SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ದಾವಣಗೆರೆ ನಗರದಲ್ಲಿ ಶಕ್ತಿದೇವತೆ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ನಡೆಯುತ್ತಿದ್ದು, ಎಲ್ಲೆಡೆಯಿಂದ ಭಕ್ತಸಾಗರವೇ ಹರಿದು ಬರುತ್ತಿದೆ. ಇನ್ನು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರಲ್ಲದೇ, ವಿಶೇಷ ಪೂಜೆ ಸಲ್ಲಿಸಿದರು.
ಲೋಕಿಕೆರೆ ನಾಗರಾಜ್ ಸೇರಿದಂತೆ ಸ್ನೇಹಿತರು, ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ
ರೇಣುಕಾಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವೈಯಕ್ತಿಕವಾಗಿ ನಾನು ಏನನ್ನೂ ಕೇಳಿಕೊಳ್ಳಲ್ಲ. ನಾಡಿನ ಮಠಾಧೀಶರು ಸೇರಿದಂತೆ ಎಲ್ಲರೂ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಈ ವರ್ಷ ಮಳೆ, ಬೆಳೆ ಚೆನ್ನಾಗಿ ಆಗಲಿ. ಬರಗಾಲದಿಂದ ರೈತರು, ಜನರು ತತ್ತರಿಸಿದ್ದಾರೆ. ಆ ತಾಯಿಯಲ್ಲಿ ಮಳೆ ಕರುಣಿಸು, ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ನಾಡಿನಲ್ಲಿ ಸಮೃದ್ಧ ಮಳೆ, ಬೆಳೆಯಾದರೆ ರೈತರು ಹಾಗೂ ಜನರಿಗೆ ಒಳ್ಳೆಯದಾಗುತ್ತದೆ. ದುರ್ಗಾಂಬಿಕಾ ತಾಯಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ತಾಯಿ ಎಲ್ಲರಿಗೂ ಅನುಗ್ರಹ ಕರುಣಿಸಲಿ ಎಂದು
ಪ್ರಾರ್ಥನೆ ಸಲ್ಲಿಸಿರುವುದಾಗಿ ಮಾಹಿತಿ ನೀಡಿದರು.
ಸೆಲ್ಫಿಗೆ ಮುಗಿಬಿದ್ದ ಜನರು:
ಇನ್ನು ರೇಣುಕಾಚಾರ್ಯ ಆಗಮಿಸುತ್ತಿದ್ದರು ದೇವಸ್ಥಾನಕ್ಕೆ ಬಂದಿದ್ದ ಭಕ್ತರು, ಮಹಿಳೆಯರು, ಯುವಕರು ರೇಣುಕಾಚಾರ್ಯ ಅವರ ಜೊತೆ ಸೆಲ್ಫಿಗೆ ಮುಗಿ ಬಿದ್ದರು. ಏನಾದರೊಂದು ಸುದ್ದಿಯಲ್ಲಿರುವ ರೇಣುಕಾಚಾರ್ಯ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯದ ರಣಕಹಳೆ ಊದಿರುವ ಕಾರಣ ಮತ್ತೆ ಸುದ್ದಿಯಲ್ಲಿದ್ದಾರೆ. ಕೇವಲ ದಾವಣಗೆರೆ ಮಾತ್ರವಲ್ಲ, ಎಲ್ಲೇ ಹೋದರೂ ರೇಣುಕಾಚಾರ್ಯ ಅವರ ಜೊತೆ ಸೆಲ್ಫಿಗೆ ಮಕ್ಕಳು, ಯುವಕರು, ಹಿರಿಯರು, ಕಿರಿಯರು, ಮಹಿಳೆಯರು ಹಾಗೂ ಯುವತಿಯರು ಮುಗಿ ಬೀಳುತ್ತಾರೆ.