ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಈಗ ಬಿಜೆಪಿಯೊಂದಿಗಿನ ಮೈತ್ರಿಕೂಟದ ಮುಖ್ಯಮಂತ್ರಿ ಇದೇ ಆತಂಕಗಳನ್ನು ವ್ಯಕ್ತಪಡಿಸಿರುವುದು, ಎನ್ಡಿಎ ಮೈತ್ರಿ ಒಳಗಿನ ಒಡಕನ್ನು ಬಹಿರಂಗಪಡಿಸುತ್ತಿದೆ ಮತ್ತು ಈ ಕಾಯ್ದೆಯ ಬಗ್ಗೆ ಬಿಜೆಪಿಯ ಸಮರ್ಥನೆ ಕೂಡ ಎಂತಹ ಪೊಳ್ಳು ಎಂಬುದಕ್ಕೆ ಸಾಕ್ಷ್ಯ ನೀಡಿದಂತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇದೇ ರೀತಿಯ ಆಕ್ಷೇಪಣೆಗಳನ್ನು ಹಿಂದೆ ನಾವು ಮಾಡಿದಾಗ ಅದನ್ನು ರಾಜಕೀಯ ಪ್ರೇರಿತ ಟೀಕೆ ಎಂದು ತಳ್ಳಿ ಹಾಕಿದವರು, ಈಗೇನು ಹೇಳುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಎರಡು ಕಾಯ್ದೆಗಳ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಅಡಿಯಲ್ಲಿ ಗ್ರಾಮೀಣ ಉದ್ಯೋಗವು ಕಾನೂನುಬದ್ಧ ಹಕ್ಕಾಗಿದ್ದು, ಕೇಂದ್ರ ಸರ್ಕಾರದ ನಿಶ್ಚಿತ ಅನುದಾನದಿಂದ ಜಾರಿಯಾಗುತ್ತಿತ್ತು. ಆದರೆ ಹೊಸ ಕಾಯ್ದೆಯಡಿಯಲ್ಲಿ ಆ ಗ್ಯಾರಂಟಿ ಇಲ್ಲವಾಗಿದೆ. ರಾಜ್ಯಗಳು ಕಾಮಗಾರಿಗಳನ್ನು ಅನುಷ್ಠಾನ ಮಾಡಲು ವೆಚ್ಚವನ್ನು ಹಂಚಿಕೊಳ್ಳಬೇಕಾಗಿದೆ, ಅಲ್ಲದೆ ಅನುದಾನ ಸಿಗುವುದಕ್ಕೆ ಯಾವುದೇ ಕಾನೂನಾತ್ಮಕ ಖಾತರಿ ಸಹ ಇಲ್ಲ. ಜನರ ಹಕ್ಕಾಗಿದ್ದ ಉದ್ಯೋಗ ಭದ್ರತೆಯನ್ನು ಈಗ ಸಂಧಾನದ ವಿಷಯವನ್ನಾಗಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬದಲಾವಣೆಯ ಪರಿಣಾಮಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಒಬ್ಬ ಮುಖ್ಯಮಂತ್ರಿ “ಪರ್ಯಾಯ ಆರ್ಥಿಕ ನೆರವಿಗಾಗಿ” ಖಾಸಗಿ ಮಾತುಕತೆ” ನಡೆಸಬೇಕಾಗಿರುವ ಸ್ಥಿತಿ ಉದ್ಭವಿಸಿದೆ ಎಂದರೆ, ಅನುದಾನ ಪಡೆಯುವ ಅವಕಾಶವು ಕಾನೂನಾತ್ಮಕವಾಗಿರದೆ, ರಾಜಕೀಯ ಲೆಕ್ಕಾಚಾರಗಳ ಮೇಲೆ ನಿರ್ಧರಿತವಾಗಿದೆ ಎಂಬ ಅಂಶ ಸ್ಪಷ್ಟ ಎಂದಿದ್ದಾರೆ.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ, ಅನುದಾನ ಹಂಚಿಕೆಯು ರಾಜಕೀಯ ಹೊಂದಾಣಿಕೆಯ ಮೇಲೆ ನಿರ್ಧರಿತವಾಗುವ ಅಪಾಯವಿದೆ. ಕರ್ನಾಟಕ ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಇದು ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪಾಲುದಾರರು, ವಿಶೇಷವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಈ ಹೊಸ ನಿಯಮಗಳಲ್ಲಿ ಅಸ್ಥಿರತೆ ಕಂಡುಬಂದರೆ ಖಂಡಿತವಾಗಿಯೂ ಇದನ್ನು ಸಂಸತ್ತಿನಲ್ಲಿ ಬಹಿರಂಗವಾಗಿ ಚರ್ಚಿಸಬೇಕು. ಅದನ್ನು ಬಿಟ್ಟು ವಿಶೇಷ ಅನುದಾನವೋ ಅಥವಾ ಖಾಸಗಿ ಭರವಸೆಗಳ ಮೂಲಕವೋ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.




Leave a comment