SUDDIKSHANA KANNADA NEWS/DAVANAGERE/DATE:19_12_2025
ಬೆಳಗಾವಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಳಮೀಸಲಾತಿ ಕಾನೂನು ಜಾರಿಗೆ ತರಲು ಸುಪ್ರೀಂ ಕೋರ್ಟ್ನಿಂದ ಯಾವುದೇ ಆದೇಶ ಇರಲಿಲ್ಲ. ಒಳ ಮೀಸಲಾತಿಯನ್ನು ನಿರ್ಧರಿಸಲು ರಾಜ್ಯಗಳಿಗೆ ಅಧಿಕಾರವಿರಲಿಲ್ಲ. ಕೇಂದ್ರಕ್ಕೆ ಸಂಬಂಧಿಸಿದ ವಿಷಯವಾಗಿತ್ತು. ಈಗಲೂ ಕೂಡ ಕೇಂದ್ರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ರಾಜ್ಯಗಳು ಒಳಮೀಸಲಾತಿಯ ವಿಷಯವನ್ನು ನಿರ್ಧಾರ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವಷ್ಟೇ ನಾವು ಮೀಸಲಾತಿ ತರಲು ಮುಂದಾಗಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಇದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿರದೆ, ನ್ಯಾಯಾಲಯದ ಆದೇಶ ಕೂಡ ಇಲ್ಲದಿದ್ದಾಗ ಬಿಜೆಪಿಗರು ಕಾನೂನು ತಂದಿದ್ದು ಮೂಗಿಗೆ ತುಪ್ಪ ಸವರುವ ಪ್ರಯತ್ನವಾಗಿತ್ತಷ್ಟೆ. ಈ ಕಾನೂನಿನಿಂದ ಯಾವ ಪ್ರಯೋಜನವೂ ಆಗುತ್ತಿರಲಿಲ್ಲ ಎಂದು ಆಪಾದಿಸಿದರು.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿ ಸೇವೆ ಸಲ್ಲಿಸುವಾಗ ಒಳ ಮೀಸಲಾತಿ ಕುರಿತಾಗಿ ಆಳವಾಗಿ ಅಧ್ಯಯನ ನಡೆಸಿದ್ದೆ. ಇದು ಕೇಂದ್ರ ವಿಷಯವಾಗಿದ್ದಾಗ, ಆಗಿನ ಬಿಜೆಪಿ ಸರ್ಕಾರವು ಕಾಯ್ದೆ ತಂದಿದ್ದೇ ಸೋಜಿಗ ಎಂದು ಹೇಳಿದರು.
ಮೀಸಲಾತಿ ಹಂಚಿಕೆ ವಿಚಾರದಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ಮತ್ತೆ ಮುನ್ನೆಲೆಗೆ ತಂದಿದ್ದು ತಾವೇ ಎಂದು ಬಿಜೆಪಿಗರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಆ ವರದಿಯನ್ನು ತಿರಸ್ಕಾರ ಮಾಡಿದ್ದು ಏಕೆ ಎನ್ನುವುದನ್ನು ವಿವರಿಸುತ್ತಿಲ್ಲ. ಗೊಂದಲ, ವಿರೋಧಗಳ ನಡುವೆ ಮಾಧುಸ್ವಾಮಿ ಸಮಿತಿ ರಚಿಸುವ ಸನ್ನಿವೇಶ ಎದುರಾಗಿದ್ದು, ಅವರ ಅನೀತಿಯಿಂದ ಬಂಜಾರ ಸಮುದಾಯ ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಏಕೆ ಎಂದು ಅವರು ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ತಾವು ಅಧಿಕಾರದಲ್ಲಿದ್ದಾಗ ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ತಿರಸ್ಕರಿಸಿದ್ದ ಬಿಜೆಪಿಯವರು, ವರದಿಯಂತೆ ಮೀಸಲಾತಿ ಜಾರಿಗೊಳಿಸಿದ್ದೇವೆ ಎನ್ನುವುದು ದಾರಿತಪ್ಪಿಸುವ ಹೇಳಿಕೆಯಾಗಿದೆ ಎಂದರು.





Leave a comment