ದಾವಣಗೆರೆ: ಗೂಂಡಾಗಿರಿ, ಗುಂಪು ಗಲಭೆ ಮಾಡಿದ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ಹಾಗೂ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹುಸೇನ್ ನನ್ನು ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಿಜಕ್ಕೂ ಆತಂಕಕಾರಿ. ಪೋಲೀಸರಿಗೇ ಹೆದರದ ಇಂತಹ ಸಮಾಜಘಾತುಕರು ಇನ್ನು ಜನ ಸಾಮಾನ್ಯರ ಮೇಲೆ ಎಷ್ಟು ದಬ್ಬಾಳಿಕೆ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆಂಬುದು ಗೊತ್ತಾಗುತ್ತದೆ ಎಂದು ಬಿಜೆಪಿ ಮಹಿಳಾ ನಾಯಕಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಹೆಚ್. ಸಿ. ಜಯಮ್ಮ ಅವರು ಶಾಂತಿ ಸಾಮರಸ್ಯಕ್ಕೆ ಹೆಸರಾಗಿದ್ದ ನಗರ ಇವತ್ತು ದಾದಾಗಿರಿ, ಗೂಂಡಾಗಿರಿಗೆ ಪ್ರಸಿದ್ಧವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರ ಪರ ನಿಲ್ತೇವೆ:
ಗೂಂಡಾಗಿರಿ ಮಟ್ಟ ಹಾಕಲು ದಿಟ್ಟ ಹೆಜ್ಜೆ ಇಟ್ಟಿರುವ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಗಾಯಿತ್ರಿ ಹಾಗೂ ಸಿಬ್ಬಂದಿ ಅವರಿಗೆ ಅಭಿನಂದಿಸುತ್ತೇವೆ. ನಾವು ಅವರ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬೆಂಬಲ ಇದೆ ಎಂಬುದೇ ಇವರಿಗೆ ದೊಡ್ಡ ಶ್ರೀರಕ್ಷೆ. ಇಂತಹ ಸಮಾಜಘಾತಕ ಶಕ್ತಿಗಳನ್ನು ಚಿಗುರಿನಲ್ಲೇ ಚುವುಟಿ ಹಾಕದಿರುವುದೇ ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ಆರೋಪಿಸಿದರು.
ಅಕ್ರಮಗಳ ಊರಾಗಿದೆ ದಾವಣಗೆರೆ:
ದಾನಿಗಳ ಊರಾಗಿದ್ದ ದಾವಣಗೆರೆ ಇಂದು ಗೂಂಡಾಗಳ, ಗಾಂಜಾ ಪೆಡ್ಲರ್ ಗಳ, ಒಸಿ ನಡೆಸುವವರ, ಮರಳು ಮಾಫಿಯಾಕೋರರ, ಅಕ್ಕಿ ಕಳ್ಳ ಸಾಗಾಣಿಕೆದಾರರ ನಗರವಾಗುತ್ತಿದೆ. ಇಂತಹವರನ್ನೆಲ್ಲ ಮಟ್ಟ ಹಾಕಲು ಜಿಲ್ಲಾಡಳಿತ ಗಟ್ಟಿ
ನಿರ್ಧಾರಗಳನ್ನು ತೆಗೆದುಕೊಂಡು ದಕ್ಷ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ದುಷ್ಟ ಶಕ್ತಿಗಳನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು.
ಪ್ರಭಾ ಮಲ್ಲಿಕಾರ್ಜುನ್ ಏನ್ ಹೇಳ್ತಾರೆ?
ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇಂತಹ ಸಮಾಜಘಾತುಕ ಶಕ್ತಿಗಳನ್ನು ಗಡಿಪಾರು ಮಾಡಬೇಕು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಗ್ಗೆ ಕೇವಲ ಮಾತನಾಡುವುದನ್ನು ನಿಲ್ಲಿಸಿ ಮಹಿಳಾ ಅಧಿಕಾರಿಗಳ ಬೆಂಬಲಕ್ಕೆ ನಿಲ್ಲಬೇಕು. ತಮಗೆ ಮತ ನೀಡಿದ ಸಾಮಾನ್ಯರ ಹಿತ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.
ಅಕ್ಕಿ ಕದ್ದು ಸಿಕ್ಕಿಬಿದ್ದಿದ್ದು ಯಾರು?
ಮಹಮ್ಮದ್ ಜಮೀರ್ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಪತ್ತೆಯಾಗಿದೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ. ತಮ್ಮಿಂದ ರಕ್ಷಾಧಾರ ಕಟ್ಟಿಸಿಕೊಂಡು ಜಮೀರ್ ಅಕ್ಕಿ ದಂಧೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ತಮ್ಮ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅನೇಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಿಕ್ಕಿ ಬೀಳುತ್ತಿದ್ದಾರೆ. ಇದರ ಕುರಿತು ತಾವು ಏನು ಹೇಳುತ್ತಿರಿ? ಎಂದು ಪ್ರಶ್ನಿಸಿದರು.
ಆಶ್ವಾಸನೆಗಳ ಈಡೇರಿಸುವಲ್ಲಿ ಸಂಸದೆ ವಿಫಲ:
ಚುನಾವಣಾ ಸಂದರ್ಭದಲ್ಲಿ ತಾವು ನೀಡಿದ ಆಶ್ವಾಸನೆಗಳು ಏನು? ಅವುಗಳನ್ನ ಕಾರ್ಯಗತಗೊಳಿಸುವಲ್ಲಿ ತಾವು ಸಂಪೂರ್ಣ ವಿಫಲರಾಗಿದ್ದೀರಿ. ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಆಗ್ರಹಿಸಿ ಮಹಿಳಾ ಮೋರ್ಚಾ ತಂಡವು ಜಿಲ್ಲಾಧಿಕಾರಿಗಳು,
ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗಳು ಹಾಗೂ ಮಹಿಳಾ ಆಯೋಗಕ್ಕೂ ಕೂಡ ಮನವಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮೋರ್ಚಾದ ಪ್ರಮುಖರಾದ ಚೇತನಾ ಮತ್ತಿತರರು ಹಾಜರಿದ್ದರು.
- DAVANAGERE
- Davanagere crime news
- Davanagere Crime News Assault on Cop Ayub Pailwan Case Political Interference Allegation Law and Order Karnataka Police Inspector Gayatri Assault
- DAVANAGERE NEWS
- DAVANAGERE POLICE
- ಅಯೂಬ್ ಪೈಲ್ವಾನ್ ಪುತ್ರರ ಬಂಧನ
- ದಾವಣಗೆರೆ
- ದಾವಣಗೆರೆ ಕ್ರೈಂ ನ್ಯೂಸ್
- ದಾವಣಗೆರೆ ಬಿಜೆಪಿ ಆಗ್ರಹ
- ದಾವಣಗೆರೆ ವಾರ್ತೆ
- ದಾವಣಗೆರೆ ಸುದ್ದಿ
- ಬಿಜೆಪಿ ಮಹಿಳಾ ಮೋರ್ಚಾ





Leave a comment