Home ನಾಳೆಯಿಂದಲೇ ಭದ್ರಾ ಡ್ಯಾಂ ನೀರು ಹರಿಸಿ: ಡಿಸಿಗೆ ಸಲ್ಲಿಸಿದ ಮನವಿಯಲ್ಲಿ ಏನೆಲ್ಲಾ ಬೇಡಿಕೆಗಳಿವೆ?
Homeದಾವಣಗೆರೆಬೆಂಗಳೂರು

ನಾಳೆಯಿಂದಲೇ ಭದ್ರಾ ಡ್ಯಾಂ ನೀರು ಹರಿಸಿ: ಡಿಸಿಗೆ ಸಲ್ಲಿಸಿದ ಮನವಿಯಲ್ಲಿ ಏನೆಲ್ಲಾ ಬೇಡಿಕೆಗಳಿವೆ?

Share
ಭದ್ರಾ ಡ್ಯಾಂ
Share

SUDDIKSHANA KANNADA NEWS/DAVANAGERE/DATE:01_01_2026

ದಾವಣಗೆರೆ: ಭದ್ರಾ ಡ್ಯಾಂನಿಂದ ಬೇಸಿಗೆ ಹಂಗಾಮಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಜನವರಿ 2ರಿಂದಲೇ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

READ ALSO THIS STORY: ರಾಹುಲ್ ಗಾಂಧಿ ಸೇರಿ ರಾಷ್ಟ್ರಮಟ್ಟದ ನಾಯಕರ ಮನಗೆದ್ದ ಸಂಘಟನಾ ಚಾಣಕ್ಯ ಸೈಯದ್ ಖಾಲಿದ್ ಅಹ್ಮದ್ ಗೆ ಒಲಿಯುತ್ತಾ ಅದೃಷ್ಟ?

ಬೇಸಿಗೆ ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1 ಲಕ್ಷದ 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ರೈತರು ಸಜ್ಜಾಗಿದ್ದಾರೆ. ಸಸಿ ಮಡಿ ಸಿದ್ಧಪಡಿಸಿಕೊಂಡು ಬೀಜ ಚೆಲ್ಲಲು ನೀರು ಬೇಕು. ವಾರ್ಷಿಕ ಬೆಳೆಗಳಾದ ಕಬ್ಬು, ದಾಳಿಂಬೆ ಸೇರಿದಂತೆ ಅಡಿಕೆ, ತೆಂಗು ತೋಟಗಳಿಗೆ ನೀರುಣಿಸಬೇಕು. ರೈತರು ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಭದ್ರಾ ಡ್ಯಾಂ ನಲ್ಲಿ ನೀರಿನ ಸಂಗ್ರಹ 181 ಅಡಿ ಇದ್ದು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಆದ್ರೂ ಇಂದಿಗೂ ಕಾಲುವೆಗೆ ನೀರು ಹರಿಸಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಡ್ಯಾಂ ನಲ್ಲಿ ಸಾಕಷ್ಟು ನೀರು ಇದ್ದರೂ ಕಾಲುವೆಗಳಲ್ಲಿ ಹರಿಸಿಲ್ಲ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ಜನವರಿ 2ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಈ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು, ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನರವರು ಸೇರಿದಂತೆ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಜರಾಗಿ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ನಾಳೆ ಐ.ಸಿ.ಸಿ ಸಭೆಗೆ ಹಾಜರಾಗಿ, ಜಿಲ್ಲೆಯ ಬೆಳೆ ಪ್ರಮಾಣ, ನೀರಿನ ಅವಶ್ಯಕತೆ ಪ್ರಮಾಣ ಮತ್ತು ನೀರು ಹರಿಸುವ ಅವಧಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಸೂಕ್ತ ಅಂಕಿ ಅಂಶಗಳ ವರದಿ ಮಂಡಿಸಬೇಕು. ಕಾಲುವೆಗಳಲ್ಲಿ ಹರಿಸುವಂತೆ ನಿರ್ಣಯಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಶೇಕಡ 70 ರಷ್ಟು ಇರುವುದರಿಂದ ಮುಂದಿನ ಐ.ಸಿ.ಸಿ ಸಭೆ ದಾವಣಗೆರೆಯಲ್ಲಿ ನಡೆಯಬೇಕು ಎಂದು ನಿರ್ಣಯಿಸಬೇಕು ಎಂದು ಆಗ್ರಹಿಸಲಾಗಿದೆ.

ಭದ್ರಾ ಕಾಲುವೆಗಳು ಶಿಥಿಲಗೊಂಡು, ಗಿಡ ಗಂಟೆಗಳು ಬೆಳೆದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆಗಳ ದುರಸ್ತಿಗಾಗಿ ಅವಶ್ಯ ಅನುದಾನದ ಬೇಡಿಕೆಯನ್ನು ಸಭೆಯಲ್ಲಿ ಜಿಲ್ಲಾಡಳಿತ ಮಂಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ವೇಳೆ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್, ಮುಖಂಡರಾದ ಧನಂಜಯ ಕಡ್ಲೆಬಾಳ್, ಶಾಗಲೆ ದೇವೇಂದ್ರಪ್ಪ, ಕುಕ್ಕುವಾಡ ರುದ್ರೇಗೌಡ್ರು, ಆರನೇ ಕಲ್ಲು ವಿಜಯಕುಮಾರ, ಹೊಸನಾಯಕನಳ್ಳಿ ಶಿವಮೂರ್ತಿ, ಕುಂದುವಾಡ ಗಣೇಶಪ್ಪ, ಗುರುನಾಥ್, ಜಿಮ್ಮಿ ಹನುಮಂತಪ್ಪ, ಕುರ್ಕಿ ರೇವಣಸಿದ್ದಪ್ಪ, ವೊಡ್ಡಿನಳ್ಳಿ ಶಿವಶಂಕರ್, ಕಲ್ಪನಳ್ಳಿ ರೇವಣಸಿದ್ದಪ್ಪ, ಸತೀಶ್, ಕೊಳೇನಹಳ್ಳಿ ಶರಣಪ್ಪ, ಕನಗೊಂಡನಳ್ಳಿ ಮಲ್ಲಿಕಾರ್ಜುನ, ತುಂಬಿಗೆರೆ ದಿನೇಶಗೌಡ್ರು ಮುಂತಾದವರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *