ನವದೆಹಲಿ: ಭಾರತದಲ್ಲಿ ಈ ವರ್ಷ ಕಳೆದ 11 ವರ್ಷಗಳಲ್ಲೇ ಅತ್ಯಂತ ದುರ್ಬಲ ಮುಂಗಾರು (Monsoon) ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ದೇಶದ ಆರ್ಥಿಕತೆ ಮತ್ತು ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ. ಪೆಸಿಫಿಕ್ ಮಹಾಸಾಗರದಲ್ಲಿ ‘ಎಲ್ ನಿನೋ’ (El Niño) ಪ್ರಭಾವ ತೀವ್ರಗೊಳ್ಳುತ್ತಿರುವುದರಿಂದ, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
90 ಪ್ರತಿಶತಕ್ಕೆ ಕುಸಿದ ಮುನ್ಸೂಚನೆ:
ಕಳೆದ ಏಪ್ರಿಲ್ ತಿಂಗಳಲ್ಲಿ ಶೇ. 92 ರಷ್ಟು ಮಳೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಈಗ ಈ ಮುನ್ಸೂಚನೆಯನ್ನು ಶೇ. 90 ಕ್ಕೆ ಇಳಿಸಲಾಗಿದೆ. ಇದು 2015 ರ ನಂತರ ಭಾರತ ಎದುರಿಸುತ್ತಿರುವ ಅತ್ಯಂತ ಕಳಪೆ ಮುಂಗಾರು ಪ್ರದರ್ಶನವಾಗುವ ಸಾಧ್ಯತೆ ಇದೆ. ಜೂನ್ ತಿಂಗಳಿನಲ್ಲಿಯೂ ಮಳೆ ತಡವಾಗಲಿದ್ದು, ದಕ್ಷಿಣ ಕರಾವಳಿಗೆ ಮುಂಗಾರು ಪ್ರವೇಶಿಸುವುದು ವಿಳಂಬವಾಗಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ತಿಳಿಸಿದ್ದಾರೆ.
ಯಾವ ಭಾಗಗಳಿಗೆ ಆತಂಕ?
ವಿಶೇಷವಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ ಸೇರಿದಂತೆ ಉತ್ತರ, ಪಶ್ಚಿಮ ಮತ್ತು ಮಧ್ಯ ಭಾರತದ ರಾಜ್ಯಗಳು ತೀವ್ರ ಮಳೆ ಕೊರತೆಯನ್ನು ಎದುರಿಸಲಿವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ತೀವ್ರ ಕೈಕೊಡುವ ಸಾಧ್ಯತೆ ಇದ್ದು, ಇದು ಕೃಷಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಆರ್ಥಿಕತೆ ಮತ್ತು ಬೆಲೆ ಏರಿಕೆ ಬಿಸಿ:
ಭಾರತದ ಅರ್ಧದಷ್ಟು ಕೃಷಿ ಭೂಮಿ ಇಂದಿಗೂ ಮಳೆಯನ್ನೇ ನಂಬಿಕೊಂಡಿದೆ. ಮುಂಗಾರು ಕೈಕೊಟ್ಟರೆ ಭತ್ತ, ಬೇಳೆಕಾಳುಗಳು, ಹತ್ತಿ ಮತ್ತು ಎಣ್ಣೆಕಾಳುಗಳ ಇಳುವರಿ ಕುಸಿಯಲಿದೆ. ಈಗಾಗಲೇ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಇಂಧನ ಬೆಲೆ ಏರುತ್ತಿದ್ದು, ಇದರ ಬೆನ್ನಲ್ಲೇ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಾದರೆ ಹಣದುಬ್ಬರ (Inflation) ಶೇ. 5.5 ಕ್ಕೆ ಏರಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರ ಆದಾಯ ಕಡಿಮೆಯಾಗುವುದರಿಂದ ಬೈಕ್, ಗೃಹೋಪಯೋಗಿ ವಸ್ತುಗಳ ಮಾರಾಟವೂ ಕುಸಿಯಲಿದ್ದು, ಒಟ್ಟಾರೆ ದೇಶದ ಜಿಡಿಪಿ (GDP) ಬೆಳವಣಿಗೆಗೆ ಇದು ಹಿನ್ನಡೆಯಾಗಬಹುದು.





Leave a comment