SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ಕಳೆದ ಎರಡು ದಿನದಿಂದ ನಗರದಲ್ಲಿ 25ಕ್ಕೂ ಹೆಚ್ಚು ವಾರ್ಡುಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಿದ್ದು, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಬೇಜವಾಬ್ದಾರಿಯಿಂದಾಗಿ ನಗರದ ಜನರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಹರಿಹರದ ರಾಜನಹಳ್ಳಿ ಕುಡಿಯುವ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೇಸಿಗೆಯಲ್ಲಿ ನೀರು ಪೂರೈಸಲು 2 ತಿಂಗಳುಗಳ ಮುನ್ನವೆ ನಗರದ ಕುಡಿಯುವ ನೀರಿನ ಅವಶ್ಯಕತೆ ಅನುಗುಣವಾಗಿ ನೀರನ್ನು ಸಂಗ್ರಹಿಸಬೇಕಾಗಿದ್ದ ಪಾಲಿಕೆ ಕಣ್ಣುಮುಚ್ಚಿ ಕುಳಿತ ಪರಿಣಾಮವನ್ನ ನಗರದ ಜನತೆ ಅನುಭವಿಸಬೇಕಾಗಿದೆ. ನೀರಿನ ಸಂಗ್ರಹಗಾರಗಳು ಬರಿದಾಗಿದ್ದು, ಪ್ರತಿ ದಿನ ಕನಿಷ್ಠ 60ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ರಾಜನಹಳ್ಳಿ ಕೆರೆ ಬರಿದಾಗಿದೆ. ಕುಂಡವಾಡ ಕೆರೆಯಲ್ಲೂ ಮತ್ತು ಟಿವಿ
ಸ್ಟೇಷನ್ ಕೆರೆಯೂ ಕನಿಷ್ಠ ನೀರಿನ ಮಟ್ಟ ತಲುಪಿ ಬರಿದಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜನವರಿ ತಿಂಗಳಲ್ಲೇ ಜಿಲ್ಲಾಡಳಿತಕ್ಕೆ ಭದ್ರಾ ನೀರನ್ನು ಹರಿಸಿ ಬೇಸಿಗೆಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಎರಡು ಬಾರಿ ಮನವಿ ಸಲ್ಲಿಸಲಾಯಿತು. ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ದುರ್ಗಾಂಬಿಕಾ ಜಾತ್ರೆ ಮತ್ತು ಬೇಸಿಗೆಗೆ ಕುಡಿಯುವ ನೀರಿನ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರೂ ಸಹ ಜನರ ಮೂಲಭೂತ ಸಮಸ್ಯೆಗಳಿಗೆ ಕಿವಿ ಕೊಡಬೇಕಿದ್ದ ಕಾಂಗ್ರೆಸ್ ನ ಆಡಳಿತ ಅಧಿಕಾರದ ಮಜವಾದಿತನವನ್ನು ಪ್ರದರ್ಶನ ಮಾಡುತ್ತಾ ನಗರದ ಜನರಿಗೆ ಬರದ ಗ್ಯಾರಂಟಿ ನೀಡಿದೆ. ಕನಿಷ್ಠ ಕುಡಿಯುವ ನೀರನ್ನು ಕೊಡದ ಕಾಂಗ್ರೆಸ್ ಜನರ ಮನೆಗಳಲ್ಲಿ ನೀರಿನ ಕೊಡಗಳು ಬರಿದಾಗಲಿವೆ ಎಂಬುದನ್ನು ಖಚಿತ ಪಡಿಸಿದೆ ಎಂದು ದೂರಿದರು.
ಈ ಕೂಡಲೆ ಜಿಲ್ಲಾಡಳಿತ ಮತ್ತು ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಮುಂದಿನ 45 ದಿನಗಳಿಗೆ ಅವಶ್ಯಕವಿರುವ ನೀರನ್ನು ಡ್ಯಾಮ್ ನಿಂದ ನದಿಗೆ ಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇನ್ನೆರಡು ದಿನಗಳಲ್ಲಿ ನೀರಿನ ವ್ಯತ್ಯಯ ಉಂಟಾದ ವಾರ್ಡ್ ಗಳಿಗೆ ಕುಡಿಯುವ ನೀರನ್ನು ಪೂರೈಸಲು ಅನ್ಯ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಬೇಕು, ಒಂದು ವೇಳೆ ಪಾಲಿಕೆ ಮತ್ತು ಜಿಲ್ಲಾಡಳಿತ ಕುಡಿಯುವ ನೀರು ಪೂರೈಸಲು ವಿಫಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ಉಪ ಮಹಾ ಪೌರರಾದ ಯಶೋಧ ಹೆಗ್ಗಪ್ಪ, ಪಾಲಿಕೆ ಸದಸ್ಯರಾದ ಆರ್.ಶಿವಾನಂದ್, ಎಲ್.ಡಿ ಗೋಣ್ಯಪ್ಪ, ಕೆ.ಎಂ ವೀರೇಶ್, ಶಾಂತ್ ಕುಮಾರ್ ಸೋಗಿ ನೇತೃತ್ವದ ತಂಡ ಮತ್ತು ಬಿ.ಜೆಪಿ ಇತರೆ ಬಿಜೆಪಿ ಪಾಲಿಕೆ ಸದಸ್ಯರು ಹಾಜರಿದ್ದರು.