ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಬೇಡಿಕೆ ಇಟ್ಟಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಡುವಿನ ಮಾತಿನ ಸಮರವೇ ನಡೆದಿತ್ತು. ಅವನ್ಯಾರು ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡಲು ಎಂದು ಖಾರವಾಗಿ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದ್ದರು. ನಂತರು ಸಿಎಂ ಸಿದ್ದರಾಮಯ್ಯರು ಇಬ್ಬರು ಸಚಿವರ ನಡುವಿನ ವೈಮನಸು ಶಮನಗೊಳಿಸಿದ್ದರು.
ಜಮೀರ್ ಅಹ್ಮದ್ ಅವರು ಶಾಮನೂರು ಶಿವಶಂಕರಪ್ಪರು ಕಳೆದ ವಿಧಾನಸಭೆ ಚುನಾವಣೆ ವೇಳೆ ಇದೇ ನನ್ನ ಕೊನೆ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುತ್ತೇನೆಂದು ಹೇಳಿದ್ದ ವಿಡಿಯೋವನ್ನು ದಾವಣಗೆರೆ ದಕ್ಷಿಣ ಅಲ್ಪಸಂಖ್ಯಾತ ಮುಖಂಡರು ತೋರಿಸಿದ್ದಾರೆ. ಹಾಗಾಗಿ, ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ? ನನ್ನ ಬಳಿ ಬಂದು ಟಿಕೆಟ್ ಕೇಳಿದ್ದಾರೆ. ನಾನು ಮುಸ್ಲಿಂ ಸಮುದಾಯದ ನಾಯಕ. ಕೇಳುವುದು ಸಹಜ. ಹೈಕಮಾಂಡ್ ಟಿಕೆಟ್ ನೀಡುತ್ತೆ. ನಾನಾಗಲೀ ಮಲ್ಲಿಕಾರ್ಜುನ್ ಆಗಲೀ ಅಲ್ಲ ಎಂದು ಹೇಳಿದ್ದರು.
ಈ ಬಳಿಕ ಇಬ್ಬರು ಸಚಿವರ ನಡುವಿನ ಮಾತಿನ ಸಮರದ ನಡುವೆ ಬಿಜೆಪಿ ಪಕ್ಷದ ಟೀಕೆಗೆ ಗುರಿಯಾಗಿತ್ತು. ಇದನ್ನು ಗಮನಿಸಿದ ಸಿದ್ದರಾಮಯ್ಯರು ಮಲ್ಲಿಕಾರ್ಜುನ್ ಮತ್ತು ಜಮೀರ್ ಅಹ್ಮದ್ ನಡುವೆ ಶಾಂತಿ ಸಂಧಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ನಾನು ಜಮೀರ್ ಅಹ್ಮದ್ ತುಂಬಾ ಒಳ್ಳೆಯ ಸ್ನೇಹಿತರು ಎಂದು ಹೇಳುವ ಮೂಲಕ ಎಲ್ಲವೂ ಶಾಂತಿಯಾಗಿದೆ ಎಂಬ ಸಂದೇಶ ರವಾನಿಸಿದರು.
ನಾನು ಮಂತ್ರಿ ಜಮೀರ್ ಅಹ್ಮದ್ ಸ್ನೇಹಿತರು. ಇಬ್ಬರು ಚೆನ್ನಾಗಿ ಮಾತನಾಡುತ್ತೇವೆ. ನನಗೆ ಬಾರಪ್ಪಾ ಮಲ್ಲಣ್ಣ ಅಂತಾ ಜಮೀರ್ ಕರೀತಾರೆ. ನಾನು ಜಮೀರ್ ಬಾರಪ್ಪಾ ಎನ್ನುತ್ತೇನೆ. ಇಬ್ಬರೂ ಸಲುಗೆಯಿಂದಲೇ ಮಾತನಾಡುತ್ತೇವೆ. ಇದರಲ್ಲಿ ವಿಶೇಷ ಇಲ್ಲ. ಆದರೆ ಮಾಧ್ಯಮದವರು ಇದನ್ನೇ ದೊಡ್ಡದಾಗಿ ಮಾಡಿ ವೈಮನಸ್ಸು ಅಂತೆಲ್ಲಾ ಸುದ್ದಿ ಮಾಡಿದರು. ನನ್ನ ಹೇಳಿಕೆಯನ್ನಾಗಲೀ, ಜಮೀರ್ ಅಹ್ಮದ್ ಹೇಳಿಕೆಯನ್ನಾಗಲೀ ತಪ್ಪಾಗಿ ಅರ್ಥೈಸುವುದು ಬೇಡ. ದೊಡ್ಡದಾಗಿ ಬೆಳೆಸುವುದು ಬೇಡಿ. ಈ ಕೆಲಸ ಮಾಡಬೇಡಿ. ನಗುತ್ತಾ ನಗುತ್ತಾ ಕೆಲಸ ಮಾಡೋಣ. ಎಲ್ಲರೂ ಸೂಕ್ತ ಅಭ್ಯರ್ಥಿ ಟಿಕೆಟ್ ಕೊಡಿಸಿ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು. ಈ ಮೂಲಕ ಇಬ್ಬರು ಸಚಿವರ ನಡುವಿನ ವೈಮನಸ್ಸು ಶಮನಗೊಂಡಿದೆ ಎಂಬ ಸಂದೇಶ ರವಾನಿಸುವ ಕೆಲಸ ಮಾಡಿದ ಮಲ್ಲಿಕಾರ್ಜುನ್ ಅವರು, ವಿಪಕ್ಷಗಳ ಟೀಕೆಗೆ ಗುರಿಯಾಗದಂತೆ ಕೆಲಸ ಮಾಡೋಣ ಎಂದು ಒಗ್ಗಟ್ಟಿನ ಸಂದೇಶ ನೀಡಿದರು.
- Congress Ticket Dispute
- Davanagere Politics
- Davanagere South Bypoll
- Muslim Community Ticket Demand
- S. S. MALLIKARJUN
- Shamanur Shivashankarappa
- Siddaramaiah Truce
- Zameer Ahmed Khan
- ಎಸ್. ಎಸ್. ಮಲ್ಲಿಕಾರ್ಜುನ್
- ಕಾಂಗ್ರೆಸ್ ಟಿಕೆಟ್ ಸಮರ
- ಜಮೀರ್ ಅಹ್ಮದ್ ಖಾನ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ಮುಸ್ಲಿಂ ಸಮುದಾಯ ಟಿಕೆಟ್ ಬೇಡಿಕೆ
- ಶಾಮನೂರು ಶಿವಶಂಕರಪ್ಪ
- ಸಿದ್ದರಾಮಯ್ಯ ಸಂಧಾನ





Leave a comment