SUDDIKSHANA KANNADA NEWS/ DAVANAGERE/ DATE:06-01-2025
ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಜನೋತ್ಸವದ ಯಡವಟ್ಟುಗಳು ಒಂದೊಂದಾಗಿಯೇ ಹೊರಗಡೆ ಬರುತ್ತಿವೆ. ವಿಶೇಷ ಆಹ್ವಾನಿತರು ಹೋಗಿ ವಿಶೇಷ ಅವನೀತರು ಎಂಬ ನಾಮಫಲಕ
ಕಂಡು ಬಂದಿತ್ತು. ಕನ್ನಡಾಭಿಮಾನಿಗಳು, ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಆದ್ರೆ ಈಗ ಊಟದ ಅವ್ಯವಸ್ಥೆಗೆ ಯುವಜನೋತ್ಸವಕ್ಕೆ ಬಂದವರು ಗಲಾಟೆ ಎಬ್ಬಿಸಿದ್ದಾರೆ. ಊಟ ಸಿಗದೇ ಪರದಾಡಿದ್ದಾರೆ.
ನಗರದ ಎಂಬಿಎ ಗ್ರೌಂಡ್ ನಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. ರಾಜ್ಯದ 29 ಜಿಲ್ಲೆಗಳಿಂದಲೂ ಕಲಾವಿದರು, ಜನರು, ಕಲಾಸಕ್ತರು, ಯುವಜನರು ಆಗಮಿಸಿದ್ದಾರೆ. ಯುವಜನೋತ್ಸವಕ್ಕೂ ಮುನ್ನ ಮಾಂಸಾಹಾರ ಊಟದ ವ್ಯವಸ್ಥೆ ಮಾಡಲಾಗಿದೆ ಎಂಬ ಪ್ರಚಾರ ಮಾಡಲಾಗಿತ್ತು. ಆದ್ರೆ, ಈ ಊಟದ ಸವಿಗೆ ಬಂದವರ ಬಾಯಿಗೆ ಸಿಕ್ಕಿದ್ದು ರುಚಿಯಲ್ಲ. ಖಾಲಿಯಾಗಿದೆ ಎಂಬ ಸಿದ್ಧ ಉತ್ತರ!
ಆಶ್ಚರ್ಯವಾದರೂ ಸತ್ಯ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಬಾಪೂಜಿ ಎಂಬಿಎ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಯುವ ಜನೋತ್ಸವದ
ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಉದ್ಘಾಟನೆ ಮಾಡಿ ಹೋದರು. ಬೆಳಿಗ್ಗೆಯ ಉಪಾಹಾರದ ವ್ಯವಸ್ಥೆಯೂ ಅಷ್ಟಕ್ಕಷ್ಟೇ. ಕೆಲವರಿಗೆ ಸಿಕ್ಕರೆ ಮತ್ತೆ ಕೆಲವರಿಗೆ ಸಿಗಲಿಲ್ಲ. ಮತ್ತೊಂದೆಡೆ ರಾತ್ರಿ ಮಾಂಸಾಹಾರ
ಹಾಗೂ ಸಸ್ಯಹಾರದ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಲಾಗಿತ್ತು.
ಕೂಪನ್ ಜಾಸ್ತಿ, ಊಟ ಕಡಿಮೆ:
ನಾನ್ ವೆಜ್ ಊಟಕ್ಕೆಂದು ವಿತರಣೆ ಮಾಡಲಾಗಿದ್ದ ಕೂಪನ್ ಗಳು ಬಿಕರಿಯಾಗುವಂತೆ ನೀಡಲಾಗಿದೆ. ಆದ್ರೆ, ಊಟದ ವ್ಯವಸ್ಥೆ ಇದ್ದದ್ದು ಮಾತ್ರ ಸೀಮಿತ ಮಂದಿಗೆ ಮಾತ್ರ. ಕೂಪನ್ ಗಳನ್ನು ಜಾಸ್ತಿ ಹಂಚಿದವರು ಯಾರು? ಟೆಂಡರ್ ಪಡೆದವರು
ಯಾಕೆ ಊಟದ ವ್ಯವಸ್ಥೆ ಮಾಡಲಾಗಿಲ್ಲ? ಸರ್ಕಾರದ ಹಣ ಕೊಡುವುದಿಲ್ವವಾ? ಪ್ರಾಯೋಜಕರಿಂದ ಹಣ ಪಡೆದಿಲ್ವಾ? ಈ ಹಣವೆಲ್ಲಾ ಎಲ್ಲಿಗೆ ಹೋಗುತ್ತಿದೆ. ಬಂದವರ ಹೊಟ್ಟೆ ತುಂಬಿಸುವ ಕೆಲಸ ಮಾಡುವುದು ಬಿಟ್ಟು ಹಣ ತುಂಬಿಸಿಕೊಳ್ಳುವ
ಹೊಟ್ಟೆಗೆ ಹಾಕಿದ್ದು ಯಾರು ಎಂಬ ಪ್ರಶ್ನೆ ನಾಡಿನ ಮೂಲೆಮೂಲೆಗಳಿಂದ ಬಂದಿದ್ದ ಯುವಜನರ ಪ್ರಶ್ನೆಯಾಗಿತ್ತು.
ಊಟ ಸಿಗದಿದ್ದಕ್ಕೆ ಗಲಾಟೆ:
ಸ್ಪರ್ಧಿಗಳಿಗೆ ನೋಂದಣಿ ಮಾಡಿಕೊಂಡವರಿಗೆ ಉಪಾಹಾರ ಹಾಗೂ ಊಟಕ್ಕೆ ಕೂಪನ್ ಕೊಡಲಾಗಿತ್ತು. ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ರಾತ್ರಿ 8 ಗಂಟೆಗೆ ಊಟ ನೀಡಬೇಕಿತ್ತು. ಆದ್ರೆ,
ಊಟ ಬಂದಿದ್ದು ರಾತ್ರಿ 9.30ರ ಸುಮಾರಿಗೆ.
ಕೊರೆಯುವ ಚಳಿ ನಡುವೆಯೂ ಊಟ ಸಿಗುತ್ತಿದ್ದಂತೆ ಎಂದುಕೊಂಡಿದ್ದವರಿಗೆ ನಿರಾಸೆ ಕಾದಿತ್ತು. ಯಾಕೆಂದರೆ ರಾತ್ರಿ ಹತ್ತು ಗಂಟೆಯ ನಂತರ ಭಾನುವಾರವಾದ ಕಾರಣ ವಾಹನ ಹಿಡಿದುಕೊಂಡು ಹೋಗಿ ಊಟ ಮಾಡಿ ಬರಲು ಸ್ಪರ್ಧಾಳುಗಳಿಗೆ
ಕಷ್ಟವಾಗುತಿತ್ತು. ಮೊದಲೇ ಇಲ್ಲಿ ಎಲ್ಲಿ ಊಟ ಸಿಗುತ್ತದೆ ಎಂಬ ಮಾಹಿತಿ ಪಡೆಯುವುದೂ ಕಷ್ಟವಾಗಿತ್ತು.
ಬೆಳಿಗ್ಗೆ 10 ಗಂಟೆಯ ನಂತರ ಬಂದವರಿಗೆ ನೋ ಟಿಫನ್ ಎಂಬ ಸಿದ್ಧ ಉತ್ತರವೂ ರೆಡಿಯಾಗಿತ್ತು. ರಾತ್ರಿ 9.30ರ ಸುಮಾರಿನಲ್ಲಿಯೂ ಇದೇ ಸಿದ್ಧ ಉತ್ತರ ತಯಾರು ಮಾಡಿಕೊಳ್ಳಲಾಗಿತ್ತು. ರಾತ್ರಿ ತಡವಾಗಿದೆ ಊಟ ಕೊಡಿ ಎಂದು ಕೆಲವರು ಗಲಾಟೆಯನ್ನೂ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಊಟ ಮಾತ್ರವಲ್ಲ, ಹಲವು ವಿಚಾರಗಳಲ್ಲಿಯೂ ಅಸ್ತವ್ಯಸ್ತ ಕಂಡು ಬಂದಿದೆ. ಕನ್ನಡ ಭಾಷೆಯಲ್ಲಿ ಸ್ಪರ್ಧೆ ನಡೆಸದೇ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಡೆಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಒಟ್ಟಿನಲ್ಲಿ ಯುವಜನೋತ್ಸವಕ್ಕೆ ಬಂದಿದ್ದವರು ಊಟ ಸಿಗದೇ ಪರದಾಡಿದ್ದಂತೂ ಸತ್ಯ.
ಕಬಾಬ್, ರೈಸ್ ಮತ್ತು ಸಾಂಬಾರ್ ಸಿಗಲಿಲ್ಲ. ಕಬಾಬ್ ಪೀಸ್ ಇರಲಿ, ಅನ್ನ ಸಾಂಬಾರು ಸಹ ಸಿಗದೇ ಕೆಲವರು ಬಂದ ದಾರಿಗೆ ಸುಂಕಲ ಇಲ್ಲ ಎಂಬಂತೆ ವಾಪಸ್ ಹೋದರು.