Home ಕ್ರೈಂ ನ್ಯೂಸ್ ಬಾರುಯಿಪುರ ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಕ್ರೈಂ ಸೀನ್ ಮರುಸೃಷ್ಟಿ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮುಖ್ಯ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬಾರುಯಿಪುರ ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಕ್ರೈಂ ಸೀನ್ ಮರುಸೃಷ್ಟಿ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಮುಖ್ಯ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು!

Share
ಅತ್ಯಾಚಾರ
Share

ಪಶ್ಚಿಮ ಬಂಗಾಳ: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶ್ಚಿಮ ಬಂಗಾಳದ ಬಾರುಯಿಪುರ 12 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಮಂಗಳವಾರ ಮುಂಜಾನೆ ಕ್ರೈಂ ಸೀನ್ (ಘಟನಾ ಸ್ಥಳ) ಮರುಸೃಷ್ಟಿ ಮಾಡುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪ್ರಭಾಶ್ ಮೊಂಡಲ್ ಸೀದಾ ಪೊಲೀಸ್ ಗುಂಡಿಗೆ ಬಲಿಯಾಗಿದ್ದಾನೆ.

ಪೊಲೀಸ್ ಗನ್ ಕಸಿದು ಶೂಟಿಂಗ್!

ಜುಲೈ 5 ರಂದು ಬಾರುಯಿಪುರದ ಕೊಳವೊಂದರಲ್ಲಿ ಗೋಣಿ ಚೀಲದಲ್ಲಿ ತುಂಬಿಡಲಾಗಿದ್ದ ಬಾಲಕಿಯ ಶವ ಪತ್ತೆಯಾದ ನಂತರ ಇಡೀ ರಾಜ್ಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಪ್ರಭಾಶ್ ಮೊಂಡಲ್ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಮಂಗಳವಾರ ಮುಂಜಾನೆ ಸುಮಾರು 12:45 ರ ಸುಮಾರಿಗೆ ಪೊಲೀಸರು ಆರೋಪಿಯನ್ನು ಕರೆದುಕೊಂಡು ಸೂರ್ಯಪುರಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಪ್ರಭಾಶ್ ಇದ್ದಕ್ಕಿದ್ದಂತೆ ಪೊಲೀಸ್ ಸಿಬ್ಬಂದಿಯೊಬ್ಬರ ಸೇವಾ ಪಿಸ್ತೂಲ್ ಕಸಿದುಕೊಂಡು, ಪೊಲೀಸರ ಮೇಲೆಯೇ ಒಂದು ಸುತ್ತು ಗುಂಡು ಹಾರಿಸಿ ಓಡಿಹೋಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿ ದಾಳಿ ನಡೆಸಿದಾಗ ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ತಪ್ಪಾಗಿ ಅಮಾಯಕನ ಸಾರ್ವಜನಿಕ ಹತ್ಯೆ:

ಬಾಲಕಿಯ ಶವ ಪತ್ತೆಯಾದ ತಕ್ಷಣ ಸ್ಥಳೀಯ ಜನರಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿತ್ತು. ಪೊಲೀಸರು ತಡವಾಗಿ ಸ್ಪಂದಿಸಿದ್ದಾರೆ ಎಂದು ಆರೋಪಿಸಿ ಜನರು ಬಾರುಯಿಪುರ-ಜೋಯ್‌ನಗರ ರಸ್ತೆಯನ್ನು ತಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ್ದರು.

ಇದೇ ಗದ್ದಲದ ನಡುವೆ ಆಕ್ರೋಶಗೊಂಡ ಜನಸಮೂಹ ಇಂದ್ರಜಿತ್ ಮೊಂಡಲ್ ಎಂಬ ವ್ಯಕ್ತಿಯನ್ನು ಅತ್ಯಾಚಾರದ ಆರೋಪಿ ಎಂದು ತಪ್ಪಾಗಿ ಭಾವಿಸಿ ಹೊಡೆದು ಕೊಂದಿದ್ದಾರೆ.

ಆದರೆ, ಪ್ರಾಥಮಿಕ ತನಿಖೆಯ ನಂತರ ಆತ ಅಮಾಯಕ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಲಿಂಚಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.

ಸಿಎಂ ಸುವೇಂದು ಅಧಿಕಾರಿ ಗಡುವು:

ಪ್ರಕರಣದ ತೀವ್ರತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಡಿಜಿಪಿ ಸಿದ್ದನಾಥ್ ಗುಪ್ತಾ ಅವರಿಗೆ ಮುಂದಿನ 72 ಗಂಟೆಗಳ ಒಳಗಾಗಿ ಸಂಪೂರ್ಣ ತನಿಖಾ ವರದಿಯನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಸಿಎಂ, ಪೊಲೀಸರ ಕಡೆಯಿಂದ ಒಂದು ಪರ್ಸೆಂಟ್ ನಿರ್ಲಕ್ಷ್ಯ ಕಂಡುಬಂದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಲ್ಲದೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಸುಮಾರು 200 ದಂಗೆಕೋರರನ್ನು ಗುರುತಿಸಲಾಗಿದ್ದು, ಅಮಾಯಕ ಇಂದ್ರಜಿತ್ ಕೊಂದವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲಾಗುವುದು ಎಂದಿದ್ದಾರೆ. ಪ್ರಕರಣದ ಸಮಗ್ರ ತನಿಖೆಗಾಗಿ 6 ​​ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *