ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕನ್ನಡ ಸಂಘ (ಸಿಂಗಪುರ)ದ ವಚನಾಂಜಲಿ ಕಾರ್ಯಕ್ರಮದಲ್ಲಿ ವಿರಾಟಪುರ ವಿರಾಗಿ Cinema ಪ್ರದರ್ಶನ, ಸಂವಾದಕ್ಕೆ ಮೂಕವಿಸ್ಮಿತರಾದ ಪ್ರೇಕ್ಷಕರು !

On: August 24, 2023 4:00 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:24-08-2023

ಬೆಂಗಳೂರು: ಸುಮಾರು ನಾಲ್ಕಾರು ದಶಕಗಳಿಂದ ಕನ್ನಡಿಗರು ಸಿಂಗಾಪೂರದಲ್ಲಿ ನೆಲೆಸಿದ್ದಾರೆ. ಕನ್ನಡಿಗರು ಸಂಘ ಜೀವಿಗಳು ಮತ್ತು ತಮ್ಮ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆ ನಮ್ಮ ಅಸ್ಮಿತೆಯೆಂದು ನಂಬಿರುವವರು. ವಿರಾಟಪುರ ವಿರಾಗಿ ಸಿನಿಮಾ (Cinema) ಪ್ರದರ್ಶನ ನೋಡಿ, ಸಂವಾದಕ್ಕೆ ನೆರೆದಿದ್ದವರು ಮೂಕವಿಸ್ಮಿತರಾದರು.

ಈ ಹಿನ್ನೆಲೆಯಲ್ಲಿ 11ನೇ ಸೆಪ್ಟೆಂಬರ್ 1996 ರಂದು ಸಿಂಗಾಪೂರದ ರಿಜಿಸ್ಟ್ರಾರ್ ಆಫ್ ಸೊಸೈಟಿಯಲ್ಲಿ ನೊಂದಾಯಿಸುವ ಮೂಲಕ ಕನ್ನಡ ಸಂಘ ಉದಯವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಅನೇಕ ಕಾರ್ಯಕ್ರಮ ಗಳನ್ನು ಆಯೋಜಿಸುವ ಮೂಲಕ ಶ್ರಮಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: 

Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!

ಕನ್ನಡ ಸಂಘ (ಸಿಂಗಪುರ)ವು ವಚನ ಸಾಹಿತ್ಯದ ಸಾರಾಮೃತವನ್ನು ಹರಡುವ, ಹಂಚುವ ಸದುದ್ದೇಶದಿಂದ ಸುಮಾರು 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮವೇ ವಚನಾಂಜಲಿ. ಪ್ರತೀ ವರ್ಷ ವಿವಿಧ ರೂಪಗಳಲ್ಲಿ ಆಚರಿಸಿಕೊಂಡು ಬಂದಂತಹ ವಚನಾಂಜಲಿ, ಶಾಸ್ತ್ರೀಯ ಸಂಗೀತ, ಜನಪದ ಶೈಲಿಯ ಹಾಡುಗಳ ಮೂಲಕ, ಭರತ ನಾಟ್ಯದಲ್ಲಿನ ನೃತ್ಯ ರೂಪಕಗಳಲ್ಲಿ, ಸಾಂಸ್ಕೃತಿಕವಾಗಿ ಆಚರಿಸಿಕೊಂಡು ಬಂದಿರುವುದು ಒಂದೆಡೆಯಾದರೆ, ಸಾಹಿತ್ಯದ ಒಳ ಅರಿವನ್ನು ಅರಿಯುವ ಹಾದಿಯಲ್ಲಿ ವಿಚಾರ ಗೋಷ್ಠಿಗಳು, ವಿಚಾರ ಸಂಕಿರಣ, ಸಂವಾದಗಳ ಮೂಲಕ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ.

ಅರವಿಂದ ಜತ್ತಿ, ವೈಜಯಂತಿ ಕಾಶಿ, ಲೀಲಾದೇವಿ ಪ್ರಸಾದ್, ಗೋ. ರು ಚನ್ನಬಸಪ್ಪ, ಪುತ್ತೂರು ನರಸಿಂಹ ನಾಯಕ, ಡಾ. ರೇಣುಕಾ ಗುಬ್ಬಿ, ವಿದ್ವಾನ್ ಕಲಾ ಸುಜಯ್ ಶಾನಭಾಗ್ , ಡಾ. ಬಸವ ಮರುಳ ಸಿದ್ದ ಸ್ವಾಮಿ, ಡಾ. ವೀಣಾ ಬನ್ನಂಜೆಯಂತಹ ಗಣ್ಯವ್ಯಕ್ತಿಗಳು ಇದರಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆಂಬುದು ಕನ್ನಡ ಸಂಘ (ಸಿಂಗಪುರ)ವು ಹೆಮ್ಮೆ ಪಡುವಂತಹ ವಿಷಯ.

ಈ ಬಾರಿ ವಚನಾಂಜಲಿಯನ್ನು ವಿಶೇಷವಾಗಿ ಆಯೋಜಿಸುವಾಗ ಬಂದಂತಹ ಚರ್ಚೆಯಲ್ಲಿ, ಶಿವಯೋಗಿಗಳಾದ ಶ್ರೀ ಹಾನಗಲ್ ಕುಮಾರಸ್ವಾಮಿಯವರ ಜೀವನಾಧಾರಿತ ಚಲನಚಿತ್ರ “ವಿರಾಟಪುರ ವಿರಾಗಿ Cinema ಪ್ರದರ್ಶನವನ್ನು ಏರ್ಪಡಿಸಿದರೆ ಹೇಗೆ? ಎಂಬ ಪ್ರಶ್ನೆಯೊಂದಿಗೆ ಆರಂಭಗೊಂಡ ಒಂದು ಆಲೋಚನೆ ಕೆಲವೇ ದಿನಗಳಲ್ಲಿ ಆಯೋಜನೆಯಾಗಿ ಬದಲಾಗಿ, ಜೊತೆಗೆ ಈ ಚಿತ್ರವನ್ನು ಒಂದು ಯಜ್ಞದಂತೆ ಮೂರು ವರ್ಷಗಳ ಕಾಲ ಆಳವಾದ ಅಧ್ಯಯನವನ್ನು ಮಾಡಿ ತಯಾರಿಸಿದ ನಿರ್ದೇಶಕರಾದಂತಹ ಬಿ.ಎಸ್.ಲಿಂಗದೇವರು ಹಾಗು ಅದರ ಮುಖ್ಯ ಪಾತ್ರಧಾರಿಯಾಗಿ ನಟಿಸಿದ ಕಲಾವಿದ ಕೆ.ಸುಚೇಂದ್ರ ಪ್ರಸಾದ ಅವರ ಸಮ್ಮುಖದಲ್ಲಿ ನಡೆಸಿದರೆ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆಂದು ಕನ್ನಡ ಸಂಘ (ಸಿಂಗಪುರ)ದ ಆಶಯ ಕೊನೆಗೂ ಯಶಸ್ವಿ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ನಿಜಕ್ಕೂ ಅಭಿನಂದನೀಯ.

ಜನಸಾಮಾನ್ಯರ ಬದುಕನ್ನು ಉನ್ನತಗೊಳಿಸಲು ಹನ್ನೆರಡನೆಯ ಶತಮಾನದ ಶಿವಶರಣರು ಶ್ರಮಿಸಿರುವುದು ನಮಗೆಲ್ಲಾ ತಿಳಿದೇ ಇದೆ. ಶರಣರು ಸಾಹಿತ್ಯ ರಚಿಸಬೇಕೆಂಬ ಉದ್ದೇಶದಿಂದ ವಚನಗಳನ್ನು ಬರೆಯದೆ ದಿನನಿತ್ಯದ ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಹೇಳಿದ್ದರಿಂದ ವಚನ ಸಾಹಿತ್ಯ ಒಂದು ಚಳಿವಳಿಯಾಯಿತು ಎಂಬುದು ಇತಿಹಾಸ. ವರ್ಣ-ಆಧಾರಿತ, ಜಾತಿ ಆಧಾರಿತ, ಲಿಂಗ-ಆಧಾರಿತ ಅಸಮಾನತೆಯನ್ನು ನಿರ್ಮೂಲಗೊಳಿಸಿ ಸರ್ವ ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದವರು ಶಿವ ಶರಣರು. ಈ ಹಿನ್ನಲೆಯಲ್ಲಿ ಶ್ರೀ ಹಾನಗಲ್ ಕುಮಾರಸ್ವಾಮಿಯವರು ಎಲ್ಲರನ್ನು ಒಳಗೊಳ್ಳುವ ಮತ್ತು ಬಹುತ್ವ ಪರಂಪರೆಗೆ ಒತ್ತುಕೊಟ್ಟು ಸಮಸಮಾಜ ನಿರ್ಮಿಸಲು ಸ್ವಾತಂತ್ರ್ಯಪೂರ್ವದಲ್ಲಿ ಶ್ರಮಿಸಿದವರು.

ಅಂತಹವರ ಜೀವನಾಧಾರಿತ “ವಿರಾಟಪುರ ವಿರಾಗಿ” ಸಿನೆಮಾವು ಶರಣರ ವಚನಗಳ ಅರ್ಥ ಮತ್ತು ಅಂತರಂಗದ ಅರಿವನ್ನು ನಮಗೆ ಮೂಡಿಸಿದೆ ಎಂದರೂ ತಪ್ಪಾಗಲಾರದು. ವಚನಗಳನ್ನು ಸನ್ನಿವೇಶಗಳಿಗೆ ಹೊಂದುವಂತೆ ಆಯ್ಕೆ ಮಾಡಿಕೊಂಡು, ಅದಕ್ಕೆ ಅತ್ಯತ್ತಮ ಸಂಗೀತ ಸಂಯೋಜನೆ ಮಾಡಿರುವುದು ಪ್ರೆಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಸಹಾಯವಾಗಿದೆ. ಇಡೀ ತಂಡವು ನಮ್ಮನ್ನು ಸ್ವಾತಂತ್ರ್ಯಪೂರ್ವ ಕಾಲಘಟ್ಟಕ್ಕೆ ಕೊಂಡಯ್ಯುವಲ್ಲಿ ಯಶಸ್ವಿಯಾಗಿದ್ದು, ಜನಸಾಮಾನ್ಯರನ್ನು ಆಧ್ಯಾತ್ಮದತ್ತ ಕರೆದುಕೊಳ್ಳಲು, ನೈತಿಕ ಮೌಲ್ಯಗಳನ್ನು ಹೆಚ್ಚಿಸಲು, ಅನುಭಾವದ ಚಿಂತನೆಗೆ ತೊಡಗಿಸಲು ಈ ಚಿತ್ರ ಕನ್ನಡಿಗರ ಹೆಮ್ಮೆಯ ಚಿತ್ರವಾಗಿದೆ.

ತುಂಬಿದ ಸಭಾಂಗಣದಲ್ಲಿ “ವಿರಾಟಪುರ ವಿರಾಗಿ” ಚಲನಚಿತ್ರ ಪ್ರದರ್ಶನ, ವಚನ ಸಾಹಿತ್ಯದ ಬಗೆಗಿನ ವಿಚಾರ ಗೋಷ್ಠಿ, ವಚನ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ಕೊನೆಯಲ್ಲಿ ದಾಸೋಹದೊಂದಿಗೆ ಅನೇಕ ವಿಚಾರಗಳ ವಿವರಣೆ, ವಿಮರ್ಶೆ, ವಿತರಣೆಯಲ್ಲಿ ತನ್ನ ಸಾರ್ಥಕತೆಯನ್ನು ಕಂಡಿತೆಂದರೆ ತಪ್ಪಾಗಲಾರದು ಎಂದು ಕನ್ನಡ ಸಂಘದ (ಸಿಂಗಪುರ) ಅಧ್ಯಕ್ಷ ವೆಂಕಟರತ್ನಯ್ಯ ತಿಳಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment