Home ದಾವಣಗೆರೆ ರಾಗಿ ಖರೀದಿ ಪ್ರಕ್ರಿಯೆ: ನೋಂದಾಯಿತ ರೈತರಿಗೆ ಮೇ 5 ರವರೆಗೆ ಮಾರಾಟಕ್ಕೆ ಅಂತಿಮ ಅವಕಾಶ
ದಾವಣಗೆರೆಬೆಂಗಳೂರುವಾಣಿಜ್ಯ

ರಾಗಿ ಖರೀದಿ ಪ್ರಕ್ರಿಯೆ: ನೋಂದಾಯಿತ ರೈತರಿಗೆ ಮೇ 5 ರವರೆಗೆ ಮಾರಾಟಕ್ಕೆ ಅಂತಿಮ ಅವಕಾಶ

Share
ರಾಗಿ
Share

ದಾವಣಗೆರೆ: 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯು ಮುಕ್ತಾಯದ ಹಂತ ತಲುಪಿದ್ದು, ಬಾಕಿ ಇರುವ ನೋಂದಾಯಿತ ರೈತರು ಮೇ 05 ರೊಳಗೆ ರಾಗಿ ಮಾರಾಟ ಮಾಡಲು ಅಂತಿಮ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಖರೀದಿಯ ವಿವರ: ಜಿಲ್ಲೆಯ ದಾವಣಗೆರೆ, ಹರಿಹರ, ಚನ್ನಗಿರಿ, ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕುಗಳ ಖರೀದಿ ಕೇಂದ್ರಗಳಲ್ಲಿ ಈಗಾಗಲೇ ರಾಗಿ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 4,954 ರೈತರು 1,38,065 ಕ್ವಿಂಟಾಲ್ ರಾಗಿ ಮಾರಾಟಕ್ಕೆ ನೋಂದಾಯಿಸಿಕೊಂಡಿದ್ದರು. ಮೇ 01 ರ ಅಂತ್ಯಕ್ಕೆ ಒಟ್ಟು 4,779 ರೈತರಿಂದ 1,33,002 ಕ್ವಿಂಟಾಲ್ (ಶೇ. 96.33) ರಾಗಿಯನ್ನು ಈಗಾಗಲೇ ಖರೀದಿಸಲಾಗಿದೆ.

ಅಂತಿಮ ಗಡುವು: ಪ್ರಸ್ತುತ ಖರೀದಿ ಕೇಂದ್ರಗಳಿಗೆ ರಾಗಿ ತರುವ ರೈತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಜಿಲ್ಲೆಯ ಬಹುತೇಕ ರೈತರ ಬಳಿ ರಾಗಿ ದಾಸ್ತಾನು ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಮೇ ಮತ್ತು ಜೂನ್ ಮಾಹೆಯ ಪಡಿತರ ವಿತರಣೆಗಾಗಿ ಖರೀದಿಸಿದ ರಾಗಿಯನ್ನು ಮೇ ತಿಂಗಳಿನಲ್ಲೇ ವಿತರಿಸಲು ಆದೇಶಿಸಿದೆ.

ಆದ್ದರಿಂದ, ಇನ್ನುಳಿದ 175 ನೋಂದಾಯಿತ ರೈತರು ತಾವು ಬೆಳೆದಿರುವ ರಾಗಿ ದಾಸ್ತಾನನ್ನು ಮೇ 5, 2026ರೊಳಗೆ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಬೇಕು. ಈ ದಿನಾಂಕದ ನಂತರ ಖರೀದಿ ಕೇಂದ್ರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಅರ್ಹ ರೈತರು ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *