ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಆರೋಪಿ ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬೀಗಿದ್ದಾನೆ.
ಮಹಾರಾಷ್ಟ್ರ ಪುರಸಭೆ ಚುನಾವಣೆಯ ಫಲಿತಾಂಶಗಳು ಹೊರಬೀಳುತ್ತಿದ್ದು, ದೇಶಾದ್ಯಂತ ಸಂಚಲನ ಮೂಡಿಸಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಭರ್ಜರಿ ಜಯ ಸಾಧಿಸಿದ್ದಾನೆ.
ಜಲ್ನಾದ ವಾರ್ಡ್ ಸಂಖ್ಯೆ 13ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪಂಗಾರ್ಕರ್, ಬಿಜೆಪಿ ಮತ್ತು ಇತರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಸೋಲಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಚ್ಚರಿಯ ವಿಷಯವೆಂದರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಇವರ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
ಕಳೆದ ವರ್ಷವಷ್ಟೇ ಶಿಂಧೆ ಬಣದ ಶಿವಸೇನೆ ಸೇರಿದ್ದ ಪಂಗಾರ್ಕರ್, ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ‘ಇಂಡಿಪೆಂಡೆಂಟ್’ ಆಗಿ ಸ್ಪರ್ಧಿಸಿ ಗೆದ್ದಿದ್ದಾರೆ.
ಹಳೆಯ ಇತಿಹಾಸ: ಪಂಗಾರ್ಕರ್ ಅವರು 2001-2006ರ ಅವಧಿಯಲ್ಲಿ ಜಲ್ನಾ ನಗರಸಭೆಯ ಸದಸ್ಯರಾಗಿದ್ದರು. ನಂತರ ಹಿಂದೂ ಜನಜಾಗೃತಿ ಸಮಿತಿಯಲ್ಲೂ ಸಕ್ರಿಯರಾಗಿದ್ದರು.
ಕ್ರಿಮಿನಲ್ ಹಿನ್ನೆಲೆ: 2017ರ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಇವರಿಗೆ 2024ರಲ್ಲಿ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಅಲ್ಲದೆ, 2018ರಲ್ಲಿ ಸ್ಫೋಟಕಗಳ ವಶಪಡಿಕೆ ಪ್ರಕರಣದಲ್ಲಿ ಮಹಾರಾಷ್ಟ್ರ ATS ಇವರನ್ನು ಬಂಧಿಸಿತ್ತು.
ರಾಜಕೀಯ ಸಮೀಕರಣವೇ ಬದಲಾಯ್ತಾ?
ಚುನಾವಣಾ ಕಣದಲ್ಲಿ ಬಿಜೆಪಿ ಇದ್ದರೂ, ಶಿಂಧೆ ಸೇನೆ ಬೆಂಬಲ ನೀಡದಿದ್ದರೂ ಪಂಗಾರ್ಕರ್ ಗೆಲುವು ಸಾಧಿಸಿರುವುದು ಜಲ್ನಾದ ಸ್ಥಳೀಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹತ್ಯೆ ಆರೋಪದ ನಡುವೆಯೂ ಮತದಾರರು ಇವರನ್ನು ಕೈಹಿಡಿದಿರುವುದು ಈಗ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.





Leave a comment