SUDDIKSHANA KANNADA NEWS/ DAVANAGERE/ DATE:21-02-2025
ದಾವಣಗೆರೆ: ಮಾನವ ಸಂಪನ್ಮೂಲ ವಿನಾಶಕಾರಿಯಾದ ಮಾದಕ ವಸ್ತುಗಳ ಕಳ್ಳಸಾಗಣೆ ಮತ್ತು ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ.ತಿಳಿಸಿದರು.
ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ತಡೆ ಸಮನ್ವಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಬ್ರೌನ್ ಶುಗರ್ ಸೇರಿದಂತೆ ಮಾದಕ ದ್ರವ್ಯಗಳ ಮಾರಾಟ ಕಾನೂನು ಬಾಹಿರವಾದ ಕೃತ್ಯವಾಗಿದೆ. ಈ ದ್ರವ್ಯಗಳನ್ನು ಯುವಜನರಿಗೆ ನೀಡುವ ಮೂಲಕ ಇದರ ದಾಸರನ್ನಾಗಿ ಮಾಡುವ ಕೆಲವಸವನ್ನು ಮಾಡುವರು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ. ಇಂತಹ ಮಾದಕ ದ್ರವ್ಯಗಳಿಗೆ ಬಲಿಯಾದಲ್ಲಿ ಇದರಿಂದ ಹೊರಬರುವುದು ಕಷ್ಟಕರವಾಗುತ್ತದೆ ಎಂದರು.
ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವುದು ಸಮಾಜದ ಎಲ್ಲರ ಜವಾಬ್ದಾರಿಯಾಗಿದೆ. ಇದರ ಮಾರಾಟ ಮತ್ತು ಸಾಗಣೆ ಕಾನೂನು ಬಾಹಿರವಾಗಿದ್ದರೂ ಅಲ್ಲಲ್ಲಿ ಇಂತಹ ಸೇವನೆ ಪ್ರಕರಣಗಳು ವರದಿಯಾಗುತ್ತಿವೆ. ಜನವರಿ ತಿಂಗಳಲ್ಲಿಯೇ 40 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 14 ಪ್ರಕರಣಗಳು ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ. 5 ವಿದ್ಯಾನಗರ, 8 ಸಿಇಎನ್ ಠಾಣೆಯಿಂದ, 5 ಹರಿಹರ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ರೈಲ್ವೆ ಸ್ಟೇಷನ್ ನಲ್ಲಿ ನಿಗಾವಹಿಸಿ:
ಬಿಹಾರ, ಒರಿಸ್ಸಾ, ಉತ್ತರ ಪ್ರದೇಶದ ಕಡೆಯಿಂದ ದಾವಣಗೆರೆಗೆ ಮಾದಕ ವಸ್ತುಗಳ ಸಾಗಣೆಯಾಗುತ್ತಿದೆ ಎಂಬ ಮಾಹಿತಿ ಇದ್ದು ರೈಲ್ವೆ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ಮಾಡಬೇಕೆಂದು ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಈ ವೇಳೆ ಸೂಚನೆ ನೀಡಿದರು.
ಶಾಲಾ, ಕಾಲೇಜು ವಲಯಗಳಲ್ಲಿ ಕ್ರಮ:
ಶಾಲಾ, ಕಾಲೇಜು, ಹಾಸ್ಟೆಲ್ ಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ಮಾದಕ ವಸ್ತುಗಳ ಮಾರಾಟವಾಗುತ್ತಿದ್ದಲ್ಲಿ ಆಯಾ ಶಾಲೆ, ಕಾಲೇಜಿನವರೇ ಕ್ರಮ ಕೈಗೊಳ್ಳಬಹುದು. ತಮಗೆ ಕ್ರಮ ಕೈಗೊಳ್ಳಲು ಆಗದಿದ್ದಲ್ಲಿ ಪೊಲೀಸ್ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದಲ್ಲಿ ಅಂತಹವರ ಮಾಹಿತಿಯನ್ನು ಗೋಪ್ಯವಾಗಿಡಲಾಗುತ್ತದೆ ಎಂದರು.
ಮೆಡಿಕಲ್ ಶಾಪ್ ಪರಿಶೀಲಿಸಲು ಸೂಚನೆ:
ಜಿಲ್ಲಾ ಔಷಧ ನಿಯಂತ್ರಕ ಅಧಿಕಾರಿಗಳು ಮೆಡಿಕಲ್ ಶಾಪ್ಗಳಲ್ಲಿ ನಿಯಮಬದ್ದವಾಗಿ ಔಷಧಗಳನ್ನು ಮಾರಾಟ ಮಾಡಬೇಕು. ಆದರೆ ಯಾವುದೇ ವೈದ್ಯರ ಸಲಹೆ ಇಲ್ಲದೇ ಸ್ಟಿರಾಯ್ಡ್ ಇರುವ ಔಷಧಗಳನ್ನು ವಿತರಣೆ ಮಾಡಬಾರದು. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಜೊತೆಗೆ ಕೈಗೊಂಡ ಕ್ರಮದ ಬಗ್ಗೆ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಕಟಣೆ ನೀಡಲು ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಮಾದಕ ವಸ್ತುಗಳ ಸಾಗಣೆ, ಮಾರಾಟದ ಬಗ್ಗೆ ಸಾರ್ವಜನಿಕರು, ಸಂಘ, ಸಂಸ್ಥೆಯವರು ಮಾಹಿತಿಯನ್ನು ನೀಡಬಹುದಾಗಿದೆ. ಮಾದಕ ವಸ್ತುಗಳಿಂದ ಯುವ ಜನಾಂಗದ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟಲು ಎಲ್ಲರೂ ಮುಂದೆ ಬರಬೇಕಾಗಿದೆ ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.