ದಾವಣಗೆರೆ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ತಮ್ಮ ಮನೆಯಲ್ಲಿಯೇ ಮತದಾನ ಮಾಡಬಹುದು ಎಂಬ ತೀರ್ಮಾನ ತೆಗೆದುಕೊಂಡಿರುವ ಚುನಾವಣಾ ಆಯೋಗಕ್ಕೆ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ಕೆ.ಎಲ್. ಹರೀಶ್ ಬಸಾಪುರ ಧನ್ಯವಾದ ತಿಳಿಸಿದ್ದಾರೆ.
ಪ್ರತಿ ಚುನಾವಣೆಯಲ್ಲೂ ವಯೋವೃದ್ದರು ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಸಾಧ್ಯವಾಗದೆ, ಜೀವಂತ ಇದ್ದರೂ ಪವಿತ್ರವಾದ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಹ ಸ್ಥಿತಿಯಿತ್ತು, ಆದರೆ ಈಗ ಚುನಾವಣಾ ಆಯೋಗ ತೆಗೆದುಕೊಂಡಿರುವ ನಿರ್ಧಾರದಿಂದ 80 ವರ್ಷ ಮೇಲ್ಪಟ್ಟವರು ತಮ್ಮ ಮನೆಯಲ್ಲಿಯೇ ಮತದಾನ ಮಾಡಬಹುದು ಎಂದಿದ್ದಾರೆ.
ಸಾಧ್ಯವಿದ್ದರೆ ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡಬಹುದು ಎಂಬ ಎರಡು ಅವಕಾಶಗಳನ್ನು ನೀಡಿರುವುದರಿಂದ ವಯೋವೃದ್ಧರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗ ಶೇಕಡ ನೂರಕ್ಕೆ ನೂರರಷ್ಟು ಮತದಾನವಾಗಲಿ ಎಂಬ ಉದ್ದೇಶದಿಂದ ಇಂತಹ ವಿನೂತನ ಪ್ರಯೋಗ ಮಾಡುತ್ತಿದ್ದು, ಯುವಕರು ಸಹ ಮತದಾನದ ಮಹತ್ವ ಅರಿತು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಹರೀಶ್ ಬಸಾಪುರ ವಿನಂತಿಸಿಕೊಂಡಿದ್ದಾರೆ.