SUDDIKSHANA KANNADA NEWS/DAVANAGERE/DATE:06_11_2025
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ವೃಂದಾವನದ ಶ್ರೀ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿರವರ ನೇತೃತ್ವದಲ್ಲಿ ಆಯೋಜಿಸಿರುವ ಬ್ರಜ್ ಯಾತ್ರೆ -2025 ರ ಕಾರ್ಯಕ್ರಮದಲ್ಲಿ ಯಾತ್ರಾರ್ಥಿಗಳನ್ನು ಉದ್ದೇಶಿಸಿ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು.
READ ALSO THIS STORY: ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ 396 ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ತುಂಗಾ ನದಿಗೆ: ಜಲಮಾಲಿನ್ಯ ಹೆಚ್ಚಳ!
ಭಕ್ತಿ ಎಂದರೇನು? ಸಂಪತ್ತು ಅಥವಾ ಅಂತಸ್ತು ಇಲ್ಲದಿದ್ದರೂ ಶುದ್ಧಾಂತಃಕರಣದಿಂದ ದೇವರನ್ನು ಸ್ಮರಿಸುವುದೇ ನಿಜವಾದ ಭಕ್ತಿ ಎಂದು ಬಸವಣ್ಣನವರ ವಚನಗಳ ಮೂಲಕ ಶ್ರೀ ಜಗದ್ಗುರುಗಳವರು ವಿವರಿಸಿದರು.
ಭಾರತೀಯ ಸಮಾಜದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದ ಭಕ್ತಿಪಂಥದ ಸುಳುಹುಗಳು. ಭಕ್ತಿಕನ್ಯೆಯು ದ್ರಾವಿಡ ದೇಶದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು, ಮಹಾರಾಷ್ಟ್ರ ಮತ್ತು ಗುಜರಾತ್ಗಳಲ್ಲಿ ಸಂಚರಿಸಿ, ವೃಂದಾವನದಲ್ಲಿ ಸುಂದರ ಯುವತಿಯಾಗಿ ರೂಪುಗೊಂಡಳೆಂದು ಪದ್ಮಪುರಾಣದಲ್ಲಿ ವರ್ಣಿಸಲಾಗಿರುವ “ಉತ್ಪನ್ನಾ ದ್ರವಿಡೇ ಸಾಹಂ ವೃದ್ಧಿಂ ಕರ್ನಾಟಕೇ ಗತಾ | ಕ್ವಚಿತ್ ಕ್ವಚಿನ್ ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂ ಗತಾ || ವೃಂದಾವನಂ ಪುನಃ ಪ್ರಾಪ್ಯ ನವೀನೇವ ಸುರೂಪಿಣೀ ”ಎಂಬ ಶ್ಲೋಕವನ್ನು ವಿವರಿಸಿ ಭಕ್ತಿಯನ್ನು ಕುರಿತು ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ ಶ್ರೀ ಜಗದ್ಗುರುಗಳವರ ಮಾತುಗಳನ್ನು ಕೇಳಿ ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಭಾವಪರವಶರಾದರು.
ಕಾರ್ಯಕ್ರಮದಲ್ಲಿ ಚೈತನ್ಯ ಪ್ರೇಮ ಸಂಸ್ಥಾನದ ಪೂಜ್ಯ ಶ್ರೀವತ್ಸ ಗೋಸ್ವಾಮಿರವರು, ಸಂಸ್ಥಾನದ ಅಧಿಕಾರಿ ವರ್ಗ, ಯಾತ್ರಾರ್ಥಿ ಪ್ರಮುಖರು, ಅಪಾರ ಸಂಖ್ಯೆಯ ಯಾತ್ರಾರ್ಥಿಗಳು ಉಪಸ್ಥಿತರಿದ್ದರು.
ಬ್ರಜ್ ಯಾತ್ರೆ ಎಂದರೇನು…?
ಬ್ರಜ್ ಯಾತ್ರೆ ಆಧ್ಯಾತ್ಮಿಕ ಯಾತ್ರೆಯಾಗಿದೆ. ಇದನ್ನು ಬ್ರಜ್ ಚೌರಾಸಿ ಕೋಸ್ ಯಾತ್ರೆ ಎಂದೂ ಕರೆಯಲಾಗುತ್ತದೆ, ಈ ಯಾತ್ರೆಯಲ್ಲಿ ಮಥುರಾ, ವೃಂದಾವನ, ಗೋವರ್ಧನ ಬೆಟ್ಟ, ನಂದಗಾಂವ್, ಬರ್ಸಾನಾ ಮತ್ತು ಗೋಕುಲ್ನಂತಹ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಯಾತ್ರಾ ಮಾರ್ಗವು ಮಥುರಾ, ವೃಂದಾವನ ಮತ್ತು ಅದರ ಗಡಿ ರಾಜ್ಯಗಳಾದ ರಾಜಸ್ಥಾನ ಮತ್ತು ಹರಿಯಾಣದ ಮೂಲಕ ಹಾದುಹೋಗುತ್ತದೆ. ಈ ಪರಿಕ್ರಮದ ಒಟ್ಟು ದೂರ 252 ಕಿ.ಮೀ (84 ಕೋಸ್) ಆಗಿದ್ದು, ಅಲ್ಲಿ ಯಾತ್ರಿಕರಿಗೆ 25 ವಿಶ್ರಾಂತಿ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಈ ಮಾರ್ಗದಲ್ಲಿ ಸುಮಾರು 1300 ಹಳ್ಳಿಗಳು, 1100 ಕೊಳಗಳು/ಕುಂಡಗಳು, 36 ಕಾಡುಗಳು ಮತ್ತು ಅನೇಕ ಪರ್ವತಗಳಿವೆ. ಕೃಷ್ಣನಿಗೆ ಸಂಬಂಧಿಸಿದ ಸ್ಥಳಗಳು ಮಾತ್ರವಲ್ಲದೆ ದೇವಾಲಯಗಳು ಮತ್ತು ಅನೇಕ ದೇವರುಗಳು ಮತ್ತು ದೇವತೆಗಳಿಗೆ ಸಂಬಂಧಿಸಿದ ಸ್ಥಳಗಳು ಹಾಗೂ ಯಮುನಾ ನದಿಗೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ.


