ಬೆಂಗಳೂರು: ಬಿಜೆಪಿಯವರಿಗೆ ರಾಜೀನಾಮೆ ಕೇಳುವ ಅರ್ಹತೆ ಇದೆಯೇ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಪಿಎಸ್ಐ ಹಗರಣದ ಮೂಲಕ ರಾಜ್ಯದ ಲಕ್ಷಾಂತರ ಯುವಕ ಭವಿಷ್ಯವನ್ನು ನಾಶ ಮಾಡಿತ್ತು. ಅಂದು ನಾವು ಸಾಕ್ಷಿ ಸಮೇತ ಸಾಬೀತು ಪಡಿಸಿದಾಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ADGP ಅವರನ್ನು ಬಂಧಿಸಲಾಗಿತ್ತು. ಅಂದಿನ ಗೃಹ ಸಚಿವರು ರಾಜೀನಾಮೆ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿತ್ತು. ಆ ಪ್ರಕರಣದ ಆರೋಪಿ ತೀರ್ಥಹಳ್ಳಿಯಲ್ಲಿ ತರಬೇತಿ ಪಡೆದಿದ್ದ. ಆದರೆ ಅದೇ ಊರಿನವರಾಗಿದ್ದ ಅಂದಿನ ಗೃಹಸಚಿವರು ರಾಜೀನಾಮೆ ನೀಡಿರಲಿಲ್ಲ. ಸಾಕ್ಷಿ, ಆಧಾರ ಎಲ್ಲ ಇದ್ದರೂ ಸಹ ಬಿಜೆಪಿಗರು ರಾಜೀನಾಮೆ ನೀಡಲು ನಿರಾಕರಿಸಿದ್ದರು. ಇಂದು ಯಾವುದೇ ತರ್ಕಬದ್ಧವಾದ ಸಾಕ್ಷಿ ಇಲ್ಲದೆ, ಅಬಕಾರಿ ಸಚಿವರ ರಾಜೀನಾಮೆ ಕೇಳುತ್ತಿರುವುದು ನಾಚಿಕೆಗೇಡು ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಸಿಡಿಮಿಡಿ:
ವಿಬಿ ಜಿ ಗ್ರಾಮ್ ಜಿ ಕಾಯ್ದೆಯಲ್ಲಿ ರಾಜ್ಯಗಳಿಗೆ ಶೇ 40ರಷ್ಟು ಕಡ್ಡಾಯ ಹಣಕಾಸಿನ ಹಂಚಿಕೆಯ ಹೊರೆಯನ್ನು ಏಕಪಕ್ಷೀಯವಾಗಿ ಹಾಕಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳನ್ನು ರೂಪಿಸುವ ಮೂಲಕ ಮೊದಲು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಸಂವಿಧಾನದ ಆರ್ಟಿಕಲ್ 258 ಹೇಳುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ನಿಯಮಗಳನ್ನು ಕಡೆಗಣಿಸಿ, ರಾಜ್ಯಗಳ ಅಭಿಪ್ರಾಯ ಪಡೆಯದೆ ಸಂಸತ್ನಲ್ಲಿ ಅನುಮೋದಿಸಿ, ರಾಷ್ಟ್ರಪತಿಗಳ ಅಂಗೀಕಾರ ಕೂಡ ಹಾಕಿಸಿದೆ. ಈಗ ಯಾವಾಗ ಅಧಿಸೂಚನೆ ಹೊರಡಿಸುತ್ತಾರೆ ಎನ್ನುವುದು ತಿಳಿದಿಲ್ಲ. ಇನ್ನು ಇವರು ರಾಜ್ಯಗಳ ಜೊತೆ ಚರ್ಚೆ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.
ಅಂಗೀಕಾರವೇ ದೊರೆತ ಮೇಲೆ ಚರ್ಚೆ ಮಾಡಲು ಏನು ಉಳಿದಿದೆ? ರಾಜ್ಯ ಸರ್ಕಾರಗಳನ್ನು ಉಪೇಕ್ಷಿಸುವ ಕೇಂದ್ರ ಸರ್ಕಾರದ ಈ ಧೋರಣೆ ಖಂಡನೀಯ ಎಂದಿದ್ದಾರೆ.





Leave a comment