SUDDIKSHANA KANNADA NEWS/ DAVANAGERE/ DATE:21-07-2023
ದಾವಣಗೆರೆ (Davanagere): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರ ಸ್ಥಂಭದ ರೀತಿಯಲ್ಲಿ ಸದಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದ ಎ. ಆರ್. ಉಜ್ಜಿನಪ್ಪ ವಿಧಿವಶರಾಗಿದ್ದಾರೆ. ಎ. ಆರ್. ಉಜ್ಜಿನಪ್ಪ ಅವರ ಪಾರ್ಥಿವ ಶರೀರವನ್ನು ದಾವಣಗೆರೆಯ ಆಂಜನೇಯ ಬಡಾವಣೆಯ ಶ್ರೀ ಆಂಜನೇಯ ದೇವಸ್ಥಾನದ ಪಕ್ಕದಲ್ಲಿನ ಅವರ ಸ್ವಗೃಹದಲ್ಲಿ ಇರಿಸಲಾಗಿದೆ.
ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ಹೋದಾಗ ಹಠಾತ್ ಹೃದಯಘಾತಕ್ಕೆ ಒಳಗಾದ ಎ. ಆರ್. ಉಜ್ಜಿನಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಸದಾ ಕ್ರಿಯಾಶೀಲರಾಗಿರುತ್ತಿದ್ದ ಎ. ಆರ್. ಉಜ್ಜಿನಪ್ಪ ಅವರದ್ದು ಸಾಹಿತ್ಯ ಲೋಕದಲ್ಲಿ ಮರೆಯಲಾಗದ ಹೆಸರು. ಅಷ್ಟೊಂದು ಸದಾ ಕ್ರಿಯಾಶೀಲರಾಗಿರುತ್ತಿದ್ದ ಉಜ್ಜಿನಪ್ಪನವರ ಅಗಲಿಕೆ ಸಾಹಿತ್ಯ ಲೋಕದ ದಿಗ್ಗಜರು, ಜಿಲ್ಲಾ ಕಸಾಪ ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಕುಟುಂಬ ವರ್ಗ, ಸ್ನೇಹಿತ ವರ್ಗದವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್, ಜಿಲ್ಲಾ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷರೂ ಸಹ ಹೌದು. ರಂಗಭೂಮಿ ರಂಗದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದರು.

ಮಹನೀಯರು ನೆನಪಿಸಿಕೊಂಡಿದ್ದು ಹೇಗೆ…?
ಜಿಲ್ಲಾ ಕಸಾಪ ಅಧ್ಯಕ್ಷರಾಗಿ ನಾಡು ನುಡಿ, ಕನ್ನಡ ಭಾಷೆ ಉಳಿವಿಗೆ ಅಪ್ರತಿಮ ಸೇವೆ ಸಲ್ಲಿಸಿದ್ದರು. ಉಜ್ಜಿನಪ್ಪ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ನೇರ, ನಿಷ್ಠುರವಾಗಿದ್ದ ಉಜ್ಜಿನಪ್ಪ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅನೇಕ ಮಹನೀಯರು ಉಜ್ಜಿನಪ್ಪ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾಗಿದ್ದಾರೆ.
ವಾಮದೇವಪ್ಪ, ಜಿಲ್ಲಾ ಕಸಾಪ ಅಧ್ಯಕ್ಷರು:
ಹಲವಾರು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಅಪ್ರತಿಮ ಸಂಘಟಕ ಎ.ಆರ್.ಉಜ್ಜನಪ್ಪ ಅವರ ನಿಧನರಾಗಿರುವುದು ಆಘಾತಕಾರಿಯಾಗಿದೆ. ಬೆಳ್ಳಂಬೆಳಿಗ್ಗೆ ಬರಸಿಡಿಲಿನಂತೆ ಎರಗಿದ ಈ ಸುದ್ದಿಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಅವರ ದಿವ್ಯಾತ್ಮವು ಚಿರಶಾಂತಿಯಲ್ಲಿ ಲೀನವಾಗಲಿ. ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಅವರ ಕುಟುಂಬ ವರ್ಗಕ್ಕೆ, ಬಂಧು ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಸಂತಾಪ ಸೂಚಿಸಿದ್ದಾರೆ.
ಎನ್. ಈ. ನಟರಾಜ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ರಾಜ್ಯಾಧ್ಯಕ್ಷರು
ಆತ್ಮೀಯರು ನನ್ನ ನೆಚ್ಚಿನ ಸ್ನೇಹಿತರು ಮಾರ್ಗದರ್ಶಿಗಳು ಆದಂತಹ ಉಜ್ಜನಪ್ಪ ಇವರ ಅಕಾಲಿಕ ಮರಣವು ನನಗೆ ಅತ್ಯಂತ ಆಘಾತವನ್ನು ಉಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖವನ್ನು
ಭರಿಸುವ ಶಕ್ತಿಯನ್ನು ನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ರಾಜ್ಯಾಧ್ಯಕ್ಷ ಎನ್. ಈ ನಟರಾಜ್ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.
ಆರ್. ಶಿವಕುಮಾರಸ್ವಾಮಿ ಕುರ್ಕಿ:
ಈಗ ತಾನೆ ಮಿತ್ರ ರಾಮಗೊಂಡನಹಳ್ಳಿ ಸುರೇಂದ್ರ ಅವರು ಕರೆ ಮಾಡಿ “ಸರ್ ಉಜ್ಜೀನಪ್ಪರು ತೀರ್ಕೊಂಡ್ರಂತೆ’ ಅಂದ್ರು. “ಯಾವ ಉಜ್ಜೀನಪ್ಪ” ಅಂದೆ. ” ನಮ್ಮ ಎ.ಆರ್.ಉಜ್ಜೀನಪ್ಪರು’ ಅಂದ್ರು. ಕ್ಷಣ ಹೃದಯ ಕಲಕಿದಂತಾಯ್ತು.’ಅಯ್ಯೋ ಶಿವ್ನೆ. ಏನಾಗಿತ್ತು?’ ಅಂದೆ ಎಂದು ಆರ್. ಶಿವಕುಮಾರ್ ಕುರ್ತಿ ತಿಳಿಸಿದ್ದಾರೆ.
“ಬೆಳಗ್ಗೆ ವಾಕಿಂಗ್ ಹೋಗುವಾಗ ಇದ್ದಕಿದ್ದಂತೆ ಕುಸಿದ್ರಂತೆ. ಆಸ್ಪತ್ರೆಗೆ ಹೋದ್ರೂ ಉಳಿಲಿಲ್ಲಂತೆ” ಅಂದಾಗ ಕಣ್ಣು ಒದ್ದೆ ಆದುವು. ಮನಸ್ಸು ಭಾರವಾಯಿತು. ವೈಯಕ್ತಿಕವಾಗಿ ನನ್ನ ಸಾಂಸ್ಕೃತಿಕ ಸಾಮಾಜಿಕ ಬೆಳವಣಿಗೆಗೆ ಅವರೇ ಮುಖ್ಯ ಕಾರಣ. ದಾವಣಗೆರೆಯಲ್ಲಿ ನಾನು ಹಮ್ಮಿಕೊಳ್ಳುತಿದ್ದ ರಂಗಾಯಣ, ನೀನಾಸಂ, ಶಿವಸಂಚಾರ ನಾಟಕ ಪ್ರದರ್ಶನಗಳಿಗೆ ಇವರ ಪ್ರೋತ್ಸಾಹ ಧನಸಹಾಯವೇ ಅತಿಹೆಚ್ಚು ಇರುತ್ತಿತ್ತು. ಅಲ್ಲದೆ ನನ್ನ ಹುಂಬತನ ಅತ್ಯುತ್ಸಾಹಗಳಿಂದ ಆಗುತಿದ್ದ ಪ್ರಮಾದಗಳನ್ನು ನನಗೆ ನೋವಾಗದಂತೆ ತಿದ್ದುತ್ತಿದ್ದ ಹಿರಿತನ ಅವರಲ್ಲಿ ಕಂಡುಕೊಂಡಿದ್ದೆ.
ನನ್ನ ಮೇಲೆ ಎಂದೂ ಸಿಟ್ಟು ಮಾಡದೆ ಪ್ರೀತಿಸುತ್ತಿದ್ದ ಹಿರಿತನ ಅವರಲಿತ್ತು. ಅವರ ಅದಮ್ಯ ಸಂಘಟನಾ ಶಕ್ತಿ ಇತ್ತು. ಎಲ್ಲೆಡೆ ಸಮಾಜಸೇವೆಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಬೆರೆತು ಪ್ರೋತ್ಸಾಹಿಸುವ ಧನ್ಯತಾ ಮನೋಭಾವ ಇತ್ತು. ಹಣ ಅಧಿಕಾರ ಸಂಪಾದಿಸುವ ತಂತ್ರಗಾರಿಕೆ ಅವರಿಗೆ ಸಲೀಸು ಕರಗತ ಹಾಗೂ ತಂತಾನೆ ಅಂತಹ ಸದಾವಕಾಶಗಳು ಅವರಿಗೆ ಲಭಿಸುತ್ತಿದ್ದವು. ಹಾಗಂತ ಲೋಭಿಯಾಗದೆ ಮರಳಿ ಸಮಾಜದ ಒಳಿತಿಗೆ ಅದನ್ನು ಅರ್ಪಿಸುವ ಅರ್ಪಣಾ ಮನೋಭಾವ ಇತ್ತು. ಜೊತೆಗೆ ನಿಂತವರನ್ನು ಇಡದೆ ಪ್ರೀತಿಸುವ ಮೂಲಕ ಬೆಂಬಲಿಸುವ ಹಾಗೂ ಎದುರು ನಿಂತವರ ಅತ್ಯಂತ ಸುಲಭವಾಗಿ ನೋವಾಗದಂತೆ ಮಣಿಸುವ ಚಾಣಾಕ್ಷತನವಿತ್ತು.
ಯಾವುದೇ ಸ್ಪರ್ಧಾಕ್ಷೇತ್ರಗಳಲ್ಲೂ ಅವರು ಸೋಲರಿಯದ ಸರದಾರರಾಗಿದ್ದರು. ಕಸಾಪ ಚುನಾವಣೆ ಸ್ಪರ್ಧಾ ವಿಷಯಕ್ಕೆ ಆಗಾಗ ಅವರಿಂದ ನಾನು ದೂರ ಹಾಗೂ ಎದುರು ನಿಲ್ಲುತ್ತಿದ್ದೆ. ಆದರೆ ವೈಯಕ್ತಿಕವಾಗಿ ನನ್ನ ಅವರ ಸಂಬಂಧ ಅತ್ಯಂತ ಪ್ರೀತಿ ಗೌರವ ಉಳ್ಳದ್ದಾಗಿತ್ತು. ಲಿಂಗೈಕ್ಯರಾದ ಎ. ಆರ್. ಉಜ್ಜೀನಪ್ಪ ಅವರ ಆತ್ಮಕ್ಕೆ ವಿಶ್ವಬಂಧು ಮರುಳಸಿದ್ದರು ಚಿರಶಾಂತಿ ನೀಡುವಂತೆ ಪ್ರಾರ್ಥಿಸುತ್ತೇನೆ ಎಂದು ಶಿವಾನಂದ ಕುರ್ಕಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ಬೆಣ್ಣೆನಗರಿಯಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಶಂಕಿತ ಉಗ್ರ…?: ಬೆಂಗಳೂರು ಮೂಲದ ಈತ ಕೆಲಸ ಮಾಡ್ತಿದ್ದು ಏನು ಗೊತ್ತಾ? ದಾವಣಗೆರೆಗೆ ಯಾಕೆ ಬರುತ್ತಿದ್ದ…?
ಬಿ. ಎನ್. ಮಲ್ಲೇಶ್, ಹಿರಿಯ ಪತ್ರಕರ್ತರು:
ಆಘಾತದ ಸುದ್ದಿ, ಮೊನ್ನೆ ಇನ್ನೂ ಒಂದು ಕಾರ್ಯಕ್ರಮದ ಬಗ್ಗೆ ಮಾತನಾಡಿದ್ವಿ. ನಿಜಕ್ಕೂ ನಂಬಲಾಗ್ತಿಲ್ಲ ಎಂದು ಹಿರಿಯ ಪತ್ರಕರ್ತರಾದ ಬಿ. ಎನ್. ಮಲ್ಲೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಕಡಕೋಳ:
ಗಟ್ಟಿಜೀವ ಉಜ್ಜನಪ್ಪ ಇಷ್ಟುಬೇಗ ಅಗಲುತ್ತಾರೆಂದು ಯಾರೂ ಭಾವಿಸಿರಿಲಿಲ್ಲ. ಸರಕಾರಿ ನೌಕರರ ಸಂಘದಲ್ಲಿ ಅವರೊಂದಿಗೆ ಉಪಾಧ್ಯಕ್ಷನಾಗಿ ಕೆಲಸ ಮಾಡಿದ ನೆನಪುಗಳಿವೆ. ಅವರು ಕ.ಸಾ.ಪ. ಜಿಲ್ಲಾಧ್ಯಕ್ಷರಾಗಲು ನಾನು ಶ್ರಮಿಸಿದ ನೆನಪುಗಳು ಗಾಢವಾಗಿ ಕಾಡಿದವು. ನನ್ನ ಬರವಣಿಗೆ ಕುರಿತು ಅಪಾರ ಪ್ರೀತಿಯುಳ್ಳ ಹಿರಿಯ ಮಿತ್ರನನ್ನು ಕಳೆದುಕೊಂಡ ನೋವು. ಅವರಿಗೆ ಸದ್ಗತಿ ಸಿಗಲಿ. ಅವರ ಆತ್ಮಕ್ಕೆ ಶಾಂತಿ ಕೋರುವೆ ಎಂದು ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.
ಸುಶೀಲಾ ದೇವಿ:
ಸದಾ ಕ್ರಿಯಾಶೀಲ ರಾಗಿದ್ದ ಅತ್ಯಂತ ಉತ್ಸಾಹಶಾಲಿಗಳಾಗಿದ್ದ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಸಹೃದಯಿ ಎ.ಆರ್. ಉಜ್ಜಿನಪ್ಪನವರು ಬೆಳಗಿನ ವಾಕಿಂಗ್ ವೇಳೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ತುಂಬಾ ನೋವು ತಂದಿದೆ. ನಂಬಲಾಗುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ.ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ. ಓಂಶಾಂತಿ ಎಂದು ಸುಶೀಲಾ ದೇವಿ ಅವರು ಹೇಳಿದ್ದಾರೆ.
ಜ್ಯೋತಿ ಉಪಾಧ್ಯಾಯ:
ಉಜ್ಜನಪ್ಪ ಸರ್, ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಜ್ಯೋತಿ ಉಪಾಧ್ಯಾಯ ಪ್ರಾರ್ಥಿಸಿದ್ದಾರೆ.
ಎಂ. ಜಿ. ಈಶ್ವರಪ್ಪ ಸಂತಾಪ:
ಸದಾ ಕ್ರಿಯಾಶೀಲರಾಗಿದ್ದ ಎ. ಆರ್. ಉಜ್ಜಿನಪ್ಪ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಬೆಂಗಳೂರಿನ ಮಾರ್ಗ ಮಧ್ಯೆದಲ್ಲಿ ಇದ್ದೇನೆ. ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದೇನೆ. ಅವರ ಕುಟುಂಬಕ್ಕೆ ವರ್ಗಕ್ಕೆ ಭಗವಂತ ನೋವು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ನ್ಯಾಮತಿ ಕಸಾಪ ಅಧ್ಯಕ್ಷ ಆರಾಧ್ಯ ಸಂತಾಪ:
ನಂಬಲು ಆಗುತ್ತಿಲ್ಲ. ಶರಣರಿಗೆ ಸದ್ಗತಿಯಲ್ಲಿ ಭಗವಂತ ನೀಡಲಿ ಎಂದು ನ್ಯಾಮತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರಾಧ್ಯ ಅವರು ಸಂತಾಪ ಸೂಚಿಸಿದ್ದಾರೆ.
Davanagere News, Davanagere Death News, Davanagere Suddi, Davanagere News Updates, Davanagere A. R. Ujjinappa Death