ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) ಶಾಲೆಗಳಿಗಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಹೊರತಂದಿರುವ 6ನೇ ತರಗತಿಯ ಮೂರನೇ ಭಾಷೆಯ ಕನ್ನಡ ಪಠ್ಯಪುಸ್ತಕ ಈಗ ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ನೂತನ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ಹಾಗೂ ಅದರಲ್ಲಿನ ಪಾಠಗಳು ಏಕಪಕ್ಷೀಯ ಧೋರಣೆಯಿಂದ ಕೂಡಿವೆ ಎಂದು ಶಿಕ್ಷಣ ತಜ್ಞರು ಮತ್ತು ಪ್ರಗತಿಪರ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಕೃಷ್ಣ’ ಹೆಸರಿಗೆ ತೀವ್ರ ವಿರೋಧ:
‘ಮೂಲಭೂತ ಶಿಕ್ಷಣದ ಹಕ್ಕಿಗಾಗಿ ಜನಾಂದೋಲನ’ (PAFRE) ಸಂಘಟನೆಯ ಅಡಿಯಲ್ಲಿ ಒಂದಾಗಿರುವ ಶಿಕ್ಷಣ ತಜ್ಞರು, ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು (NCF-SE 2023) ಅಡಿಯಲ್ಲಿ ತರಲಾದ ಈ ಬದಲಾವಣೆಯು ಶಿಕ್ಷಣದ ಕೇಸರೀಕರಣದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಪಠ್ಯಪುಸ್ತಕಗಳಿಗೆ ಧಾರ್ಮಿಕ ಅಥವಾ ಪೌರಾಣಿಕ ಹಿನ್ನೆಲೆಯ ಹೆಸರಿಡುವ ಮೂಲಕ ಶಾಲಾ ಹಂತದಲ್ಲೇ ನಿರ್ದಿಷ್ಟ ಸಿದ್ದಾಂತವನ್ನು ಹೇರಲಾಗುತ್ತಿದೆ ಎಂದು ಅವರು ದೂರಿದ್ದಾರೆ. ಕರ್ನಾಟಕದ ಶೈಕ್ಷಣಿಕ ಅಸ್ಮಿತೆಯು ಪಂಪ, ಕುವೆಂಪು, ಶಿವರಾಮ ಕಾರಂತ ಮತ್ತು ಬಸವಣ್ಣನವರಂತಹ ದಾರ್ಶನಿಕರನ್ನು ಪ್ರತಿಬಿಂಬಿಸಬೇಕೇ ಹೊರತು ಇಂತಹ ಧಾರ್ಮಿಕ ಚೌಕಟ್ಟನ್ನಲ್ಲ ಎಂದು ಹಿರಿಯ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಆತಂಕ ವ್ಯಕ್ತಪಡಿಸಿದ್ದಾರೆ.
ಆಹಾರ ಪದ್ಧತಿಯಲ್ಲಿ ತಾರತಮ್ಯದ ಆರೋಪ:
ಪಠ್ಯಪುಸ್ತಕದಲ್ಲಿರುವ ‘ಆರೋಗ್ಯವೇ ಭಾಗ್ಯ’ ಎಂಬ ಪಾಠದಲ್ಲಿ ಸಮತೋಲಿತ ಆಹಾರದ ಪಟ್ಟಿಯಿಂದ ಮೊಟ್ಟೆ, ಮಾಂಸ ಮತ್ತು ಮೀನನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಕೇವಲ ಹಾಲು, ಸೊಪ್ಪು, ತರಕಾರಿ, ಹಣ್ಣು ಮತ್ತು ಒಣಹಣ್ಣುಗಳನ್ನು ಮಾತ್ರ ಒಳಗೊಂಡ ಸಸ್ಯಹಾರಿ ಶೈಲಿಯನ್ನು ಪ್ರಚಾರ ಮಾಡಲಾಗುತ್ತಿದೆ. ಇದು ಮಾಂಸಾಹಾರ ಸೇವಿಸುವ ಕರ್ನಾಟಕದ ಬಹುದೊಡ್ಡ ಜನಸಂಖ್ಯೆಯ ಆಹಾರ ಸಂಸ್ಕೃತಿಯನ್ನು ನಿರ್ಲಕ್ಷಿಸುವ ಮತ್ತು ಸಸ್ಯಹಾರವನ್ನು ಮಾತ್ರ ಶ್ರೇಷ್ಠ ಎಂದು ಬಿಂಬಿಸುವ ಪ್ರಯತ್ನ ಎಂದು ವಿಮರ್ಶಕರು ಕಿಡಿಕಾರಿದ್ದಾರೆ.
ಪ್ರಾದೇಶಿಕ ವೈವಿಧ್ಯತೆಯ ಕೊರತೆ:
ಕರ್ನಾಟಕದ ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ವಿಶಿಷ್ಟ ಜಾನಪದ, ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಪಠ್ಯಪುಸ್ತಕದಲ್ಲಿ ಕಡೆಗಣಿಸಲಾಗಿದೆ. ಜೊತೆಗೆ 6ನೇ ತರಗತಿಯ ಮಕ್ಕಳ ವಯಸ್ಸಿಗೆ ತಕ್ಕುದಾದ ಚಿತ್ರಗಳು, ಕಥೆಗಳು ಹಾಗೂ ಚಟುವಟಿಕೆಗಳು ಇದರಲ್ಲಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಅಲ್ಲದೆ, ರಾಜ್ಯದ ಡಿಎಸ್ಇಆರ್ಟಿ (DSERT) ಸಂಸ್ಥೆಯನ್ನು ಬೈಪಾಸ್ ಮಾಡಿ ಈ ಪಠ್ಯ ಸಿದ್ಧಪಡಿಸಿರುವುದನ್ನು ಪ್ರಶ್ನಿಸಿದ್ದಾರೆ.
ಪಠ್ಯ ಹಿಂಪಡೆಯಲು ಹೆಚ್ಚಿದ ಒತ್ತಡ:
ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಈ ಪಠ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಪ್ರಸ್ತುತ ‘ಕೃಷ್ಣ’ ಪಠ್ಯಪುಸ್ತಕವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಬದಲಿಗಾಗಿ ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ‘ಸವಿ ಕನ್ನಡ’, ‘ಸಿರಿ ಕನ್ನಡ’ ಅಥವಾ ‘ತಿಳಿ ಕನ್ನಡ’ ಪುಸ್ತಕಗಳನ್ನು ಬಳಸಬೇಕು ಹಾಗೂ ಆಹಾರದ ಪಾಠವನ್ನು ಪರಿಷ್ಕರಿಸಿ ಮಾಂಸಾಹಾರವನ್ನೂ ಸೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಗಿದೆ.
- CBSE 3rd language Kannada
- Class 6 Krishna textbook controversy
- Health is Wealth lesson dispute
- NCERT Kannada textbook row
- NEP 2020 school curriculum
- PAFRE Karnataka protest
- Saffronisation of education Karnataka
- Vegetarian diet push in textbooks
- ಆರೋಗ್ಯವೇ ಭಾಗ್ಯ ಪಠ್ಯ
- ಎನ್ಇಪಿ 2020 ಕರ್ನಾಟಕ
- ಎನ್ಸಿಇಆರ್ಟಿ ಕನ್ನಡ ಪಠ್ಯಪುಸ್ತಕ ವಿವಾದ
- ಎಸ್ ಜಿ ಸಿದ್ದರಾಮಯ್ಯ
- ಕೃಷ್ಣ ಪಠ್ಯಪುಸ್ತಕ
- ನಿರಂಜನಾರಾಧ್ಯ ವಿ ಪಿ
- ಶಿಕ್ಷಣ ಕೇಸರೀಕರಣ ಆರೋಪ
- ಸಸ್ಯಹಾರ ವಿವಾದ
- ಸಿಬಿಎಸ್ಇ 6ನೇ ತರಗತಿ ಕನ್ನಡ ಪಠ್ಯ





Leave a comment