SUDDIKSHANA KANNADA NEWS/ DAVANAGERE/ DATE-27-04-2025
ನವದೆಹಲಿ: ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಭಾರತ ಭಾರೀ ಪೆಟ್ಟು ಕೊಟ್ಟಿದೆ. ಪಾಕ್ ನಾಯಕರಂತೂ ವಿಲವಿಲ ಒದ್ದಾಡುತ್ತಿದ್ದಾರೆ. ನೀರು ಸಿಗಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಗೊಡ್ಡು ಬೆದರಿಕೆ ಹಾಕುವುದಕ್ಕೆ ಮುಂದಾಗಿದ್ದಾರೆ.
ಸಿಂಧೂ ನೀರು ಸರಬರಾಜನ್ನು ನಿಲ್ಲಿಸಲು ಭಾರತ ಧೈರ್ಯ ಮಾಡಿಯಾಗಿದೆ. ಅದು “ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂಬುದರ ಅರ್ಥ ಎಂದು ಪಾಕ್ ಸಚಿವ ಹನೀಫ್ ಅಬ್ಬಾಸಿ ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಪ್ರದರ್ಶನಕ್ಕೆ ಅಲ್ಲ, ಮತ್ತು ಅವುಗಳ ಸ್ಥಳಗಳು ದೇಶಾದ್ಯಂತ ಅಡಗಿವೆ ಎಂದು ಅವರು ಘೋಷಿಸಿದ್ದಾರೆ.
ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿದೆ. ಈ ನಡುವೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಒಳಗೊಂಡಂತೆ ಪಾಕಿಸ್ತಾನದ ಶಸ್ತ್ರಾಗಾರವನ್ನು “ಭಾರತಕ್ಕಾಗಿ ಮಾತ್ರ” ಇಡಲಾಗಿದೆ ಎಂದು ಹೇಳಿದ್ದಾರೆ.
ನಮಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದರೆ, ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ನಮ್ಮಲ್ಲಿರುವ ಕ್ಷಿಪಣಿಗಳು, ಅವು ಪ್ರದರ್ಶನಕ್ಕೆ ಅಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಇವೆಲ್ಲವೂ ನಿಮ್ಮ ಮೇಲೆ ಗುರಿಯಾಗಿವೆ” ಎಂದು ಅವರು ಎಚ್ಚರಿಸಿದರು.