Home ಕ್ರೈಂ ನ್ಯೂಸ್ ಕುಣಿಯಲಾರದೇ ನೆಲ ಡೊಂಕು ಎಂಬಂತೆ ಯಶವಂತರಾವ್ ಜಾಧವ್ ವರ್ತನೆ: ಗಡಿಗುಡಾಳ್ ಮಂಜುನಾಥ್ ಆಕ್ರೋಶ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಕುಣಿಯಲಾರದೇ ನೆಲ ಡೊಂಕು ಎಂಬಂತೆ ಯಶವಂತರಾವ್ ಜಾಧವ್ ವರ್ತನೆ: ಗಡಿಗುಡಾಳ್ ಮಂಜುನಾಥ್ ಆಕ್ರೋಶ

Share
ಆಕ್ರೋಶ
Share

ದಾವಣಗೆರೆ: ಇಡೀ ದೇಶಾದ್ಯಂತ ಎಲ್ ಪಿಜಿ ಸಿಲಿಂಡರ್ ಗ್ಯಾಸ್ ಸಿಗದೇ ಜನರು ಪರದಾಡುತ್ತಿದ್ದು ಇದರ ಬಗ್ಗೆ ಧ್ವನಿ ಎತ್ತಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪ್ರಶ್ನೆ ಮಾಡಲು ಧೈರ್ಯವಿಲ್ಲದ ಜಿಲ್ಲಾ ನಾಯಕರು ಸಂಸದರ ಜನಪ್ರಿಯತೆಗೆ ಹೊಟ್ಟೆಕಿಚ್ಚಿನಿಂದ ಆರೋಪ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸದರಾಗಿದ್ದ ಡಾ. ಜಿ. ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾಗಿದ್ದರೂ ಜಿಲ್ಲೆ, ರಾಜ್ಯ, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿರಲಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ಪ್ರೌಢಿಮೆ ಹೊಂದಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ ನಲ್ಲಿ ಸಮರ್ಥವಾಗಿ ಮಂಡನೆ ಮಾಡುವ ಜೊತೆಗೆ ಕೇಂದ್ರ ಸರ್ಕಾರದ ಜನವಿರೋಧಿ ಕ್ರಮಗಳ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದಿನ ಸಂಸದರಿಗೆ ಯಾವೆಲ್ಲಾ ಭಾಷೆಗಳ ಮೇಲೆ ಹಿಡಿತವಿದೆ ಎಂಬುದನ್ನು ಮೊದಲು ಯಶವಂತರಾವ್ ಜಾಧವ್ ಮತ್ತು ಪ್ರತಿಭಟನೆ ನಡೆಸಿದವರು ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಪ್ರಭಾ ಮಲ್ಲಿಕಾರ್ಜುನ್ ಅವರು ಜಿಲ್ಲೆಯ ಅಭಿವೃದ್ಧಿ, ನೀರಾವರಿ ಯೋಜನೆಗಳೂ ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡಿ ಯುದ್ಧ ನಿಲ್ಲಿಸಲಿ ಎಂಬ ಮಾತು ಆಡಿರುವ ಯಶವಂತರಾವ್ ಜಾಧವ್ ರಿಗೆ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸಿಲಿಂಡರ್ ಅಭಾವ ಆದರೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. ಜನಸಾಮಾನ್ಯರು ಪಡುತ್ತಿರುವ ಕಷ್ಟದ ಬಗ್ಗೆ ಮೊದಲು ಮಾತನಾಡಲಿ. ಕ್ಷುಲ್ಲಕ ರಾಜಕಾರಣ ಮಾಡುವುದು ಸರಿಯಲ್ಲ. ಎಲ್ ಪಿಜಿ ಸಿಲಿಂಡರ್ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಬಿಟ್ಟು ಜನರ ಪರ ಹೋರಾಟ ಮಾಡುವವರ ವಿರುದ್ಧ ಆರೋಪ ಮಾಡುವುದು ಬಿಜೆಪಿ ನೈತಿಕ ಅಧಃಪತನಕ್ಕೆ ಸಾಕ್ಷಿ ಎಂದು ಗಡಿಗುಡಾಳ್ ಮಂಜುನಾಥ್ ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *