SUDDIKSHANA KANNADA NEWS/ DAVANAGERE/ DATE:08-09-2024
ದಾವಣಗೆರೆ: ಕಾಂಗ್ರೆಸ್ ಮುಖಂಡ ಹಾಗೂ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಅಲೆಕ್ಸಾಂಡರ್ ಜಾನ್ ವಿಧಿವಶರಾಗಿದ್ದಾರೆ. 46 ವರ್ಷ ವಯಸ್ಸಾಗಿತ್ತು. ನಗರದ ಭಾರತ್ ಕಾಲೋನಿಯ 13 ನೇ ತಿರುವಿನ ವಾಸಿಯಾಗಿದ್ದ ಅಲೆಕ್ಸಾಂಡರ್ ಜಾನ್ ಮೃತದೇಹದ ಅಂತಿಮ ದರ್ಶನವನ್ನು ಸ್ವಾಭಿಮಾನಿ ಬಳಗದ ಪ್ರಮುಖರು ಹಾಗೂ ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕರಾದ ಜಿ. ಬಿ. ವಿನಯ್ ಕುಮಾರ್ ಅವರು ಪಡೆದರು. ಕುಟುಂಬದವರು ಹಾಗೂ ಸ್ನೇಹಿತರಿಗೆ ಸಾಂತ್ವನ ಹೇಳಿದರು.
ಕಳೆದ ನಾಲ್ಕು ದಿನಗಳ ಹಿಂದೆ ಹೃದಯಘಾತಕ್ಕೆ ಒಳಗಾಗಿದ್ದ ಅಲೆಕ್ಸಾಂಡರ್ ಜಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ. ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ದಾವಣಗೆರೆ ನಗರದ ಭರತ್ ಕಾಲೋನಿಯ 13 ನೇ ಕ್ರಾಸ್ ವಾಸಿಯಾದ ಅಲೆಕ್ಸಾಂಡರ್ ಜಾನ್ ಅವರು ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ
ಶ್ರಮಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಲೆಕ್ಸಾಂಡರ್ ಜಾನ್ ಅವರು ಅಪಾರ ಸ್ನೇಹಿತರು, ಬಂಧು ಬಳಗ, ಪತ್ನಿ ಅಗಲಿದ್ದಾರೆ.
ಅಲೆಕ್ಸಾಂಡರ್ ಜಾನ್ ನಿಧನರಾದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸಿದ್ದರು. ಸ್ನೇಹಜೀವಿಯಾಗಿದ್ದರು. ಅವರ ನಿಧನ ಆಘಾತ ತಂದಿದೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಲ್ಲಿ ಛಾತಿ ಹೊಂದಿದ್ದ ಅಲೆಕ್ಸಾಂಡರ್ ಜಾನ್ ಅವರು ಸಮುದಾಯದ ಏಳಿಗೆಗೆ ಶ್ರಮಿಸುತ್ತಲೇ ಇದ್ದರು. ಬಡವರು, ಹಿಂದುಳಿದವರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರ ಪರ ಧ್ವನಿ ಎತ್ತುತ್ತಿದ್ದರು. ಇಂಥ ನಾಯಕರನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟ ಎಂದು ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಸ್ನೇಹಿತರು ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ ವಿನಯ್ ಕುಮಾರ್ ಅವರು, ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಅವರ ಸಾವು ನಮಗೂ ಆಘಾತ ತಂದಿದೆ. ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಇಹಲೋಕ ತ್ಯಜಿಸಿದರು ಎಂದು ಕೇಳಿದಾಕ್ಷಣ ಆಶ್ಚರ್ಯ ತಂದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.