SUDDIKSHANA KANNADA NEWS/ DAVANAGERE/ DATE:04-06-2024
ದಾವಣಗೆರೆ: ದಾವಣಗೆರೆ ಲೋಕಸಭೆ ಬಿಜೆಪಿ ಭದ್ರಕೋಟೆ. ಕಳೆದ 27 ವರ್ಷಗಳಿಂದ ಪಾರುಪತ್ಯ ಸಾಧಿಸಿದ್ದ ಬಿಜೆಪಿಯು ಈ ಬಾರಿ ಸೋತು ಸುಣ್ಣಾಗಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಬಿಜೆಪಿ ಹುರಿಯಾಳು ಗಾಯಿತ್ರಿ ಸಿದ್ದೇಶ್ವರ ಅವರನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ದಾವಣಗೆರೆ ಲೋಕಸಭೆ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಜಿ. ಎಂ. ಸಿದ್ದೇಶ್ವರ್ ಸತತ ನಾಲ್ಕನೇ ಬಾರಿ ಸಂಸತ್ ಪ್ರವೇಶಿಸಿದ್ದರು. ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಗಾಯಿತ್ರಿ ಸಿದ್ದೇಶ್ವರ ಅವರನ್ನು ಸೋಲಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬಿಜೆಪಿ ಸೋಲಿಸುವ ಮೂಲಕ ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದನ್ನು ಛಿದ್ರಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವೇ ಹೆಚ್ಚು ಎಂಬುದು ಸ್ಪಷ್ಟವಾಗಿದ್ದರೂ, ಈ ಬಾರಿ ಬಿಜೆಪಿ ಮಣ್ಣುಮುಕ್ಕಿದೆ.
ಕೊನೆ ಗಳಿಗೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಹಗಲಿರುಳು ಶ್ರಮಿಸಿತ್ತು. ಆದ್ರೆ, ಇದಕ್ಕೆ ಪ್ರತಿಯಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಹ ಪ್ರಚಾರ ಜೋರು ಮಾಡಿದ್ದರು ನರೇಂದ್ರ ಮೋದಿ ಹವಾ ಇಲ್ಲಿ ಮತ್ತೊಮ್ಮೆ ವರ್ಕೌಟ್ ಆಗಲಿಲ್ಲ. ದಾವಣಗೆರೆಯಲ್ಲಿ ಮೋದಿ ಅವರು ರ್ಯಾಲಿ ನಡೆಸಿದ್ದರೂ ಕೈ ಕೊಟ್ಟಿದೆ.
2004, 2009, 2014 ರ ಲೋಕಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ಪುತ್ರ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದ್ದ ಸಿದ್ದೇಶ್ವರ್, 2019ರಲ್ಲಿ ಮಂಜಪ್ಪರನ್ನು ಸೋಲಿಸುವ ಮೂಲಕ ಇತಿಹಾಸದಲ್ಲಿ ಮೊದಲ ಬಾರಿಗೆ ನಾಲ್ಕು ಬಾರಿ ಗೆದ್ದ ಇತಿಹಾಸವನ್ನು ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರು ಬರೆದಿದ್ದರು. ಚನ್ನಯ್ಯ ಒಡೆಯರ್ ಬಳಿಕ ಇಷ್ಟು ಬಾರಿ ಗೆದ್ದ ಮೊದಲಿಗರು ಎಂಬ ಕೀರ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಆದ್ರೆ, ಈ ಬಾರಿ ಪತ್ನಿ ಕಣಕ್ಕಿಳಿಸಿದ್ದ ಸಿದ್ದೇಶ್ವರ ಅವರ ಕುಟುಂಬಕ್ಕೆ ಸೋಲಾಗಿದೆ.
ಜಿಲ್ಲೆಯ ಜನರ ನಾಡಿಮಿಡಿತ ಅರಿತಿದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು, ಚುನಾವಣೆಗೆ ಮುನ್ನ ಮತ್ತು ನಂತರ ಜನರ ಸಂಪರ್ಕ, ಒಡನಾಟ ಕೆಲಸ ಮಾಡಿದೆ. ವಿಜಯಲಕ್ಷ್ಮೀ ಕಾಂಗ್ರೆಸ್ ಗೆ ಈ ಬಾರಿ ಒಲಿದಿದ್ದಾಳೆ. ಜಿಲ್ಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರ ಪ್ರಚಾರ ವರ್ಕ್ ಔಟ್ ಆಗಿದೆ. ಮೋದಿ ಅಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಚ್ಚಿಕೊಂಡು ಹೋಗಲಿಲ್ಲ. ಕುರುಬ ಸಮುದಾಯ, ಶಾಮನೂರು ಕುಟುಂಬದ ಬಲ, ಅಹಿಂದ ವರ್ಗದ ಶಕ್ತಿ ಸಿಗುತ್ತೆ ಎಂದುಕೊಂಡಿದ್ದ ಪ್ರಭಾ ಮಲ್ಲಿಕಾರ್ಜುನ್ ರಿಗೆ ಫಲ ಕೊಟ್ಟಿದೆ. ಜೊತೆಗೆ ಲಿಂಗಾಯತ ಸಮುದಾಯವೂ ಕೈ ಹಿಡಿದಿದೆ.
ಲೋಕಸಭಾ ಕ್ಷೇತ್ರದ ಹರಪನಹಳ್ಳಿ ಸೇರಿದಂತೆ ಏಳು ಶಾಸಕರ ಬಲ ಕಾಂಗ್ರೆಸ್ ಗೆ ಇತ್ತು., ಶಾಸಕರು, ಮುಖಂಡರು, ಕಾರ್ಯಕರ್ತರ ಒಗ್ಗಟ್ಟಿನ ಕೆಲಸ ಚುನಾವಣೆಯಲ್ಲಿ ಕೆಲಸ ಮಾಡಿದೆ. ಈ ಮೂಲಕ ಲಿಂಗಾಯತ ಸಮುದಾಯದ ಕೃಪೆಯಿರದಿದ್ದರೆ ಇಲ್ಲಿ ಗೆಲುವು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ.
ಪ್ರಭಾ ಮಲ್ಲಿಕಾರ್ಜುನ್ ಪರಿಚಯ:
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಕೃಷಿ ಹಿನ್ನೆಲೆಯ ಗೌಡ್ರು ಕುಟುಂಬದಲ್ಲಿ 1976ರ ಮಾರ್ಚ್ 15ರಂದು ಗಿರಿಜಮ್ಮ ಮತ್ತು ದಿವಂಗತ ಕೆ.ಜಿ ಪರಮೇಶ್ವರಪ್ಪರವರ ಪುತ್ರಿಯಾಗಿ ಜನಿಸಿದರು. ಹರಿಹರದ ಕುಮಾರ ಪಟ್ಟಣಂ ನ ಫಾಲಿ ಫೈಬರ್ ಸಿಬಿಎಸ್ಇ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣವನ್ನು ಮುಗಿಸಿ ನಂತರ ದಾವಣಗೆರೆಯ ಬಾಪೂಜಿ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನದಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿದ್ದಾರೆ.
ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರೊಂದಿಗೆ ವಿವಾಹದ ನಂತರ ಅವರ ಕುಟುಂಬದ ಸಾಮಾಜಿಕ, ವ್ಯಾಪಾರ ಮತ್ತು ರಾಜಕೀಯಕ್ಕೆ ಸಂಬಂಧಪಟ್ಟ ಕೆಲಸಗಳಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬೆಂಬಲವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದಾರೆ.
ದಾವಣಗೆರೆ ಭಾಗ್ಯದೇವತೆ ಡಾ. ಪ್ರಭಾ ಮಲ್ಲಿಕಾರ್ಜುನ್. ದೊಡ್ಮನೆಯ ಸರಳತೆಯ ಸಾಕಾರಮೂರ್ತಿ. ಬಡವರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲಾ ವರ್ಗದವರ ಪಾಲಿನ ಆಶಾಕಿರಣ. ರಾಷ್ಟ್ರ ರಾಜಕಾರಣಕ್ಕೆ ಧುಮುಕಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಈಗ ಚಿರಪರಿಚಿತ ಹೆಸರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪರ ಸೊಸೆಯಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಧರ್ಮಪತ್ನಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರದ್ದು ಸರಳತೆಯ, ಮಮತೆಯ, ಕರುಣಾಮಯಿ.
ಕಳೆದ 25 ವರ್ಷಗಳಿಂದಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಎಂದಿಗೂ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಶಾಮನೂರು ಶಿವಶಂಕರಪ್ಪರು ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ರ ಚುನಾವಣೆಯಲ್ಲಿ
ಸಕ್ರಿಯವಾಗಿ ಓಡಾಡಿದವರು, ಶ್ರಮಿಸಿದವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾವ ಹಾಗೂ ಪತಿ ಗೆಲುವಿಗೆ ಟೊಂಕಕಟ್ಟಿ ನಿಂತವರು. ಮನೆ ಮನೆಗೆ ಭೇಟಿ ನೀಡಿ ಮತದಾರರ ಮನಗೆದ್ದವರು. ಪ್ರಭಾ ಮಲ್ಲಿಕಾರ್ಜುನ್ ಅವರೆಂದರೆ ಅಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ, ನೆರವು ನೀಡುವ, ಕಷ್ಟಕ್ಕೆ ಮರಗುವ, ಆರ್ಥಿಕವಾಗಿ ಸಹಾಯ ಮಾಡುವ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುವ ನಾಯಕಿ.
ನಾಗಮ್ಮ ಕೇಶವಮೂರ್ತಿ ಅವರ ಬಳಿಕ ದಾವಣಗೆರೆ ಜಿಲ್ಲೆಯಲ್ಲಿ ರಾಜಕಾರಣದಲ್ಲಿ ಉದಯಿಸಿರುವ ರಾಜಕಾರಣದ ಜನನಾಯಕಿ. ಯಾರೇ ಮನೆ ಬಾಗಿಲಿಗೆ ಬಂದರೂ ಸಹಾಯ ಮಾಡುವ, ಎಸ್. ಎಸ್. ಮಲ್ಲಿಕಾರ್ಜುನ್ ಅವರು ಇಲ್ಲ ಎಂಬ ಕೊರಗು ನೀಗಿಸುವಂತೆ ಕೆಲಸ ಮಾಡಿಕೊಡುವ, ಜನರೊಟ್ಟಿಗೆ ವ್ಯವಹರಿಸುವ, ಗೌರವಿಸುವ, ಸರಳತೆಯ ಮೂರ್ತಿಯಾಗಿ ನಿಂತಿದ್ದಾರೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಚಿರಪರಿಚಿತ:
ಎಸ್. ಎಸ್. ಕೇಸ್ ಟ್ರಸ್ಟ್ ನ ಲೈಫ್ ಟ್ರಸ್ಟಿ, ಎಸ್.ಎಸ್. ಕೇರ್ ಟ್ರಸ್ಟ್ ಹಾಗೂ ಅಡಳಿತ ಮಂಡಳಿ ಸದಸ್ಯರು, ಬಾಪೂಜಿ ವಿದ್ಯಾಸಂಸ್ಥೆ. ಡಾ. ಶಾಮನೂರು ಶಿವಶಂಕರಪ್ಪ ಎಸ್.ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಸ್ಟಿ ಆಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ತಮ್ಮ ಟ್ರಸ್ಟ್ ಮೂಲಕ ಬಿಪಿಎಲ್ ಕಾರ್ಡ್ ದಾರರಿಗೆ ಹಲವಾರು ಉಚಿತ ಯೋಜನೆಗಳನ್ನು ನೀಡಿದ್ದರು.
ಸಮಾಜಮುಖಿ ಸೇವೆಗಳು:
- 385 ಮಹಿಳೆಯರಿಗೆ ಉಚಿತ ಹೆರಿಗೆ ಹಾಗೂ ಜನಿಸಿದ ಮಗುವಿನ ಆರೈಕೆ.
- 434 ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ.
- ಡಯಾಲಿಸಿಸ್ ಚಿಕಿತ್ಸೆ ಅವಶ್ಯಕತೆ ಇರುವ 2817 ರೋಗಿಗಳಿಗೆ ಉಚಿತವಾಗಿ 16437 ಬಾರಿ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ.
- 1038 ಮಹಿಳೆಯರಿಗೆ ಟ್ರಸ್ಟ್ ಆರೋಗ್ಯ ಶಿಬಿರದ ಮೂಲಕ ಉಚಿತವಾಗಿ ಸ್ತನ ಕ್ಯಾನ್ಸರ್ ಪರೀಕ್ಷೆ887 ಮಹಿಳೆಯರಿಗೆ ಗರ್ಭ ಕ್ಯಾನ್ಸರ್ ಪರೀಕ್ಷೆ ನಡೆಸಿದ್ದು ಈ ಕಾರ್ಯಕ್ರಮ ಯಶಸ್ವಿಯಾಗಿ ಮುಂದುವರೆಯುತ್ತಿದೆ.
ಪ್ರಭಾ ಮಲ್ಲಿಕಾರ್ಜುನ್ ಅವರು ಸಹ ಸಾಕಷ್ಟು ಸಮಾಮುಖಿ ಕಾರ್ಯ ನಿರ್ವಹಿಸಿದ್ದಾರೆ. ಜನಸೇವೆ, ಸಾಮಾಜಿಕ ಸೇವೆ, ಆರೋಗ್ಯದ ಬಗ್ಗೆ ಕಾಳಜಿ ಸೇರಿದಂತೆ ಜನರಿಗೆ ಹತ್ತಿರವಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿತ್ತು.
ಡಾ. ಪ್ರಭಾ ಮಲ್ಲಿಕಾರ್ಜುನ್ ರವರು ದಾವಣಗೆರೆಯ ಪ್ರತಿಷ್ಠಿತ ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿಯೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಇವರು ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಎಸ್.ಎಸ್ ಕೇರ್ ಟ್ರಸ್ಟ್ ನ ಲೈಫ್ ಟ್ರಷ್ಟಿಯಾಗಿ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಸೇವೆ ನೀಡಿದ್ದಾರೆ.
ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ತಮ್ಮ ಟ್ರಸ್ಟ್ ವತಿಯಿಂದ ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ, ತಾಯಂದಿರು ಮತ್ತು ಮಕ್ಕಳಲ್ಲಿ ಸುಧಾರಿತ ಘೋಷಣೆ, ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು, ಆರೋಗ್ಯ, ಶಿಕ್ಷಣ ಮತ್ತು ವಿದ್ಯಾರ್ಥಿ ವೇತನದ ಅವಕಾಶಗಳನ್ನು ಒದಗಿಸುವ ಹಾಗೂ ಅಂಗನವಾಡಿಗಳಲ್ಲಿ ರಕ್ತಹೀನತೆ ಮತ್ತು ಆಪೌಷ್ಟಿಕತೆಯ ಕಾರ್ಯಕ್ರಮಗಳೊಂದಿಗೆ ಮಹಿಳೆಯರಿಗೆ ಉಚಿತ ರೋಗ ನಿರ್ಣಯ ಮತ್ತು ಚಿಕಿತ್ಸಾ ಶಿಬಿರಗಳನ್ನು ಆಯೋಜನೆ ಮಾಡುತ್ತಾ ಬಂದಿರುವುದು ಡಾ. ಪ್ರಭಾ ಮಲ್ಲಿಕಾರ್ಜುನ್ ರ ಸೇವೆಯಾಗಿದೆ.
ಶಾಲಾ ಮಕ್ಕಳಿಗೆ. ಉಚಿತ ದಂತ ಜಾಗೃತಿ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡುವುದು ಟ್ರಸ್ಟ್ ನ ಪ್ರಮುಖ ಕರ್ತವ್ಯ ಮತ್ತು ಅವುಗಳನ್ನು ಡಾ. ಪ್ರಭಾ ಮಲ್ಲಿಕಾರ್ಜುನ್ ತಮ್ಮ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವ ಜನತೆಗೆ ರಕ್ತದಾನದ ಬಗ್ಗೆ ಇರುವ ಭಯ ನಿವಾರಣೆ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳನ್ನು ತಿಳಿಸುವ ಉದ್ದೇಶದಿಂದ ಪ್ರತಿಜ್ಞಾ ಎಂಬ ಕಾರ್ಯಕ್ರಮದಡಿ, ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ತಮ್ಮ ಟ್ರಸ್ಟ್ ಮೂಲಕ ಆಯೋಜನೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮುಗುಳುನಗೆ ಯೋಜನೆಯಡಿ ಶಾಲಾ ಮಕ್ಕಳಿಗೆ ದಂತ ಪರೀಕ್ಷೆ ಹಾಗೂ ತಿಳುವಳಿಕೆ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಎಸ್.ಎಸ್ ಕೇರ್ ಟ್ರಸ್ಟ್ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಸಕಲ ವೈದ್ಯಕೀಯ ಸೌಕರ್ಯ ಹೊಂದಿರುವ ಬಸ್ ಮೂಲಕ, ವೈದ್ಯಕೀಯ ಸೇವೆ ಕಲ್ಪಿಸಲು ಕಷ್ಟ ಇರುವಂತಹ ದೂರ ದೂರದ ಹಳ್ಳಿಗಳಿಗೂ ಸಹ ವೈದ್ಯಕೀಯ ಸೇವೆ ಒದಗಿಸುವ ವಿನೂತನ ಯೋಜನೆ ಪ್ರಾರಂಭಿಸಿದ್ದರು.