ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ ಶಾಮನೂರು ಅವರಿಗೆ ಪಂಚಮಸಾಲಿ ಸಮಾಜದ ಎಲ್ಲಾ ಬಾಂಧವರು ಬೆಂಬಲ ನೀಡಬೇಕು ಎಂದು ಉದ್ಯಮಿ, ಕಾಂಗ್ರೆಸ್ ಮುಖಂಡ ಎನ್. ಬಕ್ಕೇಶ್ ಮನವಿ ಮಾಡಿದ್ದಾರೆ.
ದಕ್ಷಿಣ ಭಾಗದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಪಂಚಮಸಾಲಿ ಸಮಾಜದ ಬಾಂಧವರಿದ್ದು, ನಿಮ್ಮೆಲ್ಲಾ ಮತಗಳನ್ನು ಈ ಬಾರಿ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ಗೆ ಹಾಕುವ ಮೂಲಕ ಶಕ್ತಿ ತುಂಬಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ಪಂಚಮಸಾಲಿ ಸಮಾಜವು ದೀರ್ಘಕಾಲದಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೂ, ಆ ಪಕ್ಷದ ನಾಯಕರು ಸಮಾಜಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಬಿಜೆಪಿಯ ರಾಜ್ಯ ನಾಯಕರಾದ ಯತ್ನಾಳ್ ಸೇರಿದಂತೆ ಜಿಲ್ಲೆಯ ಪ್ರಮುಖರಾದ ಎಂ.ಜಿ. ಬಕೇಶ್, ಬಿ. ಲೋಕೇಶ್, ಹೆಚ್.ಎಸ್. ನಾಗರಾಜ ಹಾಗೂ ಬಿ.ಜಿ. ಅಜಯಕುಮಾರ್ ಅವರಿಗೆ ಟಿಕೆಟ್ ಸಿಗದಂತೆ ಅಡ್ಡಿಪಡಿಸುವುದು ಅಥವಾ ಟಿಕೆಟ್ ಸಿಕ್ಕರೂ ಅವರನ್ನೇ ಸೋಲಿಸಿ ತೇಜೋವಧೆ ಮಾಡುವ ಕೆಲಸಗಳು ಆ ಪಕ್ಷದಲ್ಲಿ ನಡೆಯುತ್ತಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಮಾಜದ ಹಿತದೃಷ್ಟಿಯಿಂದ ಅಭ್ಯರ್ಥಿ ಶಾಮನೂರು ಸಮರ್ಥ ಅವರನ್ನು ಬೆಂಬಲಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಿಸಿದ್ದಾರೆ.





Leave a comment