ದಾವಣಗೆರೆ: ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಮತ್ತು ರಾಗಿಯನ್ನು ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ದಿನಾಂಕ 19-05-2026 ರಂದು ದಾವಣಗೆರೆ ನಗರದ ಹಳೇ ಪಿಬಿ ರಸ್ತೆಯ ಟಿವಿಎಸ್ ಶೋರೂಂ ಹಿಂಭಾಗದಲ್ಲಿ ಪಡಿತರ ಧಾನ್ಯಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿದ್ಯಾನಗರ ಪೊಲೀಸ್ ನಿರೀಕ್ಷಕರಾದ ಶಿಲ್ಪಾ ವೈ.ಎಸ್. ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರ ತಂಡ ಜಂಟಿ ದಾಳಿ ನಡೆಸಿತು.
6.14 ಲಕ್ಷ ರೂ. ಮೌಲ್ಯದ ಮಾಲು ವಶ:
ದಾಳಿಯ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2,04,750 ರೂ. ಮೌಲ್ಯದ 9100 ಕೆ.ಜಿ ಪಡಿತರ ಅಕ್ಕಿ ಹಾಗೂ 1,10,040 ರೂ. ಮೌಲ್ಯದ 2620 ಕೆ.ಜಿ ಪಡಿತರ ರಾಗಿಯನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಕೃತ್ಯಕ್ಕೆ ಬಳಸಲಾದ 3,00,000 ರೂ. ಅಂದಾಜು ಮೌಲ್ಯದ ಲಾರಿಯನ್ನು ಅಮಾನತುಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಒಟ್ಟು ಮಾಲಿನ ಮೌಲ್ಯ 6,14,790/- ರೂ. ಎಂದು ಅಂದಾಜಿಸಲಾಗಿದೆ.
ಆಹಾರ ನಿರೀಕ್ಷಕರು ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 112/2026, ಕಲಂ 3 ಮತ್ತು 7 ಅತ್ಯಗತ್ಯ ವಸ್ತುಗಳ ಕಾಯ್ದೆ (EC Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕಿ ಶಿಲ್ಪ ವೈ.ಎಸ್, ಪಿಎಸ್ಐ ಸಚಿನ್ ಬಿರಾದಾರ್ ಹಾಗೂ ಸಿಬ್ಬಂದಿಗಳಾದ ಬೋಜಪ್ಪ, ನೀಲಪ್ಪ ಭಾಗವಹಿಸಿದ್ದರು. ಯಶಸ್ವಿ ದಾಳಿ ನಡೆಸಿದ ಇಡೀ ತಂಡವನ್ನು ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಅವರು ಪ್ರಶಂಸಿಸಿದ್ದಾರೆ.





Leave a comment