ದಾವಣಗೆರೆ:ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಯುಗಾದಿ ಹಬ್ಬದ ನೆಪದಲ್ಲಿ ಸೀರೆ, ಕುಕ್ಕರ್ ಹಂಚುವ ಮೂಲಕ ಮತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಮೇಲೆ ಶೇಕಡಾ 40ರಷ್ಟು ಕಮೀಷನ್ ಸರ್ಕಾರ ಎನ್ನುವ ಕಾಂಗ್ರೆಸ್ ಮುಖಂಡರಿಗೆ ಮಾನ, ಮರ್ಯಾದೆ ಇದೆಯಾ ಎಂದು ಬಿಜೆಪಿ (BJP) ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ (PRESIDENT) ಯಶವಂತರಾವ್ ಜಾಧವ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ (MALLIKARJUN) ಅವರು ಚುನಾವಣೆಯಲ್ಲಿ ಸೋಲಿನ ಭೀತಯಿಂದ ವಾಮ ಮಾರ್ಗದಲ್ಲಿ ಸೀರೆ (SARRY) ಹಾಗೂ ಕುಕ್ಕರ್ ಕೊಟ್ಟು ಗೆಲ್ಲಲು ಪ್ರಯತ್ನ ಮಾಡುತ್ತಿರುವುದು ಜನರಿಗೆ ಗೊತ್ತಾಗಿದೆ ಎಂದು ಹೇಳಿದರು.
ದಾವಣಗೆರೆ (DAVANAGERE) ನಗರವನ್ನು ಸಿಂಗಾಪುರ ಮಾಡಿದ್ದು ನಾವೇ ಎಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರು, ಕೊರೊನಾ ಸಂದರ್ಭದಲ್ಲಿ ಉಚಿತ ಲಸಿಕೆ ನೀಡುತ್ತೇವೆಂದು ನಾಟಕ ಮಾಡಿ ರೋಗಿಗಳಿಂದ ಹಗಲು ದರೋಡೆ ಮಾಡಿ ಬಿಜೆಪಿ ವಿರುದ್ಧ ಈಗ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ (CONGRESS) ನಾಯಕರು ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಹಗಲುಕನಸು ಕಾಣುತ್ತಿದ್ದಾರೆ. ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, 2 ಸಾವಿರ ರೂಪಾಯಿ ಪ್ರತಿ ಯಜಮಾನಿಗೆ ನೀಡುತ್ತೇವೆ ಎಂಬ ನಕಲಿ ಕಾರ್ಡ್ ಹಂಚುತ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ನವರ ಹತಾಶ ಮನೋಭಾವನೆ ತೋರಿಸುತ್ತದೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರ ಮತಗಳಿಂದ ಗೆದ್ದು ಬರುತ್ತಿರುವ ಶಾಮನೂರು ಶಿವಶಂಕರಪ್ಪ ಅವರು, ಈ ರೀತಿ ಆಮೀಷವೊಡ್ಡುತ್ತಿರುವುದು ಏಕೆ? ನಿಮಗೆ ಅಧಿಕಾರ ಯಾಕೆ ಬೇಕು ಎಂಬುದು ಜನರಿಗೆ ಗೊತ್ತಾಗಿದೆ. ಯಾರೋ ಕಟ್ಟಿದ ವಿದ್ಯಾಸಂಸ್ಥೆ ತಮ್ಮ ವಶ ಮಾಡಿಕೊಂಡು ಹಗಲು ದರೋಡೆ ಮಾಡಿದ್ದು ಗೊತ್ತೇ ಇದೆ. ಕಳ್ಳರ ರೀತಿಯಲ್ಲಿ ಚುನಾವಣೆ ಮುಂಚೆ ಸೀರೆ, ಕುಕ್ಕರ್ ಹಂಚುತ್ತಿರಲಿಲ್ಲ. ಪ್ರಾಮಾಣಿಕರಾಗಿದ್ದರೆ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳಿ ಎಂದು ಸಲಹೆ ನೀಡಿದರು.
ದಾವಣಗೆರೆ ತಾಲೂಕಿನ ನಾಗರಕಟ್ಟೆಯಲ್ಲಿ ಕಾಂಗ್ರೆಸ್ ಕುಕ್ಕರ್ ಹಂಚಿದ್ದು, ಅದು ಬ್ಲಾಸ್ಟ್ ಆಗಿ ಮಹಿಳೆಯೊಬ್ಬರ ಕಣ್ಣು ಹೋಗಿದೆ. ಕಳಪೆ ಗುಣಮಟ್ಟದ ವಸ್ತುಗಳನ್ನು ಹಂಚುತ್ತಿದ್ದಾರೆ. ಗುಣಮಟ್ಟದ್ದಾದರೂ ರೇಷ್ಮೇ ಸೀರೆ ಹಾಗೂ ಒಳ್ಳೆಯ ಕಂಪೆನಿಯ ಕುಕ್ಕರ್ ಕೊಡಿ. ಜನರಿಂದ ಕೊಳ್ಳೆ ಹೊಡೆದ ಹಣದಿಂದ ಮತದಾರರನ್ನು ಖರೀದಿ ಮಾಡಲು ಆಗದು. ಕಾಳದಂಧೆಗೆ ಶ್ರೀರಕ್ಷೆಗಾಗಿ ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಅಧಿಕಾರ ಬೇಕು ಎಂದು ವಾಗ್ದಾಳಿ ನಡೆಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.