Home ಕ್ರೈಂ ನ್ಯೂಸ್ ತಾಯಿಯ ಎದೆಯಲ್ಲೇ ಕೊನೆಯುಸಿರೆಳೆದ ಒಂದೂವರೆ ವರ್ಷದ ಕಂದಮ್ಮ: ಹೇರಂಜೆಯಲ್ಲಿ ಕಣ್ಣೀರ ಕೋಡಿ, ನಿಲ್ಲುತ್ತಿಲ್ಲ ತಂದೆ ತಾಯಿ ಆಕ್ರಂದನ..!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ತಾಯಿಯ ಎದೆಯಲ್ಲೇ ಕೊನೆಯುಸಿರೆಳೆದ ಒಂದೂವರೆ ವರ್ಷದ ಕಂದಮ್ಮ: ಹೇರಂಜೆಯಲ್ಲಿ ಕಣ್ಣೀರ ಕೋಡಿ, ನಿಲ್ಲುತ್ತಿಲ್ಲ ತಂದೆ ತಾಯಿ ಆಕ್ರಂದನ..!

Share
ತಾಯಿ
Share

ಉಡುಪಿ: ಇದು ವಿಧಿಯ ಕ್ರೂರ ನರ್ತನ. ಒಂದೂವರೆ ವರ್ಷದ ಮಗು ಇಡೀ ಸಂಸಾರದ ನೋವು ಮರೆಸಿತ್ತು. ಎಲ್ಲರೊಟ್ಟಿಗೆ ಚಿನಕುರುಳಿ ತರ ಆಟವಾಡಿಕೊಂಡಿತ್ತು.ಆದರೆ ಹಸಿ ತೆಂಗಿನ ಕಾಯಿ ಬಿದ್ದ ಪರಿಣಾಮ ಇಹಲೋಕ ತ್ಯಜಿಸಿದೆ. ತಂದೆ ತಾಯಿ ಆಕ್ರಂದನ ಇನ್ನೂ ನಿಂತಿಲ್ಲ. ಗ್ರಾಮದವರ ಕಣ್ಣಲ್ಲಿ ಈಗಲೂ ಕಣ್ಣೀರು ಸುರಿಯುತ್ತಿದೆ. ತಾಯಿಯ ಎದೆಯಲ್ಲೇ ಉಸಿರು ಚೆಲ್ಲಿದ ಕಂದಮ್ಮನ ನೆನೆದರೆ ಎದೆ ಝಲ್ ಎನ್ನುವುದಷ್ಟೇ ಅಲ್ಲ, ಕಣ್ಣೀರು ಬಂದೇ ಬಿಡುತ್ತದೆ. 

ಇದು ವಿಧಿಯಾಟಕ್ಕೆ ಬಲಿಯಾದ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರಂಜೆ ಗ್ರಾಮದಲ್ಲಿ ಕಂಡು ಬಂದ ಇಂದಿನ ಚಿತ್ರಣ. 

ಇಡೀ ಕರಾವಳಿಯನ್ನೇ ಕಣ್ಣೀರಲ್ಲಿ ಮುಳುಗಿಸುವಂತಹ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಪುಟ್ಟ ಮಗುವಿನ ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವನ್ನಪ್ಪಿದೆ.

ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರಂತ ಇಡೀ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದ್ದು, ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಕ್ಯಾಂಟೀನ್ ನಡೆಸುತ್ತಿರುವ ಪ್ರಶಾಂತ್ ಪೂಜಾರಿ ಮತ್ತು ಸುಚಿತ್ರಾ ಪೂಜಾರಿ ದಂಪತಿಯ ಪುತ್ರ ದಕ್ಷ (1.5 ವರ್ಷ) ಮೃತಪಟ್ಟ ದುರ್ದೈವಿ.

ನಡೆದಿದ್ದೇನು?

ಯಾವಾಗಲೂ ಹಿರಿಯ ಮಗಳನ್ನು ಶಾಲೆಗೆ ಕರೆದೊಯ್ಯುವ ವೇಳೆ ತಾಯಿ ಸುಚಿತ್ರಾ ಅವರು ಚಿಕ್ಕ ಮಗುವನ್ನು ಜೊತೆಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಆದರೆ, ಈ ಬಾರಿ ದುರಾದೃಷ್ಟವಶಾತ್ ಮಗ ದಕ್ಷನನ್ನು ಕಂಕುಳಲ್ಲಿ ಹೊತ್ತುಕೊಂಡೇ ಹೊರಟಿದ್ದರು. ಮಳೆಯೂ ಇಲ್ಲದ ಕಾರಣ ಯಾವುದೇ ಅಪಾಯದ ಸುಳಿವು ಇರಲಿಲ್ಲ.

ತಾಯಿ ತನ್ನ ಆರು ವರ್ಷದ ಮಗಳನ್ನು ಶಾಲೆಗೆ ಬಿಡಲು ಮನೆ ಬಿಟ್ಟು ನಡೆದು ಹೋಗುತ್ತಿದ್ದಾಗ, ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಭಾರವಾದ ಹಸಿ ತೆಂಗಿನಕಾಯಿಯೊಂದು ಕಳಚಿ ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ.

ಗಂಭೀರ ಗಾಯ, ಚಿಕಿತ್ಸೆ ಫಲಕಾರಿಯಾಗದೆ ಸಾವು

ತೆಂಗಿನಕಾಯಿ ಬೀಳುವ ವೇಗ ಮತ್ತು ಬಲ ಎಷ್ಟಿತ್ತೆಂದರೆ, ಮಗುವಿನ ತಲೆ ಭಾಗ ಒಂದು ಇಂಚಿಗೂ ಹೆಚ್ಚು ಆಳಕ್ಕೆ ಜಜ್ಜಿ ಹೋಗಿ ಗಂಭೀರ ಗಾಯವಾಗಿತ್ತು. ಘಟನೆಯಿಂದ ತಾಯಿ ಬೆಚ್ಚಿಬಿದ್ದರೆ, ಸ್ಥಳದಲ್ಲಿದ್ದವರು ಕೂಡ ಕೆಲ ಕ್ಷಣ ಏನಾಗಿದೆಯೆಂದು ಅರಿಯಲಾಗದೆ ಕಂಗಾಲಾಗಿದ್ದಾರೆ.

ಮಗುವಿನ ಮೇಲೆ ತೆಂಗಿನಕಾಯಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದರು. ಸ್ಥಳೀಯ ವ್ಯಕ್ತಿಯೊಬ್ಬರು ಮಗುವಿನ ಉಸಿರಾಟ ಪುನರುಜ್ಜೀವನಗೊಳಿಸಲು ತಕ್ಷಣವೇ ಸಿಪಿಆರ್ (CPR) ಕೂಡ ನೀಡಿದ್ದಾರೆ. ಬಳಿಕ ಮಗುವನ್ನು ತುರ್ತಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮಗು ಕೊನೆಯುಸಿರೆಳೆದಿದೆ.

ಹೇರಂಜೆಯಲ್ಲಿ ಮೌನ:

ಈ ಘಟನೆಯಲ್ಲಿ ಯಾವುದೇ ನಿರ್ಲಕ್ಷ್ಯವಿಲ್ಲ, ಯಾವುದೇ ತಪ್ಪಿಲ್ಲ. ಆದರೆ ವಿಧಿಯ ಕ್ರೂರಾಟಕ್ಕೆ ಒಂದೂವರೆ ವರ್ಷದ ಕಂದಮ್ಮ ಬಲಿಯಾಗಿದೆ. ಮಗುವಿನ ನಗುವಿನಿಂದ ಕಂಗೊಳಿಸುತ್ತಿದ್ದ ಮನೆ ಇಂದು ಮೌನವಾಗಿದೆ. ಈ ದಾರುಣ ಘಟನೆ ಕೇವಲ ಒಂದು ಕುಟುಂಬವನ್ನಷ್ಟೇ ಅಲ್ಲ, ಇಡೀ ಹೇರಂಜೆ ಗ್ರಾಮವನ್ನೇ ತಲ್ಲಣಗೊಳಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles