Site icon Kannada News-suddikshana

ದಾವಣಗೆರೆ ವಿದ್ಯಾನಗರ ಪೊಲೀಸರ ಭರ್ಜರಿ ಬೇಟೆ: ರಾಜಸ್ತಾನ ಮೂಲದ ಮೂವರು ಕಳ್ಳರ ಬಂಧನ, 15,37,800 ರೂ. ಮೌಲ್ಯದ ವಸ್ತು ವಶ!

ದಾವಣಗೆರೆ

SUDDIKSHANA KANNADA NEWS/ DAVANAGERE/DATE:07_09_2025

ದಾವಣಗೆರೆ: ದಾವಣಗೆರೆ ವಿದ್ಯಾನಗರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ್ದ ರಾಜಸ್ತಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಸುಮಾರು.15,37,800 ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ಹರಿಹರ ಸೇರಿ ವಿವಿಧೆಡೆ ಬೈಕ್ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ

ರಾಜಸ್ತಾನದ ಬಿಯಾವರ್ ಜಿಲ್ಲೆಯ ರೈಲ್ರಾ ಪಂಚಾಯತ್ ಸೈದ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಪೂರ್ ತೇಹಸಿಲ್ ನ ಕಾಣೆಚಾ ಗ್ರಾಮದ ಚಾಲಕ ಶ್ಯಾಮ್ ಸಿಂಗ್ (28), ಕಾಬ್ರಾ ಗ್ರಾಮದ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕವರ್ ಪಾಲ್ (24). ಗೋಹಾನಾ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರದ ವಾಸಿ ಚಾಲಕ ಪ್ರತಾಪ್ ಸಿಂಗ್ (33) ಬಂಧಿತ ಆರೋಪಿಗಳು.

ಆರೋಪಿತರಿಂದ 12,97,200/- ರೂ. ಬೆಲೆಯ 162.150 ಗ್ರಾಂ ತೂಕದ ಬಂಗಾರದ ಆಭರಣಗಳು, 1,08,000 ರೂ ಬೆಲೆಯ 1350 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, 95,600 ರೂ ನಗದು, 34,000 ರೂ ಬೆಲೆಯ ಒಟ್ಟು 6 ಮೊಬೈಲ್ ಪೋನಗಳು ಹಾಗೂ 3000 ರೂ ಬೆಲೆ ಎರಡು ವಾಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ: ಅಕ್ಟೋಬರ್ 1 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ರಂಗನಾಥ ರವರು ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

ಆಗಸ್ಟ್ 30ರಂದು ಮಧ್ಯಾಹ್ನ ಸುಮಾರು 2 ಗಂಟೆ ಸಮಯದಲ್ಲಿ ವಿನಾಯಕ ಬಡಾವಣೆ ವಿ ಎಮ್ ಜಿ ಲೇ ಔಟ್ 9 ನೇ ಕ್ರಾಸ್ ರಸ್ತೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದೆ. ಮಾರನೇ ದಿನ  ಅಂದರೆ 31ರಂದು ರಾತ್ರಿ ಸುಮಾರು 9 ಗಂಟೆಗೆ ಬಂದು ನೋಡಿದಾಗ ಮನೆಯ ಬಾಗಿಲು ಇಂಟರ್ ಲಾಕ್ ಬೀಗ ಮುರಿದಿದ್ದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳನ್ನು ಬೆಳ್ಳಿ ಸಾಮಾನುಗಳನ್ನು ಹಾಗೂ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪತ್ತೆ ಮಾಡಿಕೊಡಿ ಎಂದು ವಿದ್ಯಾನಗರ ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ಮನವಿ ಮಾಡಿದ್ದರು.

ವಿದ್ಯಾನಗರ ಠಾಣೆ ನಿರೀಕ್ಷಕಿ ವೈ. ಎಸ್. ಶಿಲ್ಪಾ ಅವರ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ರಾಜ್ಯದ ಸೂರತ್ ಸಿಟಿ ಸಾರೋಲಿ ಪೊಲೀಸ್ ಠಾಣೆಯ ಪೊಲೀಸರ ಸಹಕಾರದಿಂದ ರಾಜಸ್ತಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿತರ ಹಿನ್ನೆಲೆ:

ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ, ಹಳಿಯಾಳ ಠಾಣೆ, ಧಾರವಾಡ, ತುಮಕೂರು ಬಡಾವಣೆ, ತಿಪಟೂರು, ಮದ್ಯಪ್ರದೇಶದ ಭೂಪಾಲ್ ನಲ್ಲಿ ಸೇರಿದಂತೆ ವಿವಿಧ ಕಡೆ ಆರೋಪಿತರು 6 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ.

ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ವೈ. ಎಸ್. ಶಿಲ್ಪಾ, ಪಿಎಸ್‌ಐ ರೂಪಾ ತೆಂಬದ್ ಹಾಗು ಸಿಬ್ಬಂದಿಗಳಾದ ಶಂಕರ ಆರ್. ಜಾಧವ, ಆನಂದ ಎಂ., ಬೋಜಪ್ಪ, ಗೋಪಿನಾಥ ನಾಯ್ಕ, ಮಲ್ಲಿಕಾರ್ಜುನ, ಚಂದ್ರಪ್ಪ, ಬಸವರಾಜ, ಸೀಮಾ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

Exit mobile version