Home ಕ್ರೈಂ ನ್ಯೂಸ್ ಅನಾರೋಗ್ಯ ಪೀಡಿತ ಹೆತ್ತ ತಾಯಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾದ KSRTC ನೌಕರ ಪುತ್ರ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅನಾರೋಗ್ಯ ಪೀಡಿತ ಹೆತ್ತ ತಾಯಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾದ KSRTC ನೌಕರ ಪುತ್ರ!

Share
ತಾಯಿ
Share

ಬೆಳಗಾವಿ: ಹೆತ್ತ ತಾಯಿಯೇ ಪ್ರತ್ಯಕ್ಷ ದೈವ ಎನ್ನುವ ಸಮಾಜದಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ತಾಯಿಯನ್ನು ಪುತ್ರನೊಬ್ಬ ರಾತ್ರೋರಾತ್ರಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿರುವ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಸಾಲೊಳ್ಳಿ ಗ್ರಾಮದ ನಿವಾಸಿ ಕಮಲಮ್ಮ ಕಟ್ಟಿ (ವೃದ್ಧೆ) ಎಂಬುವವರೇ ಪುತ್ರನಿಂದ ಕೈಬಿಡಲ್ಪಟ್ಟ ದುರ್ದೈವಿ. ಸಂಕೇಶ್ವರ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ (KSRTC) ನೌಕರನಾಗಿ ಕೆಲಸ ಮಾಡುತ್ತಿರುವ ಇವರ ಮಗ ಸಂತೋಷ್ ಕಟ್ಟಿ ಎಂಬಾತನೇ ಈ ಕೃತ್ಯ ಎಸಗಿದ ಪಾಪಿ ಎಂದು ತಿಳಿದುಬಂದಿದೆ.

ರಾತ್ರಿ 10 ಗಂಟೆಗೆ ನಡೆದ ಕೃತ್ಯ:

ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿದ್ದ ತಾಯಿಯನ್ನು ನಿನ್ನೆ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಮುನವಳ್ಳಿ ಡ್ಯಾಂ ಸಮೀಪದ ಜನರಿಲ್ಲದ ಗುಡ್ಡಗಾಡು ಪ್ರದೇಶಕ್ಕೆ ಕರೆತಂದ ಸಂತೋಷ್, ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಕತ್ತಲಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಸಿಲುಕಿದ ವೃದ್ಧೆ ಕಣ್ಣೀರಿಡುತ್ತಾ ತನಗಾದ ನೋವನ್ನು ಸ್ಥಳೀಯರ ಮುಂದೆ ಹೇಳಿಕೊಂಡಿದ್ದಾರೆ.

ವೃದ್ಧೆಯ ಪರಿಸ್ಥಿತಿಯನ್ನು ಕಂಡು ಮರುಗಿದ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಅವರಿಗೆ ತಾತ್ಕಾಲಿಕ ಆಶ್ರಯ ಹಾಗೂ ಆರೈಕೆ ಒದಗಿಸಿದ್ದಾರೆ. ಅಲ್ಲದೆ, ಹೆತ್ತ ತಾಯಿಯನ್ನು ಅನಾಥೆಯಂತೆ ರಸ್ತೆಗೆ ತಳ್ಳಿದ ಸರ್ಕಾರಿ ನೌಕರ ಸಂತೋಷ್ ಕಟ್ಟಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ:

ಈ ಘಟನೆ ಇಡೀ ಮಾನವಕುಲವೇ ತಲೆತಗ್ಗಿಸುವಂತದ್ದಾಗಿದ್ದು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು. ವೃದ್ಧೆಗೆ ಸೂಕ್ತ ರಕ್ಷಣೆ ನೀಡಿ, ಆಕೆಯನ್ನು ಬೀದಿಗೆ ತಳ್ಳಿದ ಪುತ್ರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *