SUDDIKSHANA KANNADA NEWS/ DAVANAGERE/ DATE:20-08-2023
ದಾವಣಗೆರೆ: ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ವಾಸವಿದ್ದ ದಾವಣಗೆರೆ ಮೂಲದ ಎಂಜಿನಿಯರ್ ದಂಪತಿ, ಪುತ್ರನ ಸಾವಿನ (Death) ಪ್ರಕರಣ ಸಂಬಂಧ ಅನುಮಾನದ ಹುತ್ತ ಬೆಳೆಯಲಾರಂಭಿಸಿದೆ. ಮೂರು ಕಾರಣಗಳು ಗೊತ್ತಾಗಿದ್ದು, ಈ ಪೈಕಿ ಒಂದು ಕಾರಣಕ್ಕೆ ಮೃತಪಟ್ಟಿರಬಹುದು ಎಂದು ತಿಳಿದು ಬಂದಿದೆ.
ಕಳೆದ 9 ವರ್ಷಗಳ ಹಿಂದೆ ಅಮೆರಿಕಾಕ್ಕೆ ತೆರಳಿದ್ದ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ (37), ಪತ್ನಿ ಪ್ರತಿಭಾ ಹೊನ್ನಾಳ (35), ಪುತ್ರ ಯಶ್ ಹೊನ್ನಾಳ (6) ಸಾವನ್ನಪ್ಪಿ ಎರಡರಿಂದ
ಮೂರು ದಿನಗಳ ಬಳಿಕ ಮಾಹಿತಿ ಗೊತ್ತಾಗಿದೆ.
ಈ ಸುದ್ದಿಯನ್ನೂ ಓದಿ:
DAVANAGERE BIG NEWS: ಅಮೆರಿಕಾದಲ್ಲಿ ದಾವಣಗೆರೆ ಮೂಲದ ಮೂವರ ನಿಗೂಢ ಸಾವು: ತನಿಖೆಗೆ, ಮೃತರ ದೇಹ ತವರಿಗೆ ತರಿಸಿಕೊಡುವಂತೆ ಕುಟುಂಬಸ್ಥರ ಆಗ್ರಹ
ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅಮೆರಿಕಾದ ಪೊಲೀಸರು ಯಾವ ಮಾಹಿತಿಯನ್ನೂ ಕೊಡುತ್ತಿಲ್ಲ. ಇದು ಮೃತರ ಪೋಷಕರು, ಸಂಬಂಧಿಕರ ಗೊಂದಲಕ್ಕೂ ಕಾರಣವಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪುತ್ರನಿಗೆ ಶೂಟ್ ಮಾಡಿ ಆ ಬಳಿಕ ಯೋಗೇಶ್ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಪೋಷಕರು ಹಾಗೂ ಸಂಬಂಧಿಕರು ಹೇಳಿದ್ದರು.
ಈ ಕಾರಣಕ್ಕೆ ಸಾವು(Death)?
ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ಪ್ರದೇಶದಲ್ಲಿ ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿರುತ್ತದೆ. ಗ್ಯಾಸ್ ಗೀಜರ್ ಗೆ ಬಳಸುವ ಕಾರ್ಬನ್ ಮೊನಾಕ್ಸೈಡ್ ಲೀಕ್ ಆದರೆ ವಾಸನೆ ಬರುತ್ತದೆ. ಕೆಲವೊಮ್ಮೆ ಸ್ಫೋಟವೂ ಆಗುತ್ತದೆ. ಆದ್ರೆ, ಅಮೆರಿಕಾದಲ್ಲಿ ಹೆಚ್ಚಾಗಿ ಕಾರ್ಬನ್ ಮೊನಾಕ್ಸೈಡ್ ಬಳಕೆ ಮಾಡಲಾಗುತ್ತದೆ. ಮನೆಯಲ್ಲಿಯೂ ಅಲ್ಲಿ ಬಳಸಲಾಗುತ್ತದೆ. ಬೇರೆ ಬೇರೆ ವಸ್ತುಗಳಿಗೂ ಸಹ ಇದನ್ನು ಬಳಕೆ ಮಾಡಲಾಗುತ್ತದೆ. ಇದು ಸೋರಿಕೆ ಆದರೆ ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಅಮೆರಿಕಾದಲ್ಲಿ ಇಂಥ ಘಟನೆಗಳು ಈ ಹಿಂದೆಯೂ ನಡೆದಿವೆ. ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ ಹಾಗೂ ಯಶ್ ಹೊನ್ನಾಳ ಸಾವಿಗೆ ಇದೂ ಕಾರಣವಾಗಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ
ದೇಹದೊಳಗೆ ಹೋದಾಗ ಉಸಿರಾಡಲು ಸಮಸ್ಯೆಯಾಗುತ್ತದೆ. ಇಂಥ ವೇಳೆಯಲ್ಲಿ ಸಾವನ್ನಪ್ಪುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಎರಡನೇ ಕಾರಣ..?
ಅಮೆರಿಕಾದಲ್ಲಿ ಆಗಾಗ್ಗೆ ಶೂಟೌಟ್ ಆಗುತ್ತಲೇ ಇರುತ್ತದೆ. ಅಲ್ಲಿ ಇದು ಸಾಮಾನ್ಯ ಎಂಬ ಪರಿಸ್ಥಿತಿಯೂ ಇದೆ. ಯಾರಾದರೂ ಆಗಂತಕರು ಬಂದು ಶೂಟ್ ಮಾಡಿ ಹೋಗಿರಬಹುದಾ ಎಂಬ ಅನುಮಾನವೂ ಕಾಡಲಾರಂಭಿಸಿದೆ. ಆತ್ಮಹತ್ಯೆಯೋ
ಅಥವಾ ಕೊಲೆಯೋ ಎಂಬ ಬಗ್ಗೆಯೂ ಶಂಕೆ ಕಾಡಲಾರಂಭಿಸಿದೆ. ಶೂಟೌಟ್ ಆಗಿದ್ದರೂ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಸಾವಿಗೆ (Death) ಮೂರನೇ ಕಾರಣ?
ಅಮೆರಿಕಾದ ಬಾಲ್ಟಿಮೋರ್ ಕೌಂಟಿ ಪೊಲೀಸರು ಪ್ರತಿಭಾ ಅವರ ಕುಟುಂಬಕ್ಕೆ ಬೆಳಿಗ್ಗೆ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾದ ಪರಿಣಾಮ ಮೃತಪಟ್ಟಿರಬಹುದು ಎಂದು ಮೊದಲು ಹೇಳಿದ್ದರು. ಸಂಜೆ ಮತ್ತೆ ಪತ್ನಿ ಹಾಗೂ ಪುತ್ರನಿಗೆ ಶೂಟ್ ಮಾಡಿ ಬಳಿಕ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ. ಆಗಂತಕರು ಬಂದು ಶೂಟ್ ಮಾಡಿದ್ದಾರಾ ಎಂಬ ಕುರಿತೂ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ, ಈ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಪ್ರತಿಭಾ ಹೊನ್ನಾಳ ಸಂಬಂಧಿ ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಕುಟುಂಬದಲ್ಲಿ ಸಮಸ್ಯೆ ಇರಲಿಲ್ಲ:
ಅಮೆರಿಕಾದಲ್ಲಿ ವಾಸವಿರುವ ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರು ಹೇಳುವ ಪ್ರಕಾರ ಕುಟುಂಬದಲ್ಲಿ ಯಾವುದೈ ಸಮಸ್ಯೆಗಳಿರಲಿಲ್ಲ. ಕೌಟುಂಬಿಕಾ ಜೀವನ ಚೆನ್ನಾಗಿಯೇ ಸಾಗುತಿತ್ತು. ವೀಕೆಂಡ್ ಪಾರ್ಟಿಗಳಲ್ಲಿ ಖುಷಿಖುಷಿಯಾಗಿ ದಂಪತಿ,
ಪುತ್ರ ಪಾಲ್ಗೊಳ್ಳುತ್ತಿದ್ದರು. ಆರ್ಥಿಕವಾಗಿಯೂ ಸಮಸ್ಯೆ ಇರಲಿಲ್ಲ. ಬೆಂಗಳೂರಿನ ಮೈತ್ರಿ ಡೆವಲಪರ್ಸ್ ನಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದರು. ಅಮೆರಿಕಾದ ಬಾಲ್ತಿಮೇರ್ ನಲ್ಲಿಯೂ ಸ್ವಂತ ಮನೆ ಹೊಂದಿದ್ದರು. ಪತಿ, ಪತ್ನಿ
ದುಡಿಯುತ್ತಿದ್ದರಿಂದ ಹಣಕ್ಕೇನೂ ತೊಂದರೆ ಇರಲಿಲ್ಲ. ಚೆನ್ನಾಗಿಯೇ ಇದ್ದವರು ಅನುಮಾನಸ್ಪಾದವಾಗಿ ಮೃತಪಟ್ಟಿರುವುದು ನಮಗೂ ದಿಗ್ಭ್ರಮೆ ತಂದಿದೆ ಎಂದು ರವಿಕುಮಾರ್ ತಿಳಿಸಿದ್ದಾರೆ.
ತವರು ಮನೆಗೆ ಫೋನ್ ಮಾಡಿದ್ದ ಪ್ರತಿಭಾ:
ಇನ್ನು ಪ್ರತಿಭಾ ಹೊನ್ನಾಳ ತವರಿಗೆ ಫೋನ್ ಮಾಡಿದ್ದಾರೆ. ತಾಯಿ ಜೊತೆ ಮಾತನಾಡಿದ್ದಾರೆ. ಮನೆಯಲ್ಲಿ ಇದ್ದವರ ಜೊತೆಯಲ್ಲಿಯೂ ಚೆನ್ನಾಗಿ ಮಾತನಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೂ ಶುಭಾಶಯ ಕೋರಿದ್ದಾರೆ. ವ್ಯಾಟ್ಸಪ್ ಸಂದೇಶ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೇಶ ರವಾನಿಸಲಾಗಿದೆ. ಅದನ್ನು ನೋಡಿದ್ದಾರೆ. ಮಾತನಾಡುವಾಗ ಯಾವುದೇ ಸಮಸ್ಯೆ ಇದ್ದಂತೆ ಕಂಡು ಬಂದಿಲ್ಲ. ಖುಷಿ ಖುಷಿಯಾಗಿಯೇ ಮಾತನಾಡಿದ್ದಾರೆ. ಮಾತಿನಲ್ಲಿ ಅಳುಕು ಇರಲಿಲ್ಲ. ಆ ನಂತರ ಫೋನ್ ಮಾಡಿಲ್ಲ. ಬಳಿಕ ಅಮೆರಿಕಾ ಪೊಲೀಸರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೇಳುತ್ತಿದ್ದಂತೆ ಶಾಕ್ ಆಗಿತ್ತು. ಮನೆಯಲ್ಲಿದ್ದವರೆಲ್ಲರೂ ಕಣ್ಣೀರು ಹಾಕಲು ಶುರು ಮಾಡಿದರು. ಪ್ರತಿಭಾ ಆಗಲೀ, ಯೋಗೇಶ್ ಆಗಲೀ ಆತ್ಮಹತ್ಯೆ ಮಾಡಿಕೊಳ್ಳುವಂಥ ಮನಸ್ಥಿತಿಯವರಾಗಿರಲಿಲ್ಲ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನೆರಡು ದಿನಗಳಲ್ಲಿ ಗೊತ್ತಾಗಬಹುದು:
ಡೆತ್ ನೋಟ್ ಸಿಕ್ಕಿರುವ ಕುರಿತಂತೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರತಿಭಾ ತಂದೆ ಅಮರ್ ನಾಥ್ ಕುಸಿದು ಹೋಗಿದ್ದಾರೆ. ಪುತ್ರಿಯ ಸಾವಿನ ವಿಚಾರ ತಿಳಿದ ಬಳಿಕ ದಿಗ್ಭ್ರಾಂತರಾಗಿದ್ದಾರೆ. ಮುದ್ದಾದ ಕುಟುಂಬ ಇಲ್ಲ ಎಂದರೆ ಊಹಿಸಿಕೊಳ್ಳುವುದು ಹೇಗೆ ಅಲ್ಲವೇ ಎಂದು ರವಿಕುಮಾರ್ ಹೇಳಿದ್ದಾರೆ.
ನಿಖರ ಕಾರಣ ಗೊತ್ತಾಗಬೇಕು:
ನಮಗೂ ಈ ಮೂರು ಕಾರಣಗಳಲ್ಲಿ ಒಂದು ಆಗಿರಬಹುದು ಅನಿಸುತ್ತಿದೆ. ಅಲ್ಲಿನ ಪೊಲೀಸರು ಯಾವುದೇ ನಿಖರ ಮಾಹಿತಿ ನೀಡುತ್ತಿಲ್ಲ. ಎಲ್ಲರೂ ಗೊಂದಲದಲ್ಲಿದ್ದೇವೆ. ಹಾಗಾಗಿ, ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಸಂಬಂಧಿಕರು ಸ್ಥಳಕ್ಕೆ ಹೋಗುತ್ತಿದ್ದಾರೆ:
ಇನ್ನು ಯೋಗೇಶ್ ಹಾಗೂ ಪ್ರತಿಭಾ ಕುಟುಂಬದ ಸಂಬಂಧಿಕರು ಅಮೆರಿಕಾದಲ್ಲಿಯೇ ಇದ್ದು, ಅವರು ಘಟನೆ ನಡೆದ ಸ್ಥಳಕ್ಕೆ ಹೋಗುತ್ತಿದ್ದಾರೆ. ಅವರು ಅಲ್ಲಿಗೆ ಹೋದ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ. ನಾವು ಸಹ ಈ ಘಟನೆ ಯಾಕಾಗಿರಬಹುದು ಎಂಬ ಗೊಂದಲದಲ್ಲಿ ಇದ್ದೇವೆ. ಸತ್ಯ ಹೊರಗೆ ಬಂದೇ ಬರುತ್ತದೆ. ಇನ್ನು ಎರಡರಿಂದ ಮೂರು ದಿನಗಳಲ್ಲಿ ಸ್ಪಷ್ಟತೆ ಸಿಗಬಹುದು ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.