ವಾರಾಣಸಿ: ‘ನನ್ನ ಬಳಿ ಇರುವ ಗನ್ನಲ್ಲಿ ಗುಂಡುಗಳಿಲ್ಲ’ ಎಂದು ತೋರಿಸಲು ಹೋದ ಪ್ರಯಾಣಿಕನೊಬ್ಬ ಪಿಸ್ತೂಲ್ನ ಟ್ರಿಗರ್ ಒತ್ತಿದ ಪರಿಣಾಮ, ಆಕಸ್ಮಿಕವಾಗಿ ಗುಂಡು ಹಾರಿ ಇಬ್ಬರು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಗಾಯಗೊಂಡಿರುವ ಘಟನೆ ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಜಂಘಡ ಮೂಲದ ಕಮಲೇಶ್ ಕೇದಾರ್ನಾಥ್ ರಾಯ್ ಎಂಬ ಪ್ರಯಾಣಿಕ ತಮ್ಮ ಪತ್ನಿಯೊಂದಿಗೆ ಮುಂಬೈಗೆ ತೆರಳುವ ಏರ್ ಇಂಡಿಯಾ ಎಕ್ಸ್ಪ್ರೆಸ್ (IX1810) ವಿಮಾನ ಏರಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು.
ಅವರ ಬಳಿ ಲೈಸೆನ್ಸ್ ಹೊಂದಿದ್ದ 7.62 mm ಪಿಸ್ತೂಲ್ ಹಾಗೂ 21 ಲೈವ್ ಕಾರ್ಟ್ರಿಡ್ಜ್ಗಳಿದ್ದವು.
ಘಟನೆ ನಡೆದಿದ್ದು ಹೇಗೆ?
ಸಾಮಾನ್ಯ ನಿಯಮಾವಳಿಯಂತೆ ಡಿಕ್ಲೇರ್ಡ್ ಆಯುಧಗಳ ದಾಖಲೆ ಹಾಗೂ ಆಯುಧ ಲೋಡ್ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಭದ್ರತಾ ತಪಾಸಣೆ ನಡೆಯುತ್ತಿತ್ತು. ಈ ವೇಳೆ ಪ್ರಯಾಣಿಕ ಕಮಲೇಶ್, “ನೋಡಿ, ಗನ್ ಲೋಡ್ ಆಗಿಲ್ಲ” ಎಂದು ಸಿಬ್ಬಂದಿಗೆ ತೋರಿಸುವ ಭರದಲ್ಲಿ ಟ್ರಿಗರ್ ಪ್ರೆಸ್ ಮಾಡಿದ್ದಾರೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ತಕ್ಷಣವೇ ಪಿಸ್ತೂಲ್ನಿಂದ ಗುಂಡು ಹಾರಿದ್ದು, ನೆಲಕ್ಕೆ ತಾಗಿ ರಿಕೋಚೆಟ್ (ಬೌನ್ಸ್) ಆದ ಪರಿಣಾಮ ತಪಾಸಣೆ ನಡೆಸುತ್ತಿದ್ದ ಸುಮಾನ್ ಕುಮಾರಿ ಹಾಗೂ ರೋಹಿತ್ ರಾಜ್ ಎಂಬ ಸಿಬ್ಬಂದಿಗೆ ಗಾಯಗಳಾಗಿವೆ.ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರ ಸ್ಥಿತಿಯೂ ಸ್ಥಿರವಾಗಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಈ ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದೆ.





Leave a comment