Home ಕ್ರೈಂ ನ್ಯೂಸ್ ₹4 ಲಕ್ಷ ಕೊಟ್ಟರೆ ಎಸ್‌ಎಸ್‌ಸಿ ಪಾಸ್! ಆನ್‌ಲೈನ್ ಪರೀಕ್ಷೆ ದಂಧೆ ಬಯಲಿಗೆಳೆದ ಯುಪಿ ಎಸ್‌ಟಿಎಫ್.
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

₹4 ಲಕ್ಷ ಕೊಟ್ಟರೆ ಎಸ್‌ಎಸ್‌ಸಿ ಪಾಸ್! ಆನ್‌ಲೈನ್ ಪರೀಕ್ಷೆ ದಂಧೆ ಬಯಲಿಗೆಳೆದ ಯುಪಿ ಎಸ್‌ಟಿಎಫ್.

Share
ಪರೀಕ್ಷೆ
Share

ಗ್ರೇಟರ್ ನೋಯ್ಡಾ: ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳ ಪಾರದರ್ಶಕತೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಆನ್‌ಲೈನ್ ಪರೀಕ್ಷೆಗಳಲ್ಲಿ ಅಕ್ರಮ ಎಸಗುತ್ತಿದ್ದ ಬೃಹತ್ ಜಾಲವನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಭೇದಿಸಿದೆ.

ಗ್ರೇಟರ್ ನೋಯ್ಡಾದ ಪರೀಕ್ಷಾ ಕೇಂದ್ರವೊಂದರ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ದಂಧೆಯ ಮಾಸ್ಟರ್‌ಮೈಂಡ್ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ರೂಪಾಯಿ ನಗದು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

₹4 ಲಕ್ಷಕ್ಕೆ ಪರೀಕ್ಷೆ ಪಾಸ್ ಗ್ಯಾರಂಟಿ!

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF), ಸಚಿವಾಲಯ ಭದ್ರತಾ ಪಡೆ (SSF) ಕಾನ್ಸ್‌ಟೇಬಲ್ ಜಿಡಿ ಮತ್ತು ಅಸ್ಸಾಂ ರೈಫಲ್ಸ್ ರೈಫಲ್‌ಮ್ಯಾನ್ ಪರೀಕ್ಷೆ-2026 ರ ಆನ್‌ಲೈನ್ ಪರೀಕ್ಷೆಗಳನ್ನು ಈ ಗ್ಯಾಂಗ್ ಗುರಿಯಾಗಿಸಿಕೊಂಡಿತ್ತು. ಪರೀಕ್ಷೆ ಪಾಸ್ ಮಾಡಿಸಿಕೊಡಲು ಪ್ರತಿ ಅಭ್ಯರ್ಥಿಯಿಂದ ಸುಮಾರು 4 ಲಕ್ಷ ರೂಪಾಯಿಗಳನ್ನು ಈ ಜಾಲ ವಸೂಲಿ ಮಾಡುತ್ತಿತ್ತು ಎಂದು ಎಸ್‌ಟಿಎಫ್ ತಿಳಿಸಿದೆ.

ಹ್ಯಾಕ್ ಮಾಡದೆ ಅಕ್ರಮ ಎಸಗಿದ ಹೈಟೆಕ್ ಕಿಲಾಡಿಗಳು

ತನಿಖಾಧಿಕಾರಿಗಳ ಪ್ರಕಾರ, ಆರೋಪಿಗಳು ಎಸ್‌ಎಸ್‌ಸಿ ಮುಖ್ಯ ಸರ್ವರ್ ಅನ್ನು ನೇರವಾಗಿ ಹ್ಯಾಕ್ ಮಾಡಿರಲಿಲ್ಲ. ಬದಲಿಗೆ ತಾಂತ್ರಿಕ ತಜ್ಞರ ಸಹಾಯದಿಂದ ಪರೀಕ್ಷಾ ಕೇಂದ್ರದಲ್ಲೇ ‘ಪ್ರಾಕ್ಸಿ ಸರ್ವರ್’ (Proxy Server) ಅಳವಡಿಸಿದ್ದರು.

ಅಕ್ರಮದ ಕಾರ್ಯಾಚರಣೆ ಹೀಗಿತ್ತು: ಸ್ಕ್ರೀನ್ ಶೇರಿಂಗ್ ಆ್ಯಪ್ ಮೂಲಕ ಪರೀಕ್ಷಾ ಕೇಂದ್ರದ ಕಂಪ್ಯೂಟರ್ ಪರದೆಯನ್ನು ಹೊರಗಿರುವ ಸೌರ‍್ಸ್ (Solvers) ಅಥವಾ ಉತ್ತರ ಹೇಳುವ ತಜ್ಞರಿಗೆ ರವಾನಿಸಲಾಗುತ್ತಿತ್ತು. ಅವರು ಹೊರಗಿನಿಂದಲೇ ಪ್ರಶ್ನೆಗಳನ್ನು ಬಿಡಿಸಿ, ಪರೀಕ್ಷಾ ಕೇಂದ್ರದ ಒಳಗಿರುವ ಅಭ್ಯರ್ಥಿಗಳ ಕಂಪ್ಯೂಟರ್‌ನಲ್ಲಿ ಸರಿಯಾದ ಉತ್ತರಗಳನ್ನು ಮಾರ್ಕ್ ಮಾಡುತ್ತಿದ್ದರು.

ಪ್ರಮುಖ ಆರೋಪಿಗಳ ಬಂಧನ

ಖಚಿತ ಮಾಹಿತಿ ಮೇರೆಗೆ ಗ್ರೇಟರ್ ನೋಯ್ಡಾದ ನಾಲೆಡ್ಜ್ ಪಾರ್ಕ್ ಪ್ರದೇಶದಲ್ಲಿರುವ “ಬಾಲಾಜಿ ಡಿಜಿಟಲ್ ಜೋನ್” ಪರೀಕ್ಷಾ ಕೇಂದ್ರದ ಮೇಲೆ ಎಸ್‌ಟಿಎಫ್ ದಾಳಿ ನಡೆಸಿದೆ. ದಂಧೆಯ ಸೂತ್ರಧಾರ ಪ್ರದೀಪ್ ಚೌಹಾಣ್ ಮತ್ತು ತಾಂತ್ರಿಕ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಅರುಣ್ ಕುಮಾರ್ ಸೇರಿದಂತೆ ಸಂದೀಪ್ ಭಾಟಿ, ನಿಶಾಂತ್ ರಾಘವ್, ಅಮಿತ್ ರಾಣಾ, ಶಾಕಿರ್ ಮಲಿಕ್ ಮತ್ತು ವಿವೇಕ್ ಕುಮಾರ್ ಅವರನ್ನು ಬಂಧಿಸಲಾಗಿದೆ.

ಇತ್ತೀಚೆಗಷ್ಟೇ ನೀಟ್ (NEET-UG 2026) ಪರೀಕ್ಷಾ ಅಕ್ರಮದ ವಿವಾದ ದೇಶಾದ್ಯಂತ ಸಂಚಲನ ಮೂಡಿಸಿರುವ ಬೆನ್ನಲ್ಲೇ ಈ ಎಸ್‌ಎಸ್‌ಸಿ ಹಗರಣ ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ತಾಂತ್ರಿಕ ತಜ್ಞರು ಮತ್ತು ಇದರ ಲಾಭ ಪಡೆದ ಅಭ್ಯರ್ಥಿಗಳ ಪತ್ತೆಗಾಗಿ ಎಸ್‌ಟಿಎಫ್ ತನಿಖೆ ಮುಂದುವರಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles