ಛತ್ರಪತಿ ಸಂಭಾಜಿನಗರ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ನಡುವೆ ಅವರ ನಿವಾಸದ ಬಳಿ ತೀವ್ರ ವಾಗ್ವಾದ ನಡೆದಿದೆ.
ತಮ್ಮನ್ನು ಭೇಟಿಯಾಗಲು ಬಂದಿದ್ದ ಜನರನ್ನು ಪೊಲೀಸರು ತಡೆಯುತ್ತಿದ್ದಾರೆ ಮತ್ತು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ದೀಪ್ಕೆ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, “ನಾನು ಯಾರನ್ನು ಭೇಟಿಯಾಗಬೇಕು ಎಂಬುದನ್ನು ನಿರ್ಧರಿಸಲು ನೀವ್ಯಾರು? ಪೊಲೀಸರು ಅದನ್ನು ತೀರ್ಮಾನಿಸಲು ಸಾಧ್ಯವಿಲ್ಲ, ನಾನು ಯಾರನ್ನು ಭೇಟಿಯಾಗಬೇಕೆಂದು ನಾನೇ ನಿರ್ಧರಿಸುತ್ತೇನೆ” ಎಂದು ಹೇಳುತ್ತಾ ಪೊಲೀಸ್ ಅಧಿಕಾರಿಗೆ ತಮ್ಮ ಮನೆಯಿಂದ ಹೊರಹೋಗುವಂತೆ ದೀಪ್ಕೆ ಕಿಡಿಕಾರಿದ್ದಾರೆ.
ಈ ಘಟನೆಯು ಛತ್ರಪತಿ ಸಂಭಾಜಿನಗರದ ವಾಳುಜ್ ಎಂಐಡಿಸಿ ಪ್ರದೇಶದಲ್ಲಿರುವ ಅವರ ನಿವಾಸದ ಬಳಿ ನಡೆದಿದೆ.
ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ದೀಪ್ಕೆ ವಾಪಸಾಗಿದ್ದರು.
ಮೇ ತಿಂಗಳಲ್ಲಿ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಅವರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಪೊಲೀಸರು ಭದ್ರತೆಯ ನೆಪದಲ್ಲಿ ತಮಗೆ ಬರುವ ವೀಕ್ಷಕರನ್ನು ತಡೆಯುತ್ತಿದ್ದಾರೆ ಎಂದು ದೀಪ್ಕೆ ಆರೋಪಿಸಿದ್ದಾರೆ.





Leave a comment