ದಾವಣಗೆರೆ: ಮೀಸಲಾತಿ ಹೆಚ್ಚಳ ವಿಚಾರ ಚರ್ಚೆಗೆ ಬಂದಾಗ ಜೇನುಗೂಡಿಗೆ ಕೈ ಹಾಕುತ್ತಿದ್ದೀರಾ ಹುಷಾರಾಗಿರಿ ಎಂಬ ಸಲಹೆ ಬಂತು. ಆಗ ನಾನು ಜೇನಿನ ಗೂಡಿಗೆ ಕೈ ಹಾಕ್ತೇನೆ. ಜೇನುನೊಣ ಕಚ್ಚಿದರೂ ಕಚ್ಚಿಸಿಕೊಳ್ಳುತ್ತಿದೆ. ನೊಂದವರ, ಸಾಮಾಜಿಕ ನ್ಯಾಯ ಕೊಡಿಸುವ ಮೂಲಕ ಜೇನುತುಪ್ಪ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ (CM) ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಹೊನ್ನಾಳಿ (HONNALI) ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಭಾಷಣ ಮಾಡಿದವರು ಮುಂದೆ ಹೋದರು, ಮಾಡಿದವರು ಹಿಂದೆ ಇದ್ದೇವೆ. ಕೇವಲ ಭಾಷಣದಿಂದ ಎಲ್ಲವೂ ಆಗದು. ಈಗ ಬದಲಾವಣೆ ಆಗ್ತಿದೆ, ಜಾಗೃತಿ ಮೂಡುತ್ತಿದೆ. ನಾವು ಮಾಡಿರುವ ಕೆಲಸದ ಆಧಾರದ ಮೇಲೆ ಮತ ಕೊಡಿ ಎಂದು ಮನವಿ ಮಾಡಿದರು.
ಮೂರು ವರ್ಷಗಳ ಹಿಂದೆ ಕೆಂಪುಕೋಟೆಯಲ್ಲಿ ನಿಂತು ನರೇಂದ್ರ ಮೋದಿ (NARENDRA MODI) ಹೇಳಿದ್ದರು. ದೇಶದ ಪ್ರತಿ ಮನೆಗೂ ನೀಡುತ್ತೇವೆ ಎಂದಿದ್ದರು. ಈ ನಿಟ್ಟಿನಲ್ಲಿ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದ್ದಾರೆ. ರಾಜ್ಯಗಳನ್ನೂ ವಿಶ್ವಾಸಕ್ಕೆ ಪಡೆದು ಶ್ರಮಿಸುತ್ತಿದ್ದಾರೆ. 130 ಕೋಟಿ ಜನಸಂಖ್ಯೆಗೆ ಮನೆ ಮನೆಗೆ ನೀರು ಕೊಡುವುದು ಅಷ್ಟು ಸುಲಭವಲ್ಲ. 12 ಕೋಟಿ ಮನೆಗಳಿಗೆ ನೀರೊದಗಿಸಿರುವ ಮಹಾನ್ ನಾಯಕ ಮೋದಿ. ರಾಜ್ಯದಲ್ಲಿ 75 ವರ್ಷದಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗುತಿತ್ತು. ನಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ ಮೂರೇ ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ. 1 ಕೋಟಿ 10 ಲಕ್ಷ ಮನೆಗಳಿಗೆ ಕುಡಿಯುವ ನೀರು ಕೊಡುತ್ತಿದ್ದೇವೆ. ಇದು ನಮ್ಮ ಬದ್ಧತೆ. . ನಾವು ಮಾಡಿರುವ ಕಾರ್ಯಕ್ರಮಗಳ ಆಧಾರದಲ್ಲಿ ಮತ ನೀಡಬೇಕು ಎಂದರು.
ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ ಸಿಎಂ ಬೊಮ್ಮಾಯಿ ಅವರು, ಸಾಮಾಜಿಕ ನ್ಯಾಯ ಕೇವಲ ಭಾಷಣದಲ್ಲಿತ್ತು. ಅದನ್ನು ಜಾರಿಗೆ ತಂದಿದ್ದು ಬಿ. ಎಸ್. ಯಡಿಯೂರಪ್ಪ. ಎರಡು ವರ್ಷ ಭಾರೀ ಪ್ರವಾಹ ಬಂದಿತ್ತು. ಆಗ ಮುಖ್ಯಮಂತ್ರಿಯಾಗಿದ್ದವರು ಬಿಎಸ್ ವೈ. ಮನೆ ಕಳೆದುಕೊಂಡು ಜನರು ಸಂಕಷ್ಟದಲ್ಲಿದ್ದರು. ಇದನ್ನು ಕಣ್ಣಾರೆ ನೋಡಿದ ಅವರು ಪೂರ್ತಿ ಬಿದ್ದ ಮನೆಗಳಿಗೆ 5 ಲಕ್ಷ ರೂಪಾಯಿಗೆ ಹೆಚ್ಚಿಸಿ ಪರಿಹಾರ ನೀಡಿದರು. ಅರ್ಧಬರ್ಧ ಮನೆಗಳಿಗೆ 3 ಲಕ್ಷ ರೂಪಾಯಿ ಘೋಷಿಸಿದರು ಎಂದ ಅವರು ವಿದ್ಯಾನಿಧಿ, ರೈತರಿಗೆ ನೀಡುತ್ತಿರುವ ಸೌಲಭ್ಯಗಳು ಜನರಿಗೆ ತಲುಪಿವೆ. ನಮ್ಮ ಕೆಲಸ ನೋಡಿ ಮತ ನೀಡಿ ಎಂದ್ರು.
ವೇದಿಕೆಯಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಜಿ. ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಮತ್ತಿತರರು ಹಾಜರಿದ್ದರು.