SUDDIKSHANA KANNADA NEWS/DAVANAGERE/DATE:17_12_2025
ದಾವಣಗೆರೆ: ನಗರದ ಕೆಟಿಜೆ ನಗರದ 15ನೇ ತಿರುವಿನ ಒಂದನೇ ಮುಖ್ಯ ರಸ್ತೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ನಿಧನ ಹಿನ್ನೆಲೆಯಲ್ಲಿ ಮೇಣದ ಬತ್ತಿ ಹಚ್ಚಿ 28 ಮತ್ತು 37ನೇ ವಾರ್ಡ್ ನ ನಾಗರಿಕರು ಮೇಣದ ದೀಪ ಬಚ್ಚಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಈ ವೇಳೆ ಮಾತನಾಡಿದ ದಾವಣಗೆರೆ ಉತ್ತರ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಜೇಂದ್ರ ಜಗನ್ನಾಥ್ ಅವರು, ಸತತ ಆರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ, ಸಂಸದರಾಗಿ ದಾವಣಗೆರೆ ಜಿಲ್ಲೆಗೆ ನೀಡಿರುವ ಕೊಡುಗೆ ಅಪಾರ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಜೊತೆಗೆ ವಿಶ್ವ ಮಟ್ಟದಲ್ಲಿ ದಾವಣಗೆರೆ ಗುರುತಿಸುವಂತೆ ಮಾಡಿದ ಕೀರ್ತಿ ಅವರದ್ದು. ಅವರ ಅಗಲುವಿಕೆ ತುಂಬಲಾರದ ನಷ್ಟ. ಈ ನೋವಿನಿಂದ ನಾವು ಇನ್ನೂ ಹೊರ ಬರಲು ಆಗುತ್ತಿಲ್ಲ ಎಂದು ನುಡಿದರು.
ಮಧ್ಯಕರ್ನಾಟಕದ ಧಣಿ ಆಗಿದ್ದ ಅವರು ಅಮೃತಪುರುಷರು, ಕೊಡುಗೈ ದಾನಿ, ಸರ್ವಜನಾಂಗದ ನಾಯಕರೆನಿಸಿಕೊಂಡಿದ್ದರು. ಕೊರೊನಾ ಸಂಕಷ್ಟದಲ್ಲಿ ಸರ್ಕಾರವು ಲಸಿಕೆ ನೀಡದಿದ್ದಾಗ ಸ್ವಂತ ಖರ್ಚಿನಲ್ಲಿ ದಾವಣಗೆರೆ ಜನತೆಗೆ ಆಕ್ಸಿಜನ್, ಲಸಿಕೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ನೀಡಿದ ಪುಣ್ಯಾತ್ಮರು. ಲಸಿಕೆಗೆ ಆರು ಕೋಟಿ ರೂಪಾಯಿಗಳನ್ನು ವೈಯಕ್ತಿಕವಾಗಿ ನೀಡಿದ್ದರು. ಇಂಥ ಮಹಾನ್ ಮಾನವತಾವದಿ ನಿಧನಕ್ಕೆ ಕರ್ನಾಟಕ ರಾಜ್ಯವೇ ಕಂಬನಿ ಮಿಡಿದಿದೆ. ರಾಜ್ಯ ಮತ್ತು ದೇಶಕ್ಕೆ ಭರಿಸಲಾಗದ ನಷ್ಟವಾಗಿದೆ ಎಂದು ಹೇಳಿದರು.
ಕಷ್ಚ ಎಂದು ಹೋದರೆ ಎಂದಿಗೂ ವಾಪಸ್ ಕಳುಹಿಸದ ನಾಯಕರು ಶಾಮನೂರು ಶಿವಶಂಕರಪ್ಪರು. ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಧೀಮಂತರು. ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿ, ರಾಜಕಾರಣಿಯಾಗಿ ಶಿವಶಂಕರಪ್ಪರು ಮಾಡಿರುವ ಕಾರ್ಯಗಳು ಅವಿಸ್ಮರಣೀಯ. ಮುಂದಿನ ಪೀಳಿಗೆಯವರು ನೆನಪಿಟ್ಟುಕೊಳ್ಳುವ ರೀತಿಯಲ್ಲಿ ಬೆಳೆದ ಶಾಮನೂರು ಶಿವಶಂಕರಪ್ಪರ ಹೋರಾಟದ, ಸಾರ್ಥಕ ಬದುಕು ನಮಗೆಲ್ಲರಿಗೂ ಮಾದರಿ ಎಂದು ಗಜೇಂದ್ರ ಜಗನ್ನಾಥ್ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್, ಶಂಕರ್, ಸಂತೋಷ್, ರಾಜೇಶ್, ನಾಗರಾಜ್, ಮೈಲಾರಪ್ಪ, ಲೋಕೇಶ್, ಪ್ರೇಮ್ ಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.





Leave a comment