ನವದೆಹಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿ ಒಳಗಡೆಯೇ ಮೀಸಲಾತಿ ನೀಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಒಳ ಮೀಸಲಾತಿ ಕಾನೂನು ಬದ್ಧ ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಯಾವ ಜಾತಿ, ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ಕೋರ್ಟ್ ರಾಜ್ಯಗಳ ವಿವೇಚನೆಗೆ ನೀಡಿದೆ. ಮುಖ್ಯ ನ್ಯಾಯಮೂತ್ರಿ ಚಂದ್ರಚೂಡ್ ನೇತೃತ್ವದ ನ್ಯಾ. ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಮಹತ್ವದ ಆದೇಶ ಪ್ರಕಟಿಸಿದೆ.
ನ್ಯಾಯಮೂರ್ತಿ ಬೇಲಾ ತ್ರಿವೇದಿ ಭಿನ್ನ ತೀರ್ಪು ನೀಡಿ ಅಂತಹ ಉಪ-ವರ್ಗೀಕರಣವನ್ನು ಅನುಮತಿಸಲಾಗುವುದಿಲ್ಲ ಎಂದು ತೀರ್ಪು ಪ್ರಕಟಿಸಿದರು. ಒಳ ಮೀಸಲಾತಿ ಸಂಬಂಧ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ಪ್ರಕಟಿಸಿತು. ಪಂಜಾಬ್, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಅಂತಹ ಉಪ-ವರ್ಗೀಕರಣವನ್ನು ಒದಗಿಸುವ ಕಾನೂನುಗಳ ಸಿಂಧುತ್ವವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಪಂಜಾಬ್ ಸರ್ಕಾರ ರಚನೆ ಮಾಡಿದ್ದ ಕಾಯ್ದೆಯನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ರದ್ದು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಕೋರ್ಟ್ ಆದೇಶದಲ್ಲಿ ಏನಿದೆ? ಎಸ್ಸಿ/ಎಸ್ಟಿ ಜನರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಸಮಾಜದಲ್ಲಿ ಮೇಲಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ 14ನೇ ವಿಧಿ ಜಾತಿಯ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ಮೀಸಲಾತಿ ಪಟ್ಟಿಗೆ ಸಮುದಾಯಗಳ ಸೇರ್ಪಡೆ ಅಥವಾ ತೆಗೆಯಲು ತುಷ್ಟೀಕರಣ ರಾಜಕೀಯ ಮಾಡಬಾರದು. ಪರಿಶಿಷ್ಟ ಜಾತಿಗಳು ಏಕರೂಪದ ಗುಂಪಲ್ಲ. ಎಸ್ಸಿಗಳಲ್ಲಿ ಹೆಚ್ಚು ತಾರತಮ್ಯವನ್ನು ಅನುಭವಿಸಿದವರಿಗೆ 15% ಮೀಸಲಾತಿಯಲ್ಲಿ ಹೆಚ್ಚಿನ ಅವಕಾಶ ನೀಡಲು ಸರ್ಕಾರಗಳು ಅವರನ್ನು ಉಪವರ್ಗೀಕರಿಸಬಹುದು. ಎಸ್ಸಿಗಳಲ್ಲಿ ಜಾತಿಗಳ ಉಪ-ವರ್ಗೀಕರಣವು ಅವರ ತಾರತಮ್ಯದ ಮಟ್ಟವನ್ನು ಆಧರಿಸಿರಬೇಕು. ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಅವರ ಪ್ರಾತಿನಿಧ್ಯದ ಕುರಿತು ಪ್ರಾಯೋಗಿಕ ಡೇಟಾವನ್ನು ಸಂಗ್ರಹಿಸುವ ಮೂಲಕ ರಾಜ್ಯಗಳು ಮಾಡಬಹುದು.