ಕೃಷ್ಣಗಿರಿ: ದೇಶ ಕಾಯುವ ಯೋಧನೊಬ್ಬ ತನ್ನ ಮನೆಯವರಿಂದಲೇ ದಾರುಣವಾಗಿ ಹತ್ಯೆಯಾದ ಘಟನೆಯೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬೆಲ್ಲಾರಂಪಳ್ಳಿಯಲ್ಲಿ ನಡೆದಿದೆ. ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಪತ್ನಿಯು ತನ್ನ ಪ್ರಿಯಕರನೊಂದಿಗೆ ಸೇರಿ ಪತಿ ಮತ್ತು ಮಾವನನ್ನು ಕೊಲೆ ಮಾಡಿ, ಶವಗಳನ್ನು ಸುಟ್ಟು ಹಾಕಿರುವ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಪರಿಚಯ ಮತ್ತು ಅಕ್ರಮ ಸಂಬಂಧ
ಬೆಲ್ಲಾರಂಪಳ್ಳಿಯ ನಿವಾಸಿ ಮಹೇಶ್ ಕುಮಾರ್ (43) ಅವರು ಭಾರತೀಯ ಸೇನೆಯಲ್ಲಿ ಜವಾನರಾಗಿ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಭಾನುಪ್ರಿಯಾ (30) ಮನೆಗೆಲಸ ನೋಡಿಕೊಳ್ಳುತ್ತಿದ್ದರು. ಮಹೇಶ್ ಕುಮಾರ್ ಕರ್ತವ್ಯದ ನಿಮಿತ್ತ ಊರಿನಲ್ಲಿ ಇಲ್ಲದ ಸಮಯದಲ್ಲಿ, ಭಾನುಪ್ರಿಯಾಗೆ ವ್ಯಾನ್ ಚಾಲಕ ಪೂವರಸನ್ (24) ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆದಿತ್ತು. ಈ ವಿಷಯ ತಿಳಿದ ಮಹೇಶ್ ಕುಮಾರ್ ಅವರು ರಜೆಯ ಮೇಲೆ ಊರಿಗೆ ಬಂದು ಪತ್ನಿಯನ್ನು ತೀವ್ರವಾಗಿ ಎಚ್ಚರಿಸಿದ್ದರು.
ಅರ್ಧರಾತ್ರಿ ನಡೆದ ಹತ್ಯಾಕಾಂಡ
ಮೇ 10ರ ರಾತ್ರಿ ಮಹೇಶ್ ಕುಮಾರ್ ಅವರು ಮನೆಯಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾಗ, ಪ್ರಿಯಕರ ಪೂವರಸನ್ ಕತ್ತಿಯೊಂದಿಗೆ ಮನೆಗೆ ನುಗ್ಗಿದ್ದಾನೆ. ಮೊದಲು ಮಹೇಶ್ ಕುಮಾರ್ ಮೇಲೆ ದಾಳಿ ಮಾಡಿದ ಆತ, ಇದನ್ನು ತಡೆಯಲು ಬಂದ ವೃದ್ಧ ಮಾವ ಸೆಲ್ಲಪ್ಪನ್ ಅವರನ್ನೂ ಇರಿದು ಕೊಂದಿದ್ದಾನೆ. ಈ ಕೃತ್ಯದಲ್ಲಿ ಭಾನುಪ್ರಿಯಾ ಕೂಡ ಪ್ರಿಯಕರನಿಗೆ ಸಾಥ್ ನೀಡಿದ್ದಾಳೆ.
ಪುರಾವೆ ನಾಶಕ್ಕೆ ಸ್ಕೂಟರ್ ಬಳಕೆ
ಹತ್ಯೆಯ ನಂತರ ಇಬ್ಬರೂ ಸೇರಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆದು ಸಾಕ್ಷ್ಯ ನಾಶಪಡಿಸಿದ್ದಾರೆ. ನಂತರ ಎರಡು ಶವಗಳನ್ನು ಬೇರೆ ಬೇರೆ ಗೋಣಿ ಚೀಲಗಳಲ್ಲಿ ತುಂಬಿಸಿ, ಅವುಗಳನ್ನು ಮನೆಯಲ್ಲಿದ್ದ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಇಟ್ಟುಕೊಂಡು ಅರ್ಧರಾತ್ರಿ ಹೊರಬಂದಿದ್ದಾರೆ. ದಾರಿಯಲ್ಲಿ ಪೆಟ್ರೋಲ್ ಬಂಕ್ನಿಂದ ಡೀಸೆಲ್ ಖರೀದಿಸಿ, ವೆಪ್ಪಾಲಂಪಟ್ಟಿ ಪ್ರದೇಶದ ನಿರ್ಜನ ಪ್ರದೇಶಗಳಲ್ಲಿ ಶವಗಳನ್ನು ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಬಣ್ಣ ಬಯಲಾಗಿದ್ದು ಹೇಗೆ?
ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅನಾಮಧೇಯ ಶವಗಳು ಪತ್ತೆಯಾದಾಗ ಪೊಲೀಸರು ತನಿಖೆ ಆರಂಭಿಸಿದರು. ನಾಪತ್ತೆಯಾದವರ ವಿವರಗಳನ್ನು ಕಲೆಹಾಕಿದಾಗ ಮಹೇಶ್ ಕುಮಾರ್ ಅವರ ಮೇಲೆ ಅನುಮಾನ ಬಂದು ಭಾನುಪ್ರಿಯಾಳನ್ನು ವಿಚಾರಣೆಗೊಳಪಡಿಸಿದರು. ಆರಂಭದಲ್ಲಿ ಹಾರಿಕೆ ಉತ್ತರ ನೀಡಿದ ಆಕೆ, ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಪ್ರಿಯಕರನೊಂದಿಗೆ ಸೇರಿ ಮಾಡಿದ ಈ ಭೀಕರ ಕೊಲೆಯನ್ನು ಒಪ್ಪಿಕೊಂಡಿದ್ದಾಳೆ.
ಜೈಲು ಪಾಲಾದ ಆರೋಪಿಗಳು
ತನ್ನ ಕಾಮದ ಆಸೆಗೆ ಅಡ್ಡಿಯಾದ ಪತಿ ಮತ್ತು ತನ್ನನ್ನು ಮಗಳಂತೆ ನೋಡಿಕೊಂಡ ಮಾವನನ್ನೇ ಕೊಲೆ ಮಾಡಿದ ಭಾನುಪ್ರಿಯಾ ಹಾಗೂ ಪ್ರಿಯಕರ ಪೂವರಸನ್ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ದೇಶ ಕಾಯುವ ಯೋಧನಿಗೆ ಮನೆಯಲ್ಲೇ ಇಂತಹ ದುರ್ಗತಿ ಬಂದಿರುವುದು ಕೃಷ್ಣಗಿರಿ ಭಾಗದ ಜನರನ್ನು ತೀವ್ರ ಆಘಾತಕ್ಕೀಡು ಮಾಡಿದೆ.





Leave a comment