೀಯ ಕಾವು ಹೆಚ್ಚಿಸಿದೆ.





Leave a comment