ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಸಮರ್ಥ್ ಶಾಮನೂರು ಗೆದ್ದೇ ಗೆಲ್ತಾರೆ. ನನಗೆ ಟಾಸ್ಕ್ ಕೊಟ್ಟಿದ್ದು, ಈ ಟಾಸ್ಕ್ ಸಮರ್ಥವಾಗಿ ನಿಭಾಯಿಸಿ ಸಮರ್ಥ್ ಗೆದ್ದೇ ಗೆಲ್ಲಿಸುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮರ್ಥ್ ಶಾಮನೂರು ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ. ಇದರಲ್ಲಿ ಅನುಮಾನ ಬೇಡ ಎಂದು ಹೇಳಿದರು.
ಮಾಧ್ಯಮಗಳು ವಿನಾಕಾರಣ ನನ್ನ ಹಾಗೂ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಡುವೆ ಮುನಿಸಿದೆ ಎಂದು ಅಪಪ್ರಚಾರ ಮಾಡಿವೆ. ನಾವು ಒಟ್ಟಾಗಿದ್ದೇವೆ. ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಸಿಎಂ ಸಿದ್ದರಾಮಯ್ಯರು ಈಗಾಗಲೇ ಪ್ರಚಾರ ಮಾಡಿ ಹೋಗಿದ್ದಾರೆ. ನಾನು ಇಲ್ಲಿಗೆ ಏಪ್ರಿಲ್ 5 ರಂದು ಬರುತ್ತೇನೆ ಎಂದು ಹೇಳಿದ್ದರು. ಹಾಗಾಗಿ ಪ್ರಚಾರಕ್ಕೆ ಬಂದಿದ್ದೇನೆ. ಪ್ರಚಾರ ಮಾಡಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುತ್ತೇವೆಂಬ ಆಶ್ವಾಸನೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ ಎಂದು ತಿಳಿಸಿದರು.
ನನಗೆ ಟಾಸ್ಕ್ ಕೊಟ್ಟದ್ದಾರೆ. ಅಸಮಾಧಾನಿತರ ಸಮಾಧಾನಪಡಿಸುವಂತೆ. ಅದನ್ನು ನಿಭಾಯಿಸುತ್ತೇನೆ. ಈಗಾಗಲೇ ನಮ್ಮ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲೂ ಮುಸ್ಲಿಂ ಸಮುದಾಯದಿಂದ ಅಮಾನುಲ್ಲಾ ಖಾನ್ ಸೇರಿದಂತೆ ನಾಲ್ಕೈದು ಮಂದಿ ಸ್ಪರ್ಧೆ ಮಾಡಿದ್ದರು. ಆದರೂ ಶಾಮನೂರು ಶಿವಶಂಕರಪ್ಪರು ಭರ್ಜರಿ ಬಹುಮತದಿಂದ ಜಯಭೇರಿ ಬಾರಿಸಿದ್ದರು. ಈ ಬಾರಿಯೂ ಕಾಂಗ್ರೆಸ್ ಗೆಲ್ಲುತ್ತದೆ. ಬಿಜೆಪಿ ಕೋಮುವಾದದ ಮುಖವಾಡ ಮುಸ್ಲಿಂ ಸಮುದಾಯಕ್ಕೆ ಗೊತ್ತು ಎಂದು ಜಮೀರ್ ಅಹ್ಮದ್ ಹೇಳಿದರು.





Leave a comment