ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾವಣಗೆರೆಯಲ್ಲಿ ಭರ್ಜರಿ ಪ್ರಚಾರ ನಡೆಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಭರ್ಜರಿ ರೋಡ್ ಶೋ ನಡೆಸಿದರು. ಇದಕ್ಕೂ ಮುನ್ನ ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಿ ಹಿಂದೂಗಳು ಮತ್ತು ಮುಸ್ಲಿಂರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಇಲ್ಲಿನ ಹಳೇಪೇಟೆಯಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದು ತೀರ್ಥ ಸೇವನೆ ಮಾಡಿದರು.
ದುರ್ಗ ಪರಮೇಶ್ವರಿ ಮತ್ತು ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಅವರು ಹಿಂದೂಗಳ ಆರಾದ್ಯದೈವ, ಪವಿತ್ರ ತಾಣಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಪೂಜೆ ಸಲ್ಲಿಸಿದ ಬಳಿಕ ದೇವಿಯಲ್ಲಿ ಪ್ರಾರ್ಥಿಸಿದರು. ತೀರ್ಥ ಸೇವಿಸಿ, ದೇವಿಯು ಎಲ್ಲರಿಗೂ ಒಳಿತು ಮಾಡಲಿ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿ ಎಂದು ಪ್ರಾರ್ಥಿಸಿದರು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು, ಕಾರ್ಯಕರ್ತರು, ಭಕ್ತಾದಿಗಳು ಹಾಜರಿದ್ದರು.
ಇಲ್ಲಿನ ಶಿವಾಜಿನಗರದಲ್ಲಿರುವ ಹಜರತ್ ಖಡಕ್ ಶಾ ವಲಿ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮುಸ್ಲಿಂ ಸಮುದಾಯದ ಮುಖಂಡರು, ಹಿರಿಯರು ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು ಇದ್ದರು. ಸಿಎಂ ಸಿದ್ದರಾಮಯ್ಯರ
ಜೊತೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ದರ್ಗಾಕ್ಕೆ ಭೇಟಿ ನೀಡಿದರು. ಪ್ರಾರ್ಥನೆ ಬಳಿಕ ಹೊರ ಬಂದ ಸಿದ್ದರಾಮಯ್ಯರು ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡಿದರು. ನನಗೆ ಮತ್ತಷ್ಟು ಶಕ್ತಿ ಬರಬೇಕಾದರೆ ಸಮರ್ಥ್ ಶಾಮನೂರು
ಗೆಲ್ಲಿಸಿ. ಯಾವುದೇ ಕಾರಣಕ್ಕೂ ಬಿಜೆಪಿ ಕುತಂತ್ರಕ್ಕೆ ಬಲಿಯಾಗಬೇಡಿ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಮತ್ತಷ್ಟು ನೆರವು ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ಹಾಜರಿದ್ದ ಮುಖಂಡರು ಸಿದ್ದರಾಮಯ್ಯರಿಗೆ ಸಕಾರಾತ್ಮಕವಾಗಿ
ಸ್ಪಂದಿಸಿದರು.
ಕೆಲವರು ವಿರೋಧ ಮಾಡುತ್ತಿದ್ದಾರೆ. ಅವರನ್ನು ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮಾಡುತ್ತೇವೆ. ಮುಸ್ಲಿಂ ಸಮುದಾಯವು ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕುವುದಿಲ್ಲ. ಮತ ಹಾಕುತ್ತೇವೆಂದು ಕೆಲವರು ಹೇಳಿರಬಹುದು. ಅದರಲ್ಲಿ ಬಹುತೇಕರು ಬಿಜೆಪಿಗೆ ಮತ ಹಾಕುವುದಿಲ್ಲ. ಮತ ಹಾಕುವಂತೆ ಕೇಳಿಕೊಳ್ಳುವವರಿಗೆ ಜಾಗೃತಿ ಮೂಡಿಸಿ, ಕೋಮುವಾದಿ ಬಿಜೆಪಿ ಬೆಂಬಲಿಸದಂತೆ ನೋಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯರಿಗೆ ಭರವಸೆ ನೀಡಿದರು.
ಈ ಮೂಲಕ ಸಿದ್ದರಾಮಯ್ಯರು ಹಿಂದೂಗಳು ಮತ್ತು ಮುಸ್ಲಿಂರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಮರ್ಥ್ ಶಾಮನೂರು ಪರ ಭರ್ಜರಿ ಪ್ರಚಾರದ ಜೊತೆಗೆ ದೇವಸ್ಥಾನ ಮತ್ತು ದರ್ಗಾಕ್ಕೆ ಭೇಟಿ ನೀಡಿ ಗಮನ ಸೆಳೆದರು.
ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.
- CM Roadshow Davanagere.
- Congress Campaign
- Davanagere South By-election
- Hazrat Khadak Shah Wali Dargah
- Karnataka Politics
- Minority Votes
- S. S. MALLIKARJUN
- Samarth Shamanur
- Siddaramaiah
- Veerabhadreshwara Temple
- ಅಲ್ಪಸಂಖ್ಯಾತರ ಮತಗಳು
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಪ್ರಚಾರ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ
- ಸಮರ್ಥ್ ಶಾಮನೂರು
- ಸಿದ್ದರಾಮಯ್ಯ
- ಹಜರತ್ ಖಡಕ್ ಶಾ ವಲಿ ದರ್ಗಾ






Leave a comment