SUDDIKSHANA KANNADA NEWS/ DAVANAGERE/ DATE:19-02-2025
ದಾವಣಗೆರೆ: ಛತ್ರಪತಿ ಶಿವಾಜಿ ಮಹಾರಾಜರು, ಛತ್ರಪತಿ ಸಾಂಬಾಜಿ ಮಹಾರಾಜರ ನೈಜ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಮೂಲಕ ಇಂತಹ ಮಹಾನ್ ದೇಶಪ್ರೇಮಿಗಳು, ಹೋರಾಟಗಾರರ ಕೆಚ್ಚೆದೆಯನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಹಿಂದು ಜಾಗರಣಾ ವೇದಿಕೆಯ ಯುವ ಮುಖಂಡ ಸತೀಶ್ ಪೂಜಾರಿ ಕರೆ ನೀಡಿದರು.
ಇಲ್ಲಿನ ಕೆಟಿಜೆ ನಗರ 12ನೇ ಕ್ರಾಸ್ನ ಹಳೆ ಜಿಲ್ಲಾ ಖಜಾನೆ ಪಕ್ಕ ಕುವೆಂಪು ಕನ್ನಡ ಯುವಕರ ಸಂಘ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯೋತ್ಸವ ಅಂಗವಾಗಿ ರಕ್ತದಾನ ಶಿಬಿರದಲ್ಲಿ ಛತ್ರವತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಹಿಂದು ಧರ್ಮದ ರಕ್ಷಣೆ, ಹಿಂದುಗಳು, ಗೋವುಗಳು, ಹಿಂದುತ್ವದ ರಕ್ಷಣೆಗಾಗಿ ಸಮಸ್ತ ಹಿಂದು ಸಮಾಜ ಒಗ್ಗೂಡಿಸಿದ ಶ್ರೇಯ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.
ಇಡೀ ವಿಶ್ವವೇ ಮೆಚ್ಚುವಂತಹ ಅಪ್ರತಿಮ ಹೋರಾಟಗಾರರಾದ ಶಿವಾಜಿ ಮತ್ತು ಸಾಂಬಾಜಿ ಮಹಾರಾಜರ ಕೊಡುಗೆ, ತ್ಯಾಗ, ಬಲಿದಾನವನ್ನು ನಾವ್ಯಾರೂ ಮರೆಯಬಾರದು. ವಿದೇಶೀಯರು ಸಹ ಛತ್ರಪತಿ ಶಿವಾಜಿ ಮಹಾರಾಜರನ್ನು ಸ್ಪೂರ್ತಿಯಾಗಿ ಸ್ವೀಕರಿಸಿದ್ದಾರೆ. ಚಾಣಾಕ್ಷಮತಿಯಾಗಿದ್ದ ಶಿವಾಜಿ ಮಹಾರಾಜರು ತಮ್ಮ ತಾಯಿಯಿಂದ ದೇಶಾಭಿಮಾನಿ, ಧರ್ಮ ನಿಷ್ಟೆಯನ್ನುಮೈಗೂಡಿಸಿಕೊಂಡವರು. ಪರಸ್ತ್ರೀಯರನ್ನು ತಾಯಿಯಂತೆ ಗೌರವಿಸುತ್ತಿದ್ದವರು ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರು ಎಂದು ಅವರು ತಿಳಿಸಿದರು.
ಒಂದು ಕಡೆ ಮೊಘಲ್ ದೊರೆ ಔರಂಗಜೇಬ, ಮತ್ತೊಂದು ಕಡೆ ವಿಜಯಪುರದ ಆದಿಲ್ ಶಾಹಿ ವಂಶ ಹೀಗೆ ಜೀವನದುದ್ದಕ್ಕೂ ಶತೃಗಳ ವಿರುದ್ಧ ಹೋರಾಡುವುದರಲ್ಲೇ ಕಳೆದವರು ಛತ್ರಪತಿ ಶಿವಾಜಿ ಮಹಾರಾಜರು. ತಂದೆಯ ಹೋರಾಟ, ಕಿಚ್ಚು, ಚಾಣಾಕ್ಷತವನ್ನು ಬಾಲ್ಯದಿಂದಲೂ ನೋಡಿಕೊಂಡೇ ಬೆಳೆದ ಛತ್ರಪತಿ ಹಿರಿಯ ಪುತ್ರ ಸಾಂಬಾಜಿ ಮಹಾರಾಜ್ ಸಹ ಮೊಗಲ್ ದೊರೆ ಔರಂಗ ಜೇಬ್ಗೆ ಸಿಂಹಸ್ವಪ್ನವಾಗಿದ್ದವರು. ಕಡೆಗೆ ಔರಂಗಜೇಬನ ಮತಾಂತರದ ಆಮಿಷ ತಿರಸ್ಕರಿಸಿ, ಸುಮಾರು 40 ದಿನ ಮೊಘಲು ದೊರೆಯ ವಿಕೃತತೆ, ಪೈಶಾಚಿಕ ವರ್ತನೆಯಿಂದ ತೀವ್ರ ನೋವುಂಡರೂ ಧರ್ಮ ಬಿಡದ ಸಿಂಹದ ಮರಿ ಸಾಂಬಾಜಿ ಮಹಾರಾಜರು ಎಂದು ಅವರು ಹೇಳಿದರು.
ಛತ್ರಪತಿ ಕುಟುಂಬಕ್ಕೆ, ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಶಿವಾಜಿಯವರ ತಂದೆ ಷಹಾಜಿ ರಾಜೇಯವರ ಸಮಾಧಿ ನಮ್ಮದೇ ದಾವಣಗೆರೆ ಜಿಲ್ಲೆ ಚನ್ನಗಿರಿ ತಾ. ಹೊದಿಗೆರೆ ಗ್ರಾಮದಲ್ಲಿದೆ. ಮಹಾರಾಷ್ಟ್ರದ ಮನೆ ಮಾತಾದ ಶಿವಾಜಿ-ಸಾಂಬಾಜಿ ಮಹಾರಾಜರ ಹಿರಿಯರ ಸಮಾಧಿ ನಮ್ಮ ಜಿಲ್ಲೆಯಲ್ಲಿರುವುದು ಅಭಿಮಾನದ ಸಂಗತಿಯಾಗಿದೆ. ಇಂತಹ ಮಹಾನ್ ಕೆಚ್ಚದೆಯ ಹಿಂದು ಸ್ವರಾಜ್ಯ ಸ್ಥಾಪಕರು, ಧರ್ಮ ರಕ್ಷಕರ ಬಗ್ಗೆ ನಮ್ಮ ಮಕ್ಕಳು, ಯುವ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು ಎಂದು ಸತೀಶ ಪೂಜಾರಿ ಮನವಿ ಮಾಡಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿ ಪೂರ್ವಿಕ ಬೆಳ್ಳಿಯಪ್ಪ ಕನ್ನಡಿಗರು. ಗದಗ ಜಿಲ್ಲೆಯ ಸೊರಟೂರು ಮೂಲದವರು. ಬರ ಹಿನ್ನೆಲೆಯಲ್ಲಿ ಬೆಳ್ಳಿಯಪ್ಪ ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಅಲ್ಲಿಂದ ನಾಲ್ಕನೇ ತಲೆಮಾರಿನವರೇ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರು ಕೇವಲ ಎಲ್ಲಾ ಜಾತಿ, ಧರ್ಮೀಯರ ಬಗ್ಗೆ ಸಹಾನುಭೂತಿ ಹೊಂದಿದ್ದರು. ಶಿವಾಜಿ ಮಹಾರಾಜರ ಖಾಸಾ ಪಡೆಯಲ್ಲಿ ಪಠಾಣರೂ ಇದ್ದರು ಎಂದರು.
ಕುವೆಂಪು ಕನ್ನಡ ಸಂಘದ ಮಂಜುನಾಥ ರಾವ್ ಜಾಧವ್, ಅರಣಿ ತಿಮ್ಮಣ್ಣ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ವೀರಪ್ಪ ಸಾವಂತ್, ಆನಂದಪ್ಪ ಕುರಿಯವರ್, ಭರಣಿ ಹೊಟೆಲ್ ಮಾಲೀಕ ಪರಶುರಾಮರಾವ್ ಸಾಳಂಕೆ, ರವೀಂದ್ರನಾಥ ಡಿ.ಅವತಾಡೆ, ಬಾಬುರಾವ್ ಡಿ.ಅವತಾಡೆ, ವಕೀಲ ಶಂಕರರಾವ್ ಎಂ.ಜಾಧವ್, ಲಕ್ಷ್ಮಿಬಾಯಿ ಚಂದ್ರ ಶೇಖರ, ಅನ್ನಪೂರ್ಣ ರವೀಂದ್ರನಾಥ, ರೇಖಾ ಬಾಬುರಾವ್, ಭೂಮಿಕಾ ಬಿ.ಅವತಾಡೆ, ರಾಘವೇಂದ್ರ ಸಿ.ಕಂಚಿಕೇರಿ, ಸೌಮ್ಯ ರಾಘವೇಂದ್ರ, ಜಗದೀಶ ಕುಮಾರ ಪಿಸೆ, ಸಿದ್ದೇಶ, ಅಣ್ಣೇಶ ರಾವ್, ಶ್ರೀನಿವಾಸ ಕಲ್ಪತರು, ಶ್ರೀಧರ್ ರಾವ್ ಅವತಾಡೆ, ವಿಕಾಸ್ ಈ.ಇಟಗಿ, ವೆಂಕಟೇಶ ಲಲ್ಯಾ, ಜೆ.ಪಿ.ದೀಪಕ್, ಬಿ.ಟಿ.ಲೋಕೇಶ, ಆಟೋ ಬಸವರಾಜ, ಧರ್ಮರಾಜ, ನಾಗೇಶ, ಬಿ.ಮಂಜುನಾಥ ಇತರರು ಇದ್ದರು. ಇದೇ ವೇಳೆ ಅತಿಥಿಗಳು, ಸಂಘದ ಹಿರಿಯರಿಗೆ ಸನ್ಮಾನಿಸಲಾಯಿತು. ಯುವಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ಕನ್ನಡ ನಾಡಿನ ಜೊತೆಗೆ ನಿಕಟ ಸಂಪರ್ಕ: ಕೆ. ಜಿ. ಯಲ್ಲಪ್ಪ
ಒಂದು ಕಡೆ ಮೊಘಲರು, ಮತ್ತೊಂದು ಕಡೆ ವಿಜಾಪುರ ಶಾಹಿ ಪರಿವಾರ ಹಾಗೂ ಮತ್ತೊಂದು ಕಡೆ ವಿದೇಶೀಯರು ಹೀಗೆ ಜೀವನದುದ್ದಕ್ಕೂ ಶಿವಾಜಿ ಹೋರಾಟ ಮಾಡಿಕೊಂಡು ಬಂದವರು. ಕನ್ನಡ ನಾಡಿನ ಜೊತೆಗೆ ಶಿವಾಜಿ ಮಹಾರಾಜರ ವಂಶದ ನಿಕಟ ಸಂಬಂಧವಿದೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಅಭಿಮಾನ, ಗೌರವವನ್ನು ಹೊಂದಿದ್ದ ಶಿವಾಜಿ ಮಹಾರಾಜರು ಹೆಣ್ಣು ಮಕ್ಕಳ ಗೌರವಕ್ಕೆ ಒಂದಿಷ್ಟು ಚ್ಯುತಿ ಬಂದರೂ ಸಹಿಸುತ್ತಿರಲಿಲ್ಲ. ವಿಶ್ವಕ್ಕೆ ಗೆರಿಲ್ಲಾ ಯುದ್ಧ ನೀತಿ ಪರಿಚಯಿಸಿದ್ದು, ಚಾಣಾಕ್ಷ ರಣತಂತ್ರ ಹೆಣೆದ ಮೊದಲಿಗರೆಂಬ ಶ್ರೇಯ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಇಂದಿಗೂ ಅನೇಕ ದೇಶಗಳಿಗೆ ಶಿವಾಜಿ ಸ್ಪೂರ್ತಿಯಾಗಿದ್ದಾರೆ ಎಂದು ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ತಿಳಿಸಿದರು.