SUDDIKSHANA KANNADA NEWS/DAVANAGERE/DATE:14_10_2025
ದಾವಣಗೆರೆ: ಸಾರ್ವಜನಿಕ ಸ್ಥಳ, ದೇವಸ್ಥಾನ ಸೇರಿದಂತೆ ಸರ್ಕಾರಿ ಜಾಗದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧಿಸಬೇಕೆಂದು ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದು ಸ್ವಾಗತಾರ್ಹ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
READ ALSO THIS STORY: ಭರ್ಜರಿ ಉದ್ಯೋಗಾವಕಾಶ: SSC CPO ಸಬ್-ಇನ್ಸ್ಪೆಕ್ಟರ್ 2861 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಖಾಸಗಿ ಸ್ಥಳಗಳಲ್ಲಿ ಬೈಠಕ್ ಸೇರಿದಂತೆ ಕಾರ್ಯಕ್ರಮ ನಡೆಸಲು ಸರ್ಕಾರ ನಿರ್ಬಂಧ ಹೇರಿಲ್ಲ. ಸರ್ಕಾರಿ ಸ್ಥಳಗಳಲ್ಲಿ ಮಾತ್ರ ಅನುಮತಿ ಬೇಡ ಎಂದಿದ್ದಾರೆ. ಸಿದ್ದರಾಮಯ್ಯ ಅವರೂ ಸಹ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧಿಸುವಂತೆ ಪ್ರಿಯಾಂಕ್ ಖರ್ಗೆ ಅವರು ಒತ್ತಾಯಿಸಿ ಪತ್ರ ಬರೆದಿಲ್ಲ. ಆದ್ರೆ, ಬಿಜೆಪಿ ನಾಯಕರು ಜನರಲ್ಲಿ ತಪ್ಪು ಸಂದೇಶ ನೀಡುತ್ತಿದ್ದಾರೆ. ಆರ್ ಎಸ್ ಎಸ್ ಅನ್ನೇ ಸಂಪೂರ್ಣ ನಿಷೇಧ ಮಾಡುವ ಕುರಿತಂತೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುವುದನ್ನು ಮೊದಲಿನಿಂದಲೂ ಬಿಜೆಪಿ ಮಾಡಿಕೊಂಡೇ ಬರುತ್ತಿದೆ. ಸತ್ಯವನ್ನು ಜನರ ಮುಂದೆ ಹೇಳಲಿ. ಅದನ್ನು ಬಿಟ್ಟು ಸುಳ್ಳು ಹೇಳುತ್ತಲೇ ಗೊಂದಲ ಸೃಷ್ಟಿಸುವುದನ್ನು ಮುಂದಾದರೂ ನಿಲ್ಲಿಸಲಿ ಎಂದು ಸಲಹೆ ನೀಡಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ವೇಳೆ ಆಗಿರುವ ಮತಗಳ್ಳತನ ಬಗ್ಗೆ ಮಾತನಾಡದ ಬಿಜೆಪಿಯವರು ಸಣ್ಮ ಪುಟ್ಟ ವಿಚಾರವನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ವೋಟ್ ಚೋರಿ ಆಗಿರುವುದಕ್ಕೆ ದಾಖಲೆಗಳೇ ಸಿಕ್ಕಿವೆ. ಈ ಬಗ್ಗೆ ಹೋರಾಟ ನಡೆಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾರದರ್ಶಕ ಚುನಾವಣೆ ನಡೆಯುವಂತಾಗಬೇಕು. ಆದರೆ ಮೋಸದಿಂದ ಗೆದ್ದು ಅಧಿಕಾರ ಹಿಡಿದು ಈಗ ಆರ್ ಎಸ್ ಎಸ್ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿ ಕಾಂಗ್ರೆಸ್ ವಿರುದ್ಧ ಜನರು ಆಕ್ರೋಶಗೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ಇಂಥ ನಾಟಕ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.