SUDDIKSHANA KANNADA NEWS/ DAVANAGERE/ DATE:05-01-2025
ದಾವಣಗೆರೆ: ರಾಜ್ಯ ಮಟ್ಟದ ಯುವಜನೋತ್ಸವ ಬಾಪೂಜಿ ಎಂಬಿಎ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಯುವಜನೋತ್ಸವದ ರಂಗು ಹೆಚ್ಚಾಗಿದೆ. ಶಾಮನೂರು ರಿಂಗ್ ರಸ್ತೆಯ ಕರ್ನಲ್ ಎಂ.ಬಿ. ರವೀಂದ್ರನಾಥ್ ವೃತ್ತದ ಬಳಿಯಿಂದ ಕಾರ್ಯಕ್ರಮ ನಡೆಯುವ ಎಂಬಿಎ ಮೈದಾನದವರೆಗೆ ಏರ್ಪಡಿಸಲಾದ ಜಾನಪದ ಕಲಾ ಮೇಳಕ್ಕೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಡೊಳ್ಳು ಬಾರಿಸಿ, ಬಿಲ್ಲಿಗೆ ಬಾಣ ಹೂಡುವ ಜೊತೆಗೆ ಕುಂಬ ಹೊತ್ತು ಮೆರವಣಿಗೆಗೆ ಚಾಲನೆ ನೀಡಿದರು.
ಜಾನಪದ ಮೇಳದಲ್ಲಿ ಹೊರ ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿವಿಧ ಪ್ರಕಾರಗಳ ಕಲಾತಂಡಗಳು ಭಾಗವಹಿಸಿದ್ದವು, ಸ್ಥಳೀಯವಾಗಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳ ಕಲಾ ತಂಡ, ವೇಷಭೂಷಣಗಳೊಂದಿಗೆ ಭಾಗವಹಿಸಿದ್ದರು.
ಕಹಳೆ ಮೊಳಗಿದ ಬೆನ್ನಲ್ಲೆ ತಮಟೆ ಹಾಗೂ ಡೊಳ್ಳಿನ ಸದ್ದು ನೃತ್ಯಕ್ಕೆ ಪ್ರೇರಣೆ ನೀಡಿದವು. ಉತ್ತರ ಕರ್ನಾಟಕದ ಜಗ್ಗಲಗೆಗೆ ತಕ್ಕಂತೆ ಲಂಬಾಣಿ ನೃತ್ಯ ಕಣ್ಮನ ಸೆಳೆಯಿತು. ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಯಕ್ಷಗಾನ, ಭರತನಾಟ್ಯ ಕಲಾವಿದೆಯರು ಸಾಗಿದರು. ಚಂಡೆ, ಮರಗಾಲು ಕುಣಿತ, ಬೇಡರ ವೇಷ ಸೇರಿ 25 ಕ್ಕೂ ಅಧಿಕ ಕಲಾತಂಡದ ಮೆರವಣಿಗೆ ಸಾಗಿದವು. ಹರಿಹರದ ಹಗಲುವೇಷ ತಂಡ, ಕೇರಳದ ತೆಯ್ಯಂ, ಭೋಜರಾಜ ಕುಣಿತ, ಕರಡಿ ಕುಣಿತ, ಕಥಕ್ಕಳಿ, ಪಂಜಾಬಿನ ಭಾಂಗ್ರಾ, ಮಹಾರಾಷ್ಟ್ರದ ಲಾವಣಿ, ಒಡಿಶಾದ ಸಂಬಲ್ಪುರಿ, ಮಧ್ಯಪ್ರದೇಶದ ಬರೇಡಿ ನೃತ್ಯ, ಮರಗೋಲು ಕುಣಿತ, ಕಲಾತಂಡಗಳು ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿದ್ದವು.
ಸಾಂಸ್ಕೃತಿಕ ವೈವಿಧ್ಯತೆ ಮೆರವಣಿಗೆಯಲ್ಲಿ ಮನ ಸೆಳೆಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಪುರಾಣದ ಪಾತ್ರಗಳು ಎಲ್ಲರೊಂದಿಗೆ ಹೆಜ್ಜೆ ಹಾಕುತ್ತಿದ್ದ ಸೊಬಗನ್ನು ಜನರು ರಸ್ತೆಯ ಬದಿಯಲ್ಲಿ ನಿಂತು ಕುತೂಹಲದಿಂದ ನೋಡುತ್ತಿದ್ದರು. ರಾಮ-ಲಕ್ಷ್ಮಣ, ಸೀತೆ, ಹನುಮಂತ ಹಾಗೂ ರಾವಣನ ವೇಷಧಾರಿಗಳು ಗಮನ ಸೆಳೆದರು. ಪೂಜಾ ಕುಣಿತದ ದೃಶ್ಯಗಳು ಭಕ್ತಿಯನ್ನು ಸಾರಿದವು.
ಡಿಆರ್ಎಂ ಪದವಿಪೂರ್ವ ಕಾಲೇಜು, ಎಜಿಬಿ ಕಾಲೇಜು, ಡಿಆರ್ಎಂ ವಿಜ್ಞಾನ ಕಾಲೇಜು, ಎವಿಕೆ ಕಾಲೇಜು, ಚಾಣಕ್ಯ ಕಾಲೇಜು, ದಾವಣಗೆರೆ ವಿಶ್ವವಿದ್ಯಾನಿಲಯದ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಹರಿಹರ ಶಾಸಕರಾದ ಬಿ.ಪಿ.ಹರೀಶ್, ಮೇಯರ್ ಚಮನ್ಸಾಬ್ ಕೆ, ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯಿತಿ ಸಿಇಓ ಸುರೇಶ್ ಬಿ. ಇಟ್ನಾಳ್, ಉಪ ಮೇಯರ್ ಸೋಗಿ ಶಾಂತಕುಮಾರ್, ಡಿಹೆಚ್ಓ ಷಣ್ಮುಖಪ್ಪ ಪಾಲ್ಗೊಂಡಿದ್ದರು.