SUDDIKSHANA KANNADA NEWS/DAVANAGERE/DATE:14_12_2025
ದಾವಣಗೆರೆ: ದಾವಣಗೆರೆಯ ಗಣ್ಯರು, ಶಿಕ್ಷಣ ಸಂಸ್ಥೆಯ ಹರಿಕಾರರು ಶಾಸಕರು, ಮಂತ್ರಿಗಳು, ಸಮಾಜ ಸುಧಾರಕರಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಇಂದು ನಿಧನರಾದ ವಿಷಯ ತಿಳಿದು ತುಂಬಾ ವೇದನೆಯಾಯಿತು. ಅವರ ಕೊನೆಗಾಲದಲ್ಲೂ ಸಮಾಜಪರ ಚಿಂತನೆಯನ್ನು ಇಟ್ಟುಕೊಂಡಂಥವರು ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.
ಶಾಮನೂರು ಶಿವಶಂಕರಪ್ಪನವರು ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ಭುತ, ಅನುಪಮ, ಅನುಕರಣೀಯ. ವ್ಯಾಪಾರಿಗಳಾಗಿ, ಶಿಕ್ಷಣ ಪ್ರೇಮಿಗಳಾಗಿ, ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷರಾಗಿ, ಕೊಡುಗೈ ದಾನಿಗಳಾಗಿ ಪ್ರಖ್ಯಾತರು. ಸದಾ ಹಸನ್ಮುಖಿಗಳಾಗಿ ಅನೇಕರ ಬದುಕಿಗೆ ಬೆಳಕು ನೀಡಿದವರು. ಅಧಿಕಾರದ, ಶ್ರೀಮಂತಿಕೆಯ ಅಹಂ ಅವರಲ್ಲಿರಲಿಲ್ಲ. ಸರಳ, ಸಜ್ಜನಿಕೆಯ ವ್ಯಕ್ತಿ. ನಾನೇನು ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಚಮಚೆ ಇಟ್ಟುಕೊಂಡು ಬಂದವನಲ್ಲ ಎನ್ನುವ ವಿನಮ್ರತೆ ಅವರಲ್ಲಿತ್ತು ಎಂದಿದ್ದಾರೆ.
ಅಂಥವರ ಅಗಲುವಿಕೆ ಸಮಾಜಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದಂತಹ ನಷ್ಟವನ್ನುಂಟು ಮಾಡಿದೆ. ಆ ನಷ್ಟವನ್ನು ಭರಿಸುವಂಥ ಎಲ್ಲ ಶಕ್ತಿಯನ್ನು ಬಸವಾದಿ ಶಿವಶರಣರು ಅವರ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು ಹಾಗೂ ಮನೆಯ ಇತರೆ ಸದಸ್ಯರಿಗೆ ಕರುಣಿಸಲಿ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.





Leave a comment