Home ಕ್ರೈಂ ನ್ಯೂಸ್ ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರ ಕಾಣಿಕೆ ಲೂಟಿ: ಸಿಸಿಟಿವಿ ಕಣ್ತಪ್ಪಿಸಿ ₹3 ಕೋಟಿ ದೋಚಿದ ಸಿಬ್ಬಂದಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರ ಕಾಣಿಕೆ ಲೂಟಿ: ಸಿಸಿಟಿವಿ ಕಣ್ತಪ್ಪಿಸಿ ₹3 ಕೋಟಿ ದೋಚಿದ ಸಿಬ್ಬಂದಿ!

Share
ಅಯೋಧ್ಯೆ
Share

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ಕಾಣಿಕೆ ಎಣಿಕೆ ಕೇಂದ್ರದಲ್ಲೇ ಮಹಾ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಭಕ್ತರು ಶ್ರದ್ಧೆಯಿಂದ ಸಮರ್ಪಿಸಿದ ಕಾಣಿಕೆ ಹಣದಲ್ಲಿ ಸುಮಾರು 2 ರಿಂದ 3 ಕೋಟಿ ರೂಪಾಯಿಗಳನ್ನು ಎಣಿಕೆ ಸಿಬ್ಬಂದಿಯೇ ವ್ಯವಸ್ಥಿತವಾಗಿ ಲೂಟಿ ಮಾಡಿರುವುದು ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ.

₹500 ನೋಟಿನಿಂದ ಆರಂಭವಾದ ಕಳ್ಳತನ! ಬಂಧಿತ ಆರು ಮಂದಿ ಸಿಬ್ಬಂದಿ ಕೆಲಸಕ್ಕೆ ಸೇರಿದ ಕೇವಲ 2-3 ತಿಂಗಳಲ್ಲೇ ಈ ಕೃತ್ಯ ಎಸಗಲು ಶುರು ಮಾಡಿದ್ದರು. ಆರಂಭದಲ್ಲಿ ತಮ್ಮ ಬಟ್ಟೆಗಳಲ್ಲಿ ಒಂದೆರಡು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಡಗಿಸಿ ಹೊರಗೆ ಸಾಗಿಸುತ್ತಿದ್ದರು. ಈ ಕಳ್ಳತನ ಯಾರ ಗಮನಕ್ಕೂ ಬಾರದೇ ಇದ್ದಾಗ ಇವರ ಧೈರ್ಯ ಹೆಚ್ಚಾಗಿದೆ. ನಂತರದ ದಿನಗಳಲ್ಲಿ ನೋಟುಗಳ ಕಂತೆಗಳನ್ನೇ (Bundles) ಸಾಗಿಸಲು ಆರಂಭಿಸಿ, ಒಟ್ಟಾರೆಯಾಗಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಲೋಪಗಳೇ ಕಳ್ಳರಿಗೆ ವರ: ರಾಮ ಮಂದಿರ ಟ್ರಸ್ಟ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಡುವೆ ಕಾಣಿಕೆ ಎಣಿಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿದ್ದರೂ, ಅವುಗಳನ್ನು ಜಾರಿಗೆ ತರುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಕಾಣಿಕೆ ಎಣಿಕೆ ಕೊಠಡಿಯ ಸಿಸಿಟಿವಿ ಕಂಟ್ರೋಲ್ ರೂಂ ಅನ್ನು ಸಿಬ್ಬಂದಿ ಇಲ್ಲದೆ ಖಾಲಿ ಬಿಡಲಾಗುತ್ತಿತ್ತು. ಅಲ್ಲದೆ, ಸಿಬ್ಬಂದಿಯ ಕಡ್ಡಾಯ ತಪಾಸಣೆ (Frisking) ನಡೆಸುವ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಇದನ್ನೇ ಬಂಡವಾಳವಾಗಿಸಿಕೊಂಡ ಸಿಬ್ಬಂದಿ ಹಣ ಲೂಟಿ ಮಾಡಿದ್ದಾರೆ.

ಟ್ರಸ್ಟ್ ಪ್ರಭಾವಿಗಳಿಂದ ಶಿಫಾರಸು? ಬಂಧಿತ ಆರೋಪಿಗಳಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ರಮಾಶಂಕರ್ ಮಿಶ್ರಾ ಎಂಬುವವರನ್ನು ಎಸ್‌ಬಿಐನ ಹೊರಗುತ್ತಿಗೆ ಸಂಸ್ಥೆಯ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು. ಇವರೆಲ್ಲರೂ ಮಂದಿರ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಭಾವಿ ವ್ಯಕ್ತಿಗಳ ಶಿಫಾರಸಿನ ಮೇರೆಗೆ ಕೆಲಸ ಗಿಟ್ಟಿಸಿಕೊಂಡಿದ್ದರು ಎಂಬ ಆಘಾತಕಾರಿ ವಿಷಯ ತನಿಖೆಯಲ್ಲಿ ತಿಳಿದುಬಂದಿದೆ. ಮನೀಶ್ ಯಾದವ್ ಎಂಬಾತ ಮೇ 11 ರಿಂದ ಸತತವಾಗಿ ಹಣ ಕದಿಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆಸ್ತಿ ಖರೀದಿ, ನಗದು ಜಪ್ತಿ: ಕದ್ದ ಹಣದಲ್ಲಿ ಆರೋಪಿಗಳು ಅಯೋಧ್ಯೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೈಟು ಹಾಗೂ ಮನೆಗಳನ್ನು ಖರೀದಿಸಿದ್ದಾರೆ. ಜೂನ್ ಮೊದಲ ವಾರದಲ್ಲಿ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ₹79 ಲಕ್ಷ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಹಣದ ಮೂಲ ಹಾಗೂ ಅಕ್ರಮ ಆಸ್ತಿ ಖರೀದಿಯ ಸಂಪೂರ್ಣ ನೆಟ್‌ವರ್ಕ್ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.

Share

Leave a comment

Leave a Reply

Your email address will not be published. Required fields are marked *