ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅಪಶಬ್ದ ಬಳಸಿ ನಿಂದಿಸಿದ್ದ 15 ವರ್ಷದ ಬಾಲಕಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಂದುವರಿಸದಿರಲು ದೆಹಲಿ ಪೊಲೀಸರು ತೀರ್ಮಾನಿಸಿದ್ದಾರೆ.
ಬಾಲಕಿಯ ವಯಸ್ಸು, ಆಕೆಯ ಬಹಿರಂಗ ಕ್ಷಮೆಯಾಚನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಭಯದ ಹಿನ್ನೆಲೆಯಲ್ಲಿ ಪೊಲೀಸರು ಈ ನಿರ್ಧಾರ ಕೈಗೊಂಡಿದ್ದಾರೆ. ‘ತಪ್ಪುದಾರಿಗೆ ತುಳಿದ ಮಕ್ಕಳನ್ನು ಕ್ಷಮಿಸಿದ್ದೇನೆ’ ಎಂದು ಪ್ರಧಾನಿ ಮೋದಿ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.
ಪ್ರಕರಣದ ಹಿನ್ನೆಲೆ:
ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿದ್ದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಈ ಬಾಲಕಿ ಪ್ರಧಾನಿ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ನೋಯ್ಡಾ ಪೊಲೀಸರು ಝೀರೋ ಎಫ್ಐಆರ್ ದಾಖಲಿಸಿದ್ದರು.
ಘಟನೆ ಬಳಿಕ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದ ಬಾಲಕಿ, “ನಾನು ಮಾಡಿದ ತಪ್ಪಿಗೆ ಕ್ಷಮೆ ಇಲ್ಲ, ಬೇರೆಯವರ ಪ್ರಚೋದನೆಗೆ ಒಳಗಾಗಿ ಈ ರೀತಿ ಮಾತನಾಡಿದೆ. ನನ್ನನ್ನು ಕ್ಷಮಿಸಿ” ಎಂದು ಕಣ್ಣೀರಿಟ್ಟಿದ್ದಳು. ಬಾಲಕಿಯ ತಾಯಿಯೂ ಸಹ ಪ್ರಧಾನಿ ಮೋದಿಯವರಲ್ಲಿ ಮಗಳ ಭವಿಷ್ಯಕ್ಕಾಗಿ ಕ್ಷಮೆ ಕೋರಿದ್ದರು.
ಪ್ರಧಾನಿ ಮೋದಿ ಕ್ಷಮೆ:
ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಸಂದೇಶ ನೀಡಿದ್ದ ಪ್ರಧಾನಿ ಮೋದಿ, “ಅಪ್ರಾಪ್ತ ಮಕ್ಕಳನ್ನು ಕೋರ್ಟ್ ಹಾಗೂ ಪೊಲೀಸ್ ಪ್ರಕರಣಗಳಲ್ಲಿ ಸಿಲುಕಿಸಿ ಕಿರುಕುಳ ನೀಡುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ಸಮಾಜವೂ ಈ ಮಕ್ಕಳನ್ನು ಸ್ವೀಕರಿಸಬೇಕು” ಎಂದು ಮನವಿ ಮಾಡಿದ್ದರು. ಪ್ರಧಾನಿಯವರ ಈ ಹೇಳಿಕೆಯ ಬೆನ್ನಲ್ಲೇ ದೆಹಲಿ ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ.





Leave a comment