Home ರಾಹುಲ್ ಗಾಂಧಿ ಸೇರಿ ರಾಷ್ಟ್ರಮಟ್ಟದ ನಾಯಕರ ಮನಗೆದ್ದ ಸಂಘಟನಾ ಚಾಣಕ್ಯ ಸೈಯದ್ ಖಾಲಿದ್ ಅಹ್ಮದ್ ಗೆ ಒಲಿಯುತ್ತಾ ಅದೃಷ್ಟ?
Homeದಾವಣಗೆರೆನವದೆಹಲಿಬೆಂಗಳೂರು

ರಾಹುಲ್ ಗಾಂಧಿ ಸೇರಿ ರಾಷ್ಟ್ರಮಟ್ಟದ ನಾಯಕರ ಮನಗೆದ್ದ ಸಂಘಟನಾ ಚಾಣಕ್ಯ ಸೈಯದ್ ಖಾಲಿದ್ ಅಹ್ಮದ್ ಗೆ ಒಲಿಯುತ್ತಾ ಅದೃಷ್ಟ?

Share
Share

SUDDIKSHANA KANNADA NEWS/DAVANAGERE/DATE:01_01_2026

ದಾವಣಗೆರೆ: ರಾಷ್ಟ್ರಮಟ್ಟದ ಕಾಂಗ್ರೆಸ್ ನಲ್ಲಿ ಯುವ ಪೀಳಿಗೆಯತ್ತ ಚಿತ್ತ ನೆಟ್ಟಿದೆ. ಪಕ್ಷ ಸಂಘಟನೆ, ಕೊಟ್ಟ ಜವಾಬ್ದಾರಿ ನಿಭಾಯಿಸುವ, ಯುವಕರ ಸೆಳೆಯುವ ಸಾಮರ್ಥ್ಯವುಳ್ಳ ನಾಯಕರತ್ತ ಗಮನ ಹರಿಸಿದೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪ್ರಥಮ ಬಾರಿಗೆ ಸಂಸದೆಯಾಗಿರುವ ಪ್ರಿಯಾಂಕಾ ಗಾಂಧಿಯವರ ಯೋಜನೆ ಸಹ ಯುವಪೀಳಿಗೆ ಮನ ಗೆಲ್ಲುವುದು. ಹಾಗಾಗಿ, ಚುನಾವಣೆಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವತ್ತ ಗಮನ ಹರಿಸಿದ್ದಾರೆ. ಈ ಸಾಲಿನಲ್ಲಿ ದಾವಣಗೆರೆಯವರಾದ ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸುತ್ತಿರುವ ಸೈಯದ್ ಖಾಲಿದ್ ಅಹ್ಮದ್ ಮೇಲ್ಪಂಕ್ತಿಯಲ್ಲಿ ಕಾಣಸಿಗುತ್ತಾರೆಂದರೆ ಅತಿಶಯೋಕ್ತಿಯಲ್ಲ.

ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ, ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ ಆಗಿ ಆಯ್ಕೆಯಾಗಿರುವ ಸೈಯದ್ ಖಾಲಿದ್ ಅಹ್ಮದ್ ಅವರು ತಮಗೆ ವಹಿಸಿರುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಅವರೂ ಸೇರಿದಂತೆ ರಾಷ್ಟ್ರಮಟ್ಟದ ನಾಯಕರ ಮನಸೂರೆಗೊಂಡಿರುವ ಯುವ ನಾಯಕ.

2023ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ, ತೆಲಂಗಾಣ ವಿಧಾನಸಭೆ ಚುನಾವಣೆ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣದ ಜುಬಿಲಿ ಹಿಲ್ಸ್ ಉಪಚುನಾವಣೆ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ತನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವ ಮೂಲಕ ಅಖಿಲ ಭಾರತ ಕಾಂಗ್ರೆಸ್ ವಲಯದಲ್ಲಿ ಮಿಂಚು ಹರಿಸಿರುವ ನಾಯಕರೆನಿಸಿಕೊಂಡಿದ್ದಾರೆ. ಮಾತು ಕಡಿಮೆ ಕೆಲಸ ಜಾಸ್ತಿ ಎಂಬಂತೆ ಚುನಾವಣೆಗಳಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ.

ಎರಡನೇ ಬಾರಿಗೆ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿ. ಪಕ್ಷದ ಮತ್ತಷ್ಟು ಬಲವರ್ಧನೆ, ಸಂಘಟನೆ, ಯುವಕರ ಮನ ಗೆಲ್ಲಲು ಆಯೋಜಿಸುವ ಕಾರ್ಯಕ್ರಮಗಳು ಗಮನ ಸೆಳೆಯುವಂಥವು. ಚುನಾವಣೆಗಳಲ್ಲಿ ಹಗಲಿರುಳು ಶಕ್ತಿಮೀರಿ ಕೆಲಸ ನಿರ್ವಹಿಸಿದ ಪರಿ ಆ ರಾಜ್ಯಗಳ ರಾಜ್ಯ ನಾಯಕರ ಮನಗೆದ್ದಿದೆ.

ರಾಹುಲ್ ಗಾಂಧಿ ಜೊತೆ ಭಾರತ್ ಜೋಡೋ ಕಾಲ್ನಡಿಗೆ:

ದೇಶಾದ್ಯಂತ ಸಂಚಲನ ಮೂಡಿಸಿದ್ದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದ ಸೈಯದ್ ಖಾಲಿದ್ ಅಹ್ಮದ್ ಅವರು, ಹೆಚ್ಚಾಗಿ ಗಮನ ಸೆಳೆದರು. ಸಾವಿರಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ರಾಹುಲ್
ಗಾಂಧಿ ಅವರಿಗೆ ಹತ್ತಿರವಾದವರು.

ಪಕ್ಷ ನಿಷ್ಟೆ, ಹಗಲಿರುಳು ಶ್ರಮ, ಜವಾಬ್ದಾರಿ ನಿಭಾಯಿಸಿದ ಪರಿ ಖಾಲಿದ್ ಅಹ್ಮದ್ ಅವರಿಗೆ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಅರಸಿ ಬಂದಿತು. ಈ ಜವಾಬ್ದಾರಿ ತೆಲಂಗಾಣ ರಾಜ್ಯದ ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ವಿಸ್ತರಿಸಿತು. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಲಿದ್ ಅವರು ಯಾತ್ರೆಯಲ್ಲಿ ಹೆಚ್ಚು ಸದ್ದು ಮಾಡಿದವರು.

ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ, ಖಾಲಿದ್ ತಮ್ಮ ಸಾಮಾಜಿಕ ಮತ್ತು ರಾಜಕೀಯ ಕೆಲಸವನ್ನು ಮುಂದುವರಿಸುವ ಮೂಲಕ ಜನರ ಸುಧಾರಣೆಗಾಗಿ ಕೆಲಸ ಮಾಡುವ ಗುರಿ ಹೊಂದಿದ್ದಾರೆ. ಅವಕಾಶಕ್ಕೆ ಕಾಯುತ್ತಿದ್ದು, ಪಕ್ಷ ಏನೇ ಜವಾಬ್ದಾರಿ ವಹಿಸಿದರೂ ಇಲ್ಲ ಎನ್ನದೇ ಕೆಲಸ ಮಾಡುವ ಗುಣ ಎಲ್ಲರಿಗೂ ಅಚ್ಚುಮೆಚ್ಚು.

ದಾವಣಗೆರೆ ಟು ದೆಹಲಿ:

ದಾವಣಗೆರೆಯಲ್ಲಿ 1988ರ ಏಪ್ರಿಲ್ 4ರಂದು ಸೈಯದ್ ಖಾಲಿದ್ ಅಹ್ಮದ್ ಅವರು ಜನಿಸಿದರು. ರಾಜಕೀಯ ಪ್ರಭಾವಶಾಲಿ ಕುಟುಂಬದಿಂದ ಬಂದವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸೈಯದ್ ಸೈಫುಲ್ಲಾ ಅವರ ಪುತ್ರ ಸೈಯದ್ ಖಾಲಿದ್ ಅಹ್ಮದ್.

ತಂದೆ ನೆರಳಿನಲ್ಲಿ ಬೆಳೆದವರು. ತಂದೆ ಆಶಯದಂತೆ ಜನಸೇವೆ ಮಾಡಬೇಕೆಂಬ ಹೆಬ್ಬಯಕೆಯಿಂದ ಇದುವರೆಗೆ ನಿಸ್ವಾರ್ಥದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ತಂದೆ ಹಾದಿಯಲ್ಲಿ  ಮುಂದುವರಿಯುತ್ತಿರುವ ಸೈಯದ್ ಖಾಲಿದ್ ಅಹ್ಮದ್ ಅವರಿಗೆ ರಾಜಕೀಯ ತಂದೆಯಿಂದ ಬಳುವಳಿಯಾಗಿ ಬಂದಿದೆ.

ಎಂಜಿನಿಯರಿಂಗ್ ಪದವೀಧರರು:

ಸೈಯದ್ ಖಾಲಿದ್ ಅಹ್ಮದ್ ಅವರು ಪದವೀಧರರು. ರಾಜಕಾರಣಕ್ಕೆ ವಿದ್ಯಾವಂತರು ಬರಬೇಕೆಂಬ ಕಾಲಘಟ್ಟದಲ್ಲಿ ಸೈಯದ್ ಖಾಲಿದ್ ಅಹ್ಮದ್ ಅವರ ರಾಜಕೀಯ ಹೂವಿನ ಹಾಸಿಗೆ ಆಗಿರಲಿಲ್ಲ. ಹಂತ ಹಂತವಾಗಿ ಮೇಲೆ ಬಂದವರು. ಅದೇ
ರೀತಿಯಲ್ಲಿ ಪಕ್ಷಕ್ಕಾಗಿ ದುಡಿದವರು, ದುಡಿಯುತ್ತಲೇ ಇರುವವರು. ಯಾವುದೇ ಹುದ್ದೆಗಳಿಗೆ ಆಸೆ ಪಡೆದೇ ಇದುವರೆಗೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಸೈಯದ್ ಖಾಲಿದ್ ಅಹ್ಮದ್ ಅವರು ಭವಿಷ್ಯದ ಕಾಂಗ್ರೆಸ್ ನಾಯಕ.
ಎಂಜಿನಿಯರಿಂಗ್ ಪದವಿ ಮುಗಿಸಿ ಕಾನೂನಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಕಾರಣ ಎಲ್ ಎಲ್ ಬಿ ಪೂರೈಸಿರುವ ಪದವೀಧರರು.

ರಾಜಕೀಯ ಜೀವನ:

ಖಾಲಿದ್ ಅವರ ರಾಜಕೀಯ ಪ್ರಯಾಣವು ವಿದ್ಯಾರ್ಥಿ ಜೀವನದ ದಿನಗಳಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ವಿದ್ಯಾರ್ಥಿ ನಾಯಕರಾದವರು. ಪ್ರಜಾಪ್ರಭುತ್ವ
ಪ್ರಕ್ರಿಯೆಯಿಂದ ಪ್ರೇರಿತರಾಗಿ ಯುವ ಕಾಂಗ್ರೆಸ್‌ಗೆ ತತ್ವ, ಸಿದ್ಧಾಂತಗಳಡಿ ಕೆಲಸ ಮಾಡಿದವರು. ವಿದ್ಯಾರ್ಥಿ ಮತ್ತು ಯುವ ರಾಜಕೀಯದಲ್ಲಿ ಪ್ರೇರಕ ಶಕ್ತಿಯಾದರು. ಅನುಭವ ಪಡೆದ ಅವರು ಕಿಸ್ಮಾ ಫೌಂಡೇಶನ್ ಅನ್ನು ಸ್ಥಾಪಿಸಿದರು. ಮಿಲ್ಲತ್ ಶೈಕ್ಷಣಿಕ ಮತ್ತು ಕಲ್ಯಾಣ ಸಂಘ ದ ಜಂಟಿ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಯುವಕರ ಆಶಾಕಿರಣ:

ಭರವಸೆ ಮತ್ತು ಪ್ರಗತಿಯ ಸಂಕೇತವಾಗಿರುವ ಸೈಯದ್ ಖಾಲಿದ್ ಅಹ್ಮದ್ ಅವರು, ಪ್ರಸ್ತುತ ಭಾರತೀಯ ಯುವ ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪುನರಾಯ್ಕೆಯಾದರಲ್ಲದೇ, ತೆಲಂಗಾಣ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ
ಕೂಡ ಹೌದು. ಪಕ್ಷಕ್ಕೆ ಸಲ್ಲಿಸಿದ ಅವಿರತ ಶ್ರಮ ಗುರುತಿಸಿ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಮುಂದುವರಿಸಲು ಇಚ್ಚಿಸಿ, ಆದೇಶ ಹೊರಡಿಸಿರುವುದೇ ಇದಕ್ಕೆ ಸಾಕ್ಷಿ. ತೆಲಂಗಾಣ ರಾಜ್ಯದ ಯುವ ಕಾಂಗ್ರೆಸ್
ಉಸ್ತುವಾರಿಯಾಗಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದಾವಣಗೆರೆಯಿಂದ ದೆಹಲಿಯವರೆಗಿನ ಅವರ ಪ್ರಯಾಣವು ಬದ್ಧತೆ, ಕ್ರಿಯಾತ್ಮಕ ನಾಯಕತ್ವ ಮತ್ತು ಸಾಮಾಜಿಕ ಸೇವೆಯ ಉತ್ಸಾಹಕ್ಕೆ ಸಾಕ್ಷಿ.

ಸಾಮಾಜಿಕ ಸೇವೆ:

ರಾಜಕೀಯೇತರ ಎನ್‌ಜಿಒ “ಕೆಎಸ್‌ಎಸ್ ಫೌಂಡೇಶನ್” ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಅವರ ಆಪ್ತರೊಂದಿಗೆ, ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮತ್ತು ವಿವಿಧ ಸಾಮಾಜಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ಈ ಅತ್ಯುತ್ತಮ ಕಾರ್ಯಕ್ಕೆ 2017 ರಲ್ಲಿ ಅತ್ಯುತ್ತಮ ಸಮಾಜ ಸೇವಕ ಎಂಬ ಬಿರುದು ಬಂದಿತ್ತಲ್ಲದೇ, ಮನ್ನಣೆಗೆ ಪಾತ್ರವಾಗಿತ್ತು.

ಸೈಯದ್ ಖಾಲಿದ್ ಅಹ್ಮದ್ ಅವರ ಸಾಮಾಜಿಕ ಸೇವೆ ಗುರುತಿಸಿ ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

2010 ರಲ್ಲಿ, ಖಾಲಿದ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರಾಗುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಬೇಗನೇ ಪ್ರವರ್ಧಮಾನಕ್ಕೆ ಬಂದರು. 2017 ರ ಗೋವಾ ಚುನಾವಣೆಯನ್ನು ಸಂಘಟಿಸುವುದು ಮತ್ತು ನಂತರ ತೆಲಂಗಾಣ, ತಮಿಳುನಾಡು, ಹರಿಯಾಣ, ದೆಹಲಿ, ಕೇರಳ ಮತ್ತು ಗುಜರಾತ್‌ನಂತಹ ವಿವಿಧ ರಾಜ್ಯಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ವಹಿಸಿ ಸೈ ಎನಿಸಿಕೊಂಡರು.

ದಾವಣಗೆರೆಯಲ್ಲಿ ನಾಯಕತ್ವ:

2017ರಲ್ಲಿ, ಖಾಲಿದ್ ಅವರು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಈ ವೇಳೆ ಸಂಘಟಿಸಿದ ಪರಿ ಎಲ್ಲರ ಗಮನ ಸೆಳೆಯಿತು. ಜಿಲ್ಲೆಯಾದ್ಯಂತ ಯುವ ನಾಯಕರ ಸೃಷ್ಟಿಸಿದರು. ರ್ಯಾಲಿಗಳು, ಪ್ರತಿಭಟನೆಗಳು, ರಕ್ತದಾನ ಶಿಬಿರಗಳು, ಮತದಾರರ ದಾಖಲಾತಿ ಅಭಿಯಾನಗಳು ಮತ್ತು ಜಾಗೃತಿ ಅಭಿಯಾನಗಳನ್ನೂ ಯಶಸ್ವಿಯಾಗಿ ಕಾರ್ಯಗತಗೊಳಿಸಲು ಶ್ರಮಿಸಿದರು.

ರಾಷ್ಟ್ರೀಯ ಮನ್ನಣೆ ಮತ್ತು ಜವಾಬ್ದಾರಿಗಳು:

ಅನುಕರಣೀಯ ದಕ್ಷತೆ ಮತ್ತು ಪಕ್ಷದ ನಿಷ್ಠೆಯಿಂದ ಯುವ ಕಾಂಗ್ರೆಸ್ಸಿಗ ಎಂದು ಗುರುತಿಸಲ್ಪಟ್ಟ ಖಾಲಿದ್ ಅವರನ್ನು 2019 ರಲ್ಲಿ ತಮಿಳುನಾಡಿನ ಭಾರತೀಯ ಯುವ ಕಾಂಗ್ರೆಸ್ ಉಸ್ತುವಾರಿಯ ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಲಾಯಿತು. ಅವರ ಕ್ರಿಯಾತ್ಮಕ ನಾಯಕತ್ವ ಮುಂದುವರೆಯಿತು.

2021 ರ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿಸಿ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಗತ್ಯವಿರುವವರಿಗೆ ಅಗತ್ಯ ಸಾಮಗ್ರಿಗಳು, ಕಷ್ಟದಲ್ಲಿದ್ದವರಿಗೆ ನೆರವು, ಬಡವರಿಗೆ ಆಹಾರ ವ್ಯವಸ್ಥೆ, ಲಸಿಕೆ ಸೇರಿದಂತೆ ಕಷ್ಟಕ್ಕೆ ಸ್ಪಂದಿಸುವ ಮೂಲಕ ಜನರ ಮನ ಗೆದ್ದವರು.

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮರು ಆಯ್ಕೆ:

ದಾವಣಗೆರೆಯಿಂದ ದೆಹಲಿಗೆ ಸೈಯದ್ ಖಾಲಿದ್ ಅಹ್ಮದ್ ಅವರ ಪ್ರಯಾಣವು ಅಚ್ಚರಿ ಜೊತೆಗೆ ಕಷ್ಟಪಟ್ಟರೆ ಪ್ರತಿಫಲ ಸಿಗುತ್ತದೆ ಎಂಬುದಕ್ಕೊಂದು ಉದಾಹರಣೆ. ಸಾಮಾಜಿಕ ಕಾರ್ಯಗಳ ಬಗ್ಗೆ ಅವರಿಗಿರುವ ಬದ್ಧತೆ, ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಕೌಶಲ್ಯಗಳು ಅವರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆಯನ್ನು ಗಳಿಸಿಕೊಟ್ಟಿವೆ.

ಇನ್ನು ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬರುತ್ತಿದ್ದು, ಕಾಂಗ್ರೆಸ್ ನಾಯಕರ ದೃಷ್ಟಿ ಸೈಯದ್ ಖಾಲಿದ್ ಅಹ್ಮದ್ ಅವರತ್ತ ನೆಟ್ಟಿದೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯ ಇಂದು ನಿನ್ನೆಯದಲ್ಲ. ಸುಮಾರು 15 ವರ್ಷಗಳಿಂದಲೂ ಕೇಳಿ ಬರುತ್ತಿದೆ. ಈ ಬಾರಿ ಸೈಯದ್ ಖಾಲಿದ್ ಅಹ್ಮದ್ ಅವರಿಗೆ ಕಾಂಗ್ರೆಸ್ ಉಪಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಈ ಯುವನಾಯಕನಿಗೆ ಅದೃಷ್ಟ ಒಲಿಯಲಿ ಎಂಬುದು ನಿಷ್ಠಾವಂತ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಆಗ್ರಹ.

Share

Leave a comment

Leave a Reply

Your email address will not be published. Required fields are marked *