Site icon Kannada News-suddikshana

DAVANAGERE BIG NEWS: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರ ನಿಗೂಢ ಸಾವು: ತನಿಖೆಗೆ, ಮೃತರ ದೇಹ ತವರಿಗೆ ತರಿಸಿಕೊಡುವಂತೆ ಕುಟುಂಬಸ್ಥರ ಆಗ್ರಹ

THREE DEATH IN AMERICA

THREE DEATH IN AMERICA

SUDDIKSHANA KANNADA NEWS/ DAVANAGERE/ DATE:19-08-2023

ದಾವಣಗೆರೆ (Davanagere): ಅವರಿಬ್ಬರು ವೃತ್ತಿಯಲ್ಲಿ ಎಂಜಿನಿಯರ್. ಸಂಪಾದನೆ ಮಾಡಬೇಕು. ಎಲ್ಲರಂತೆ ಬದುಕಬೇಕು ಎಂಬ ಕನಸು ಕಂಡಿದ್ದವರು. ಅಮೆರಿಕಾಕ್ಕೆ ಹೋಗಿ ನೆಲೆಸಿದ್ದರು. ತುಂಬು ಕುಟುಂಬಕ್ಕೆ ಒಂದು ಮುದ್ದಾದ ಮಗು ಇತ್ತು. ಕುಟುಂಬವೂ ಚೆನ್ನಾಗಿಯೇ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕುಟುಂಬಸ್ಥರು ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿದೆ.

ಈ ಸುದ್ದಿಯನ್ನೂ ಓದಿ:

Ration Card Status: ಆಗಸ್ಟ್ 31ರೊಳಗೆ ಪಡಿತರ ಚೀಟಿ ಫಲಾನುಭವಿಗಳು ಈ ಕಾರ್ಯ ಪೂರ್ಣಗೊಳಿಸದಿದ್ದರೆ ಸ್ಥಗಿತವಾಗುತ್ತೆ ಹಣ, ಪಡಿತರ…!

ಹೌದು. ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಮೂವರು ಅನುಮಾನಾಸ್ಪದವಾಗಿ ಅಮೆರಿಕಾದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ 9 ವರ್ಷಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದ ದಂಪತಿ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ವಾಸವಿತ್ತು. ಯೋಗೇಶ್ ಹೊನ್ನಾಳ (37), ಪತ್ನಿ ಪ್ರತಿಭಾ ಹೊನ್ನಾಳ (35), ಪುತ್ರ ಯಶ್ ಹೊನ್ನಾಳ (6) ಅನುಮಾನಾಸ್ಪದವಾಗಿ ಮೃತಪಟ್ಟವರು.

ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ನಾಗರಾಜಪ್ಪ ಎಂಬುವವರ ಪುತ್ರರಾದ ಯೋಗೇಶ್ ಹೊನ್ನಾಳ ಅವರು ಎಂಜಿನಿಯರ್ ಆಗಿದ್ದವರು. ಅವರ ಪತ್ನಿ ಪ್ರತಿಭಾ ಹೊನ್ನಾಳ್ ಸಹ ಎಂಜಿನಿಯರ್ ಪದವಿ ಮುಗಿಸಿ ಪತಿ ಜೊತೆ ಅಮೆರಿಕಾಕ್ಕೆ ತೆರಳಿದ್ದರು. ಈ ದಂಪತಿಗೆ ಕಳೆದ ಆರು ವರ್ಷಗಳ ಹಿಂದೆ ಜನಿಸಿದ್ದ ಪುತ್ರನೊಟ್ಟಿಗೆ ವಾಸವಾಗಿದ್ದವರು. ಇಬ್ಬರಿಗೆ ಉತ್ತಮ ಸಂಬಳ ಇತ್ತು. ದಂಪತಿ ಅನೋನ್ಯವಾಗಿದ್ದರು. ಆದ್ರೆ, ಅಮೆರಿಕಾದಲ್ಲಿ ಏನಾಯ್ತೋ ಏನೋ ಗೊತ್ತಿಲ್ಲ. ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರು ದಿಗ್ಭ್ರಮೆಗೆ ಒಳಗಾಗಿದ್ದಾರೆ.

ಯೋಗೇಶ್ ಅವರ ತಂದೆ ಸ್ವಯಂ ನಿವೃತ್ತ ತಹಸಿಲ್ದಾರ್ ಆಗಿದ್ದಾರೆ. ತಾಯಿ ಶೋಭಾ ಹಾಗೂ ತಮ್ಮ ಪುನೀತ್ ಅವರು ದಾವಣಗೆರೆ(Davanagere)ಯಲ್ಲಿ ಸದ್ಯ ವಾಸವಾಗಿದ್ದಾರೆ. ಯೋಗೀಶ್, ಪತ್ನಿ ಪ್ರತಿಭಾ ಹಾಗೂ ಯಶ್ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾವಿನ ನಿಖರ ಕಾರಣ ತಿಳಿಸಬೇಕು ಹಾಗೂ ಮೃತದೇಹಗಳನ್ನು ಭಾರತಕ್ಕೆ ತರಿಸಿಕೊಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಕಣ್ಣೀರಿಟ್ಟ ಯೋಗೇಶ್ ತಾಯಿ:

ಇನ್ನು ಯೋಗೇಶ್ ತಾಯಿ ಅವರಿಗೆ ಈ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ತನ್ನ ಮಗ ಯೋಗೇಶ್, ಸೊಸೆ ಪ್ರತಿಭಾ ಹಾಗೂ ಮೊಮ್ಮಗ ಯಶ್ ಇನ್ನಿಲ್ಲ ಎಂಬುದನ್ನು ಕೇಳಿ ತಡೆದುಕೊಳ್ಳಲು ಆಗಿಲ್ಲ. ಆಗಿನಿಂದಲೂ ಕಣ್ಣೀರು ಸುರಿಸುತ್ತಲೇ
ಇದ್ದಾರೆ. ಯೋಗೇಶ್ ಅಮೆರಿಕಾಕ್ಕೆ ಹೋದ ಬಳಿಕ ಆಗಾಗ್ಗೆ ಫೋನ್ ಮಾಡುತ್ತಿದ್ದ. ಆರೋಗ್ಯ ವಿಚಾರಿಸುತ್ತಿದ್ದ. ಸೊಸೆ ಸಹ ಚೆನ್ನಾಗಿಯೇ ಮಾತನಾಡಿಸುತ್ತಿದ್ದಳು. ಮೊಮ್ಮಗನೂ ಸಹ ಅಷ್ಟೇ. ಮೂವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಆಘಾತ ಆಗಿದೆ. ಹೇಗಾಯ್ತು ಅನ್ನೋದು ಗೊತ್ತಾಗುತ್ತಿಲ್ಲ. ಚೆನ್ನಾಗಿದ್ದ ಸಂಸಾರ ಇಲ್ಲ ಎಂದರೆ ಹೇಗೆ ಅರಗಿಸಿಕೊಳ್ಳುವುದು ಎಂದು ಯೋಗೇಶ್ ತಾಯಿ ಶೋಭಾ ಅವರು ಕಣ್ಣೀರಿಟ್ಟರು.

ಪುತ್ರ, ಸೊಸೆ, ಮೊಮ್ಮಗನ ಮೃತದೇಹ ದಾವಣಗೆರೆಗೆ ತರಿಸಿಕೊಡಿ. ಕೊನೆಯದಾಗಿ ಅವರ ಮುಖ ನೋಡುತ್ತೇನೆ. ಏನಾಯ್ತು ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ನೋವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.

ಮೃತದೇಹ ತವರಿಗೆ ತರಿಸುವಂತೆ ಆಗ್ರಹ:

ಯೋಗೇಶ್, ಪ್ರತಿಭಾ ಹಾಗೂ ಯಶ್ ರ ಮೃತದೇಹ ದಾವಣಗೆರೆಗೆ ತರಿಸುವಂತೆ ಕುಟುಂಬಸ್ಥರು, ಸ್ನೇಹಿತರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಮೂವರ ಸಾವಿನ ಕುರಿತಂತೆ ತನಿಖೆ ಆಗಬೇಕು. ಯಾಕೆ ಈ ಘಟನೆ ನಡೆದಿದೆ
ಎಂಬುದು ಗೊತ್ತಿಲ್ಲ. ಅವರಿಗೇನಾಯ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಗೃಹ ಸಚಿವ ಜಿ. ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸರ್ಕಾರವು ಮೃತದೇಹ ತರಿಸಿಕೊಡಲು ಕ್ರಮ ಕೈಗೊಳ್ಳಬೇಕು. ಸಾವಿಗೆ ನಿಖರತೆ ಗೊತ್ತಾಗಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

ನಿಗೂಢ ಸಾವು:

ಈ ಮೂವರು ಸಾವು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಯಾಕಾಗಿ ಆಗಿರಬಹುದು ಎಂಬ ಸ್ಪಷ್ಟತೆ ಯಾರಿಗೂ ಇಲ್ಲ. ಅಲ್ಲಿ ಏನಾದರೂ ದಾಳಿ ಮಾಡಿ ಕೊಂದು ಹಾಕಲಾಗಿದೆಯಾ? ಬೇರೆ ಏನಾದರೂ ಆಗಿದೆಯಾ? ಬೆಂಕಿ ಅನಾಹುತವಾಗಿದೆಯಾ? ಯಾರಾದರೂ ಹತ್ಯೆ ಮಾಡಿದ್ದಾರಾ ಎಂಬುದೂ ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಟ್ಟಿನಲ್ಲಿ ಮೂವರ ಸಾವು ಎಲ್ಲರನ್ನೂ ದಿಗ್ಭ್ರಮೆಗೆ ಒಳಗಾಗುವಂತೆ ಮಾಡಿದೆ.

 

Exit mobile version